
ಲೀಡ್ಸ್, ಜುಲೈ 07: ಕಾಲಘಟ್ಟ. ಈ ಕುರಿತಾಗಿ ರೋಹಿತ್ ಶರ್ಮಾ ಆಗಾಗ ಮಾತನಾಡುತ್ತಲೇ ಇರುತ್ತಾರೆ. ಇದೊಂದು ಪದವಷ್ಟೇ ಅಲ್ಲ. ರೋಹಿತ್ ಪಾಲಿಗೆ ಇದೊಂದು ಅನುಭವ. ಉತ್ತಮ ಕಾಲಘಟ್ಟವನ್ನು ಅವರು ಸದಾ ಎದುರು ನೋಡುತ್ತಾರೆ. ಈ ಅದ್ಭುತ ಕಾಲಘಟ್ಟವು ರೋಹಿತ್ ಪಾಲಿಗೆ ಯಶಸ್ಸಿನ ಮಹಾಪೂರವನ್ನೇ ಹರಿಸಿದೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಕ್ರೀಡಾಪಟುಗಳು ಉತ್ತಮ ಕಾಲಘಟ್ಟದ ಕುರಿತಾಗಿ ಮಾತನಾಡುತ್ತಾರೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಲಭ್ಯವಾಗುವ ಕಾಲವದು. ವೈಫಲ್ಯ ಮತ್ತು ಯಶಸ್ಸು, ಸಂಭ್ರಮ ಮತ್ತು ನೋವನ್ನು ಸರಿದೂಗಿಸುವ ಕಾಲವದು. ಬೇಡದ ಸಂಗತಿಗಳಿಂದ ದೂರ ಉಳಿದು ಶಾಂತಯುತವಾಗಿ ಕಂಡುಕೊಳ್ಳುವ ಕಾಲಘಟ್ಟವದು. ಭೂತ ಮತ್ತು ವರ್ತಮಾನದ ಅರಿವು ಪಡೆದು ವಾಸ್ತವದಲ್ಲಿ ಮಾಡಬೇಕಾಗಿರುವುದೇ ಎಂಬುದನ್ನು ಅರಿತುಕೊಳ್ಳುವ ಕಾಲಘಟ್ಟವದು.
ಅಂದಹಾಗೆ ಇವೆಲ್ಲವನ್ನೂ ಮಾತಿನಲ್ಲಿ ಹೇಳುವುದು ಸುಲಭ. ಆದರೆ ಇಂತಹ ಕಾಲಘಟ್ಟವನ್ನು ಕಂಡುಕೊಳ್ಳುವುದಾದರೂ ಹೇಗೆ? ನಮ್ಮ ಸುತ್ತಮುತ್ತಲಿನ ಹಲವು ಸಂಗತಿಗಳಿಂದ ಹೊರಬಂದು ಇಂಥದ್ದೊಂದು ಉತ್ತಮ ಕಾಲಘಟ್ವನ್ನು ಸೃಷ್ಠಿಸಿಕೊಳ್ಳುವುದಾದರೂ ಹೇಗೆ? ಕಳೆದ 7 ಪಂದ್ಯಗಳಲ್ಲಿ 4 ಶತಕಗಳನ್ನು ಸಿಡಿಸಿರುವುದರ ಪ್ರಭಾವದಿಂದ ತಪ್ಪಿಸಿಕೊಳ್ಳುವುದಾದರೂ ಹೇಗೆ? ಕಳೆದ ಕೆಲ ದಿನಗಳಲ್ಲಿ ಲಭ್ಯವಾದ ಯಶಸ್ಸಿನ ಉತ್ತುಂಗವನ್ನು ಮರೆತು ಮರುದಿನ ಮತ್ತೊಂದು ಯಶಸ್ಸನ್ನು ಎದುರು ನೋಡುವುದಾದರೂ ಹೇಗೆ? ಈ ಪ್ರಶ್ನೆಗಳಿಗೆ ರೋಹಿತ್ ಶರ್ಮಾ ಅವರೇ ಉತ್ತರಿಸಬೇಕು.
