ಬೆಂಗಳೂರು, ಡಿಸೆಂಬರ್ 20: ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯ ರೋಚಕ ಹಂತ ತಲುಪಿದೆ. ಗೆಲ್ಲಲು 198 ರನ್ ಟಾರ್ಗೆಟ್ ಪಡೆದ ಕರ್ನಾಟಕ ಸುಲಭ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ, ರಜನೀಶ್ ಗುರ್ಬಾನಿ ದಾಳಿಗೆ ಸಿಲುಕಿದ ಕರ್ನಾಟಕ ಸೋಲಿನ ಭೀತಿ ಎದುರಿಸುತ್ತಿದೆ. ಅಂತಿಮ ದಿನದಂದು ಈ ಪಂದ್ಯ ಗೆದ್ದು, ಫೈನಲ್ ತಲುಪಲು 87 ರನ್ ಬೇಕಿದ್ದು, 3 ವಿಕೆಟ್ ಉಳಿದಿದೆ.
ಈಗ 198ರನ್ ಟಾರ್ಗೆಟ್ ಪಡೆದಿರುವ ಕರ್ನಾಟಕ ಗೆಲ್ಲಲು 87ರನ್ ಬೇಕಿದ್ದು, ನಾಲ್ಕನೆ ದಿನದ ಅಂತ್ಯಕ್ಕೆ 111/7 ಸ್ಕೋರ್ ಮಾಡಿದ್ದು ನಾಯಕ ವಿನಯ್ ಕುಮಾರ್ 19ರನ್ ಹಾಗೂ ಶ್ರೇಯಸ್ ಗೋಪಾಲ್ 1ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದಾರೆ.

ಮಂಗಳವಾರದಂದು ಮೊದಲ ಇನಿಂಗ್ಸ್ನಲ್ಲಿ 116 ರನ್ಗಳ ಮುನ್ನಡೆ ಗಳಿಸಿದ್ದ ಕರ್ನಾಟಕ ತಂಡವು 301ರನ್ನಿಗೆ ಆಲೌಟ್ ಆಯಿತು. ಕರುಣ್ ನಾಯರ್ 153ರನ್ ಗಳಿಸಿದರು. ರಜನೀಶ್ ಗುರ್ಬಾನಿ 5 ಹಾಗೂ ಉಮೇಶ್ ಯಾದವ್ 4 ವಿಕೆಟ್ ಗಳಿಸಿದರು.
ವಿದರ್ಭದ ಪರ ಆಡುತ್ತಿರುವ ಕರ್ನಾಟಕ ಮೂಲದ ಗಣೇಶ್ ಸತೀಶ್ ಅವರು 81ರನ್ ಗಳಿಸಿದರು. ವಾಘಡೆ 49, ಸರ್ವಾತೆ 55ರನ್ ಗಳಿಸಿ ತಂಡದ ಮೊತ್ತವನ್ನು 313ಕ್ಕೇರಿಸಿದರು.
2013-14ರ ರಣಜಿ ಋತುವಿನ ಕರ್ನಾಟಕ ಪರ ಆಡಿ ಫೈನಲ್ನಲ್ಲಿ ಅಮೋಘ ಶತಕ ಬಾರಿಸಿದ್ದ ಗಣೇಶ್ ಅವರು ತಂಡದ ಜಯಕ್ಕೆ ಕಾರಣರಾಗಿದ್ದರು. 2015ರಲ್ಲಿ ವಿದರ್ಭಕ್ಕೆ ವಲಸೆ ಹೋದರು. ಗಣೇಶ್ ಬ್ಯಾಟಿಂಗ್, ಗುರ್ಬಾನಿ ಬೌಲಿಂಗ್ ಕರ್ನಾಟಕಕ್ಕೆ ಮಾರಕವಾಗಿ ಪರಿಣಮಿಸಿದೆ.
ಸಮಸ್ಯೆಗಳು: ಪಂದ್ಯದ ಮೊದಲ ದಿನದಂದು ಕೋಲ್ಕತಾದ ವಾಹನ ದಟ್ಟಣೆಯಿಂದಾಗಿ ಈಡನ್ ಗಾರ್ಡನ್ ನಲ್ಲಿ ಪಂದ್ಯ ಅರ್ಧಗಂಟೆ ವಿಳಂಬವಾಗಿ ಆರಂಭವಾಗಿತ್ತು. ನಾಲ್ಕು ದಿನಗಳಲ್ಲಿ ಮಂದ ಬೆಳಕಿನಿಂದ ಪಂದ್ಯ ಆಗಾಗ ತೊಂದರೆಗೀಡಾಗುತ್ತಲೇ ಇತ್ತು.