ಭಾರತ ತಂಡದ ಉಪನಾಯಕನಿಗೆ ಈ ಬಾರಿಯ ವಿಶ್ವಕಪ್ ನಿಜಕ್ಕೂ ಅದ್ಭುತವಾಗಿ ಮೂಡಿಬಂದಿದೆ. ಟೀಮ್ ಇಂಡಿಯಾದ ಅಂತಿಮ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ಖಾತೆಯಲ್ಲಿ 4 ಶತಕ ಮತ್ತು 544 ರನ್ಗಳೊಂದಿಗೆ ಕಣಕ್ಕಿಳಿದ ರೋಹಿತ್, ಲಸಿತ್ ಮಾಲಿಂಗ, ಕಸುನ್ ರಜಿತ್, ಇಸುರು ಉದನಾ, ತಿಸಾರ ಪೆರೆರಾ ಹಾಗೂ ಧನಂಜಯ ಡಿ'ಸಿಲ್ವಾ ಅವರಂತಹ ಸ್ಟಾರ್ ಬೌಲರ್ಗಳ ಎದುರು ಮತ್ತೊಂದು ದಿಟ್ಟ ಪ್ರದರ್ಶನ ನೀಡಿ 5ನೇ ಶತಕ ಸಿಡಿಸುವ ಮೂಲಕ ಒಟ್ಟು ರನ್ಗಳಿಕೆಯನ್ನು 647ಕ್ಕೆ ವಿಸ್ತರಿಸಿದರು.
ಜಗತ್ತಿನ ಯಾವೊಬ್ಬ ಬ್ಯಾಟ್ಸ್ಮನ್ ಕೂಡ ವಿಶ್ವಕಪ್ ಟೂರ್ನಿಯ ಒಂದೇ ಆವೃತ್ತಿಯಲ್ಲಿ 4ಕ್ಕಿಂತ ಹೆಚ್ಚು ಶತಕ ಗಳಿಸಿಲ್ಲ. ಇದೀಗ ಈ ದಾಖಲೆ ಧೂಳೀಪಟವಾಗಿದೆ. ಜೊತೆಗೆ 2003ರಲ್ಲಿ ಸಚಿನ್ ತೆಂಡೂಲ್ಕರ್ ದಾಖಲಿಸಿದ್ದ 673 ರನ್ಗಳ ದಾಖಲೆಯನ್ನು ಮುರಿಯಲು ರೋಹಿತ್ಗೆ ಇನ್ನು ಕೇವಲ ಐದು ಬೌಂಡರಿಗಳು ಮಾತ್ರವೇ ಬೇಕಿದೆ. ಎಲ್ಲವೂ ಸರಿಯಾಗಿ ಸಾಗಿದರೆ ರೋಹಿತ್ ಅವರ ಅದ್ಭುತ ಕಾಲಘಟ್ಟವು ಅವರನ್ನು ಈ ದಾಖಲೆಯನ್ನೂ ದಾಟುವಂತೆ ಮಾಡಲಿದೆ.
ರೋಹಿತ್ ವೈಯಕ್ತಿಕವಾಗಿಯೂ ತಮ್ಮೊಳಗೆ ಶಾಂತಿ ಕಂಡುಕೊಂಡಿದ್ದಾರೆ. ಅವರು ಹೆಚ್ಚು ಮಾತನಾಡುವವರಲ್ಲ. ಮಾತಿಗಿಂತಲೂ ಮುನ್ನುಗ್ಗಿ ಕೆಲಸ ಮಾಡುವಂತಹ ಆಟಗಾರ ಅವರು. ಇಷ್ಟೇ ಶಾಂತಯುತವಾಗಿ ಅವರು ಕ್ರೀಸ್ನಲ್ಲೂ ಕಾಲ ಕಳೆಯುತ್ತಾರೆ. ಕ್ರೀಸ್ ಜೊತೆಗಿನ ಬಾಂಧವ್ಯ ಅವರಲ್ಲಿ ಪ್ರಬುದ್ಧತೆಯನ್ನು ತಂದಿದೆ. ಜೊತೆಗೆ ಒಬ್ಬ ತಂದೆಯಾಗಿ ಇರುವಂತಹ ಜವಾಬ್ದಾರಿಗಳು ಕೂಡ ಅವರಲ್ಲಿ ಇದೆ. ಎಲ್ಲಕ್ಕಿಂತಲೂ ಮಿಗಿಲಾಗಿ ಸಾಧಿಸಬೇಕು ಎಂಬ ಛಲ ಅವರಿಗೆ ಮತ್ತು ತಂಡಕ್ಕೆ ಯಶಸ್ಸು ತಂದುಕೊಡುತ್ತಿದೆ. ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ರೋಹಿತ್ ಪ್ರಜ್ವಲಿಸುತ್ತಿದ್ದಾರೆ.
2019ರ ಐಪಿಎಲ್ ಟೂರ್ನಿ ವೇಳೆ ಯುವರಾಜ್ ಸಿಂಗ್ ಅವರೊಟ್ಟಿಗೆ ನಡೆಸಿದ ಚರ್ಚೆ ಸದ್ಯ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಅವರ ಭರ್ಜರಿ ಫಾರ್ಮ್ಗೆ ಕಾರಣವಾಗಿದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್, 15 ಪಂದ್ಯಗಳಲ್ಲಿ 405 ರನ್ಗಳನ್ನು ಬಾರಿಸಿದ್ದರು. ಆದರೆ, ಸಿಕ್ಕ ಉತ್ತಮ ಆರಂಭಗಳನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾಗುತ್ತಿದ್ದರು. ಹೀಗಾಗಿ 2011ರಲ್ಲಿ ಭಾರತಕ್ಕೆ ವಿಶ್ವಕಪ್ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆಟಗಾರನ ಬಳಿ ತಮ್ಮ ಸಮಸ್ಯೆಗೆ ಪರಿಹಾರ ಕೇಳಿದ್ದರು.
"ಅವರು ನನಗೆ ಅಣ್ಣನಿದ್ದಂತೆ. ಆಟ ಮತ್ತು ಜೀವನದ ಕುರಿತಾಗಿ ಯಾವಾಗಲೂ ಚರ್ಚಿಸುತ್ತಿರುತ್ತೇವೆ. ಅಗತ್ಯದ ಸಂದರ್ಭದಲ್ಲಿ ದೊಡ್ಡ ಇನಿಂಗ್ಸ್ ಒಂದನ್ನು ನೀನು ಆಡಲೇಬೇಕು ಎಂದು ವಿಶ್ವಕಪ್ ಕುರುತಾಗಿ ಅವರು ಮಾತನಾಡುತ್ತಿದ್ದರು. 2011ರ ವಿಶ್ವಕಪ್ಗೂ ಮುನ್ನ ಅವರು ಕೂಡ ಇಂಥದ್ದೇ ಸ್ಥಿತಿ ಎದುರಿಸಿದ್ದರು. ಆದರೆ, ಉತ್ತಮ ಕಾಲಘಟ್ಟ ಕಂಡುಕೊಳ್ಳುವುದು ಮುಖ್ಯ. ಇದನ್ನು ಕಂಡುಕೊಂಡದರಿಂದಲೇ ಅವರು 2011ರ ವಿಶ್ವಕಪ್ನಲ್ಲಿ ಯಶಸ್ಸು ಗಳಿಸಿದ್ದರು,'' ಎಂದು ರೋಹಿತ್ ಶರ್ಮಾ ಸ್ಟಾರ್ ಆಲ್ರೌಂಡರ್ ಯುವರಾಜ್ ಸಿಂಗ್ ಅವರೊಟ್ಟಿಗೆ ನಡೆಸಿದ್ದ ಚರ್ಚೆಯಿಂದ ತಾವು ಕಲಿತುಕೊಂಡ ಪಾಠವನ್ನು ನೆನೆದಿದ್ದಾರೆ.
2014ರಲ್ಲಿ ಭಾರತ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡ ದಿನದಿಂದಲೂ ಸಂಜಯ್ ಬಾಂಗರ್, ರೋಹಿತ್ ಅವರೊಟ್ಟಿಗೆ ನಿಕಟವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರೋಹಿತ್ ಅವರ ಮನಸ್ಥಿತಿಯೇ ಈ ಸಾಧನೆಗಳ ಮೆಟ್ಟಿಲೇರುವಂತೆ ಮಾಡಿದೆ ಎಂದಿರುವ ಬಾಂಗರ್, "ತಮ್ಮ ಆಟವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಹೆಚ್ಚಾಗಿರುವುದೇ ರೋಹಿತ್ ಅವರ ಯಶಸ್ಸಿಗೆ ಪ್ರಮುಖ ಕಾರಣ,'' ಎಂದು ಹೇಳಿದ್ದಾರೆ.
"ರೋಹಿತ್ ಕೆಲ ಸಂಗತಿಗಳನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಇದೇ ಅವರ ಯಶಸ್ಸಿಗೆ ಕಾರಣ ಕೂಡ. ತಮ್ಮ ಆಟವನ್ನು ಬಲ ಪಡಿಸಿಕೊಳ್ಳುವ ಕಡೆಗೆ ಅವರು ಕಠಿಣ ಪರಿಶ್ರಮ ವಹಿಸಿದ್ದಾರೆ. ಯಾವುದೇ ಒಬ್ಬ ಬ್ಯಾಟ್ಸ್ಮನ್ ಸ್ಥಿರ ಪ್ರದರ್ಶನ ನೀಡುತ್ತಿದ್ದರೆ ಅದು ಆತನ ಬದ್ಧತೆ, ಶಿಸ್ತು ಮತ್ತು ಕಠಿಣ ಪರಿಶ್ರಮಕ್ಕೆ ಸಿಗುತ್ತಿರುವ ಪ್ರತಿಫಲವಾಗಿದೆ. ಇನ್ನು ವೈಯಕ್ತಿಕವಾಗಿ ಮಾತ್ರವಲ್ಲ ತಮ್ಮ ಜೊತೆಯಲ್ಲಿ ಕೆ.ಎಲ್ ರಾಹುಲ್ ಕೂಡ ಲಯ ಕಂಡುಕೊಳ್ಳುವಂತೆ ಅವರು ಮಾಡುತ್ತಿದ್ದಾರೆ. ರಾಹುಲ್ಗೆ ಅಗತ್ಯದ ಸಮಯವನ್ನು ಅವರು ನೀಡುತ್ತಿದ್ದಾರೆ,'' ಎಂದು ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಬಾಂಗರ್ ಹೇಳಿದ್ದಾರೆ.
"ವಿಶ್ವಕಪ್ ಆರಂಭಕ್ಕೂ ಮೊದಲೇ ಉತ್ತಮ ಸ್ಥಿತಿ (ಕಾಲಘಟ್ಟ) ಕಂಡುಕೊಳ್ಳಬೇಕೆಂದಿದ್ದೆ. ಈ ಬಾರಿಯ ವಿಶ್ವಕಪ್ ವಿಭಿನ್ನ ಮಾದರಿಯದ್ದಾಗಿದೆ. ಫೈನಲ್ಗೂ ಮುನ್ನ 10 ಪಂದ್ಯಗಳನ್ನಾಡಬೇಕು. ಇದೊಂದು ದೊಡ್ಡ ಟೂರ್ನಿ. ಇಲ್ಲಿನ ಪರಿಸ್ಥಿತಿಗಳು ಕೂಡ ಅಷ್ಟೇ ಮಹತ್ವದ ಪಾತ್ರ ವಹಿಸುತ್ತದೆ. ಇವೆಲ್ಲವನ್ನೂ ಗಮನಿಸಿ ನಾನು ಉತ್ತಮ ಸ್ಥಿತಿ ಕಾಯ್ದುಕೊಳ್ಳುವ ನಿರ್ಧಾರ ಮಾಡಿದ್ದೆ. ಈ ನಿಟ್ಟಿನಲ್ಲಿ ನಾನು ಉತ್ತಮ ಕೆಲಸವನ್ನೇ ಮಾಡಿದ್ದೇನೆ,'' ಎಂದು ರೋಹಿತ್ ಶರ್ಮಾ ಹೇಳಿಕೊಂಡಿದ್ದಾರೆ.
"ಪಂದ್ಯ ಮುಗಿದ ಬಳಿಕ, ಎಲ್ಲವನ್ನು ಹಿಂದೆ ಬಿಟ್ಟುಬಿಡುತ್ತೇನೆ. ಈ ಮೂಲಕ ಮುಂದೇನಾಗಬೇಕು ಎಂಬುದರ ಕಡೆಗೆ ಗಮನ ನೀಡುತ್ತೇನೆ. ಟೂರ್ನಿ ಆರಂಭಕ್ಕೂ ಮುನ್ನವೇ ನಾನು ಉತ್ತಮ ಸ್ಥಿತಿ ಕಾಯ್ದುಕೊಳ್ಳುವುದರ ಕುರಿತಾಗಿ ಆಲೋಚಿಸಿದ್ದೆ. ಈ ಉತ್ತಮ ಸ್ಥಿತಿಯು ಹಲವು ಅತ್ಯುತ್ತಮ ಸಂಗತಿಗಳನ್ನು ತಂದುಕೊಟ್ಟಿದೆ. ಈ ಅತ್ಯುತ್ತಮ ಸಂಗತಿಗಳೆಲ್ಲವೂ ನನ್ನ ವೈಯಕ್ತಿಕ ವಿಚಾರಗಳು. ಇದನ್ನು ಹೇಳಲಾರೆ," ಎಂದಿದ್ದಾರೆ.
ರೋಹಿತ್ ತಮ್ಮ ಯಶಸ್ಸಿನ ಹಿಂದಿರುವ ಗುಟ್ಟನ್ನು ಬಹಿರಂಗ ಪಡಿಸುವುದಿಲ್ಲವಂತೆ. ಆದರೆ ಅವರು ಸತತವಾಗಿ ರನ್ ಹೊಳೆ ಹರಿಸುತ್ತಿರುವ ಸಂದರ್ಭದಲ್ಲಿ ಇಂತಹ ರಹಸ್ಯಗಳನ್ನು ತಮ್ಮಲ್ಲೇ ಇಟ್ಟುಕೊಳ್ಳುವುದು ಒಂದರ್ಥದಲ್ಲಿ ಸರಿ ಅಲ್ಲವೇ?