ಮುಂಬೈ ತಂಡದ ಮೇಲೆ ವಿಶೇಷ ಅಭಿಮಾನ: ರಣಜಿ ಆಡಲು ಮುಂದಾದ 360 ಡಿಗ್ರಿ ಆಟಗಾರ

ಕೆಲ ಕ್ರಿಕೆಟಿಗರು ಇದ್ದಾರೆ, ಅವರು ಭಾರತ ತಂಡಕ್ಕೆ ಒಮ್ಮೆ ಆಯ್ಕೆಯಾದರೆ ಮತ್ತೆ ತಮ್ಮ ತವರು ತಂಡದತ್ತ ತಿರುಗಿ ಕೂಡ ನೋಡುವುದಿಲ್ಲ, ಇನ್ನೂ ಕೆಲವರು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗದೆ ಇದ್ದಾಗ ರಾಜ್ಯದ ತಂಡದ ಪರವಾಗಿ ಆಡುತ್ತಾರೆ. ಇದೆಲ್ಲದರ ನಡುವೆ ಸೂರ್ಯಕುಮಾರ್ ಯಾದವ್ ವಿಶಿಷ್ಠವಾಗಿ ಕಾಣುತ್ತಾರೆ.
ಸದ್ಯ ಟಿ20 ಮಾದರಿಯಲ್ಲಿ ನಂಬರ್ 1 ರ್ಯಾಂಕಿಂಗ್ನಲ್ಲಿರುವ ಅವರು, ಬಾಂಗ್ಲಾದೇಶದ ವಿರುದ್ಧದ ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ. ಈ ನಡುವೆ ಸೂರ್ಯಕುಮಾರ್ ಯಾದವ್ ರಣಜಿಯಲ್ಲಿ ಆಡಲು ನಿರ್ಧರಿಸಿದ್ದು, ಮುಂಬೈ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ.
ತಾವು ರಣಜಿ ಆಡಲು ಲಭ್ಯವಿರುವುದಾಗಿ ಅವರು ಮುಂಬೈ ಕ್ರಿಕೆಟ್ ಅಸೋಸಿಯೇಷನ್ (MCA) ಗೂ ಮಾಹಿತಿ ನೀಡಿದ್ದಾರೆ. ಡಿಸೆಂಬರ್ 20 ರಂದು ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಕಣಕ್ಕಿಳಿಯಲಿದ್ದಾರೆ.
"ಸೂರ್ಯಕುಮಾರ್ ಯಾದವ್ ಎರಡನೇ ರಣಜಿ ಟ್ರೋಫಿ ಪಂದ್ಯಕ್ಕೆ ಲಭ್ಯವಾಗಲಿದ್ದಾರೆ ಎಂದು ನಮಗೆ ಮಾಹಿತಿ ನೀಡಿದ್ದಾರೆ. ರಣಜಿ ಪಂದ್ಯಕ್ಕೆ ಇಂದು ತಂಡವನ್ನು ಆಯ್ಕೆ ಮಾಡಲಾಗಿದೆ. ಅಜಿಂಕ್ಯ ರಹಾನೆ ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ" ಎಂದು ಎಂಸಿಎ ಗೌರವ ಕಾರ್ಯದರ್ಶಿ ಅಜಿಂಕ್ಯ ನಾಯಕ್ ತಿಳಿಸಿದ್ದಾರೆ.

ಮುಂಬೈ ತಂಡದ ಆತ್ಮವಿಶ್ವಾಸ ಹೆಚ್ಚಳ
ಸೂರ್ಯಕುಮಾರ್ ಯಾದವ್ ಮುಂಬೈ ತಂಡಕ್ಕಾಗಿ ಆಡುವ ನಿರ್ಧಾರದ ಬೆನ್ನಲ್ಲೇ ಮುಂಬೈ ತಂಡದ ವಿಶ್ವಾಸ ಹೆಚ್ಚಿಸಿಕೊಂಡಿದೆ. ಸೂರ್ಯ ಟಿ20 ಮಾದರಿ ಕ್ರಿಕೆಟ್ನಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಬಾಂಗ್ಲಾದೇಶ ಪ್ರವಾಸದಿಂದ ಅವರಿಗೆ ವಿಶ್ರಾಂತಿ ನೀಡಲಾಗಿದ್ದರು, ಸಂಪೂರ್ಣ ವಿಶ್ರಾಂತಿ ಪಡೆಯಲು ಸೂರ್ಯಕುಮಾರ್ ಸಿದ್ಧವಿಲ್ಲ.
ಟಿ20 ವಿಶ್ವಕಪ್ಗಾಗಿ ಆಸ್ಟ್ರೇಲಿಯಾಗೆ ತೆರಳಿದ್ದ ಸೂರ್ಯಕುಮಾರ್ ಯಾದವ್, ನಂತರ ನ್ಯೂಜಿಲೆಂಡ್ ಸರಣಿಯಲ್ಲಿಆಡಿದರು. ವಿದೇಶ ಪ್ರವಾಸಲ್ಲಿ ಕಾಲ ದೂರವಿದ್ದ ಸೂರ್ಯಕುಮಾರ್ 75 ದಿನಗಳ ನಂತರ ತವರಿಗೆ ಮರಳಿದ್ದಾರೆ.
ಆಯ್ಕೆ ಸಮಿತಿ, ಟಿ20 ನಾಯಕತ್ವದ ಬಳಿಕ ಮತ್ತೊಂದು ದೊಡ್ಡ ಬದಲಾವಣೆಗೆ ಬಿಸಿಸಿಐ ಗಂಭೀರ ಚಿಂತನೆ!

ಬಾಂಗ್ಲಾದೇಶ ಸರಣಿಗೆ ಸ್ಟ್ಯಾಂಡ್-ಬೈ ಆಟಗಾರ
ಟಿ20 ಮತ್ತು ಏಕದಿನ ಮಾದರಿಯಲ್ಲಿ ಭಾರತಕ್ಕಾಗಿ ಆಡಿರುವ ಸೂರ್ಯಕುಮಾರ್ ಯಾದವ್ ಅಂತಾರಾಷ್ಟ್ರೀಯ ಟೆಸ್ಟ್ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ, ಅವರಿಗಿನ್ನೂ ಭಾರತಕ್ಕಾಗಿ ಟೆಸ್ಟ್ ಆಡುವ ಅವಕಾಶ ಸಿಕ್ಕಿಲ್ಲ. ಬಾಂಗ್ಲಾದೇಶದ ವಿರುದ್ಧದ ಸರಣಿಗೆ ಅವರನ್ನು ಸ್ಟಾಂಡ್ ಬೈ ಆಟಗಾರರನ್ನಾಗಿ ಹೆಸರಿಸಲಾಗಿದೆ.
ಸೂರ್ಯಕುಮಾರ್ ಯಾದವ್ ಮುಂಬೈಯನ್ನು ಪ್ರತಿನಿಧಿಸಲು ಆಯ್ಕೆ ಮಾಡಿಕೊಳ್ಳುವುದರ ಹಿಂದಿನ ಪ್ರಮುಖ ಕಾರಣವೆಂದರೆ ಭಾರತಕ್ಕಾಗಿ ಟೆಸ್ಟ್ ಕ್ರಿಕೆಟ್ ಆಡುವ ಬಯಕೆ. ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ, ಸೂರ್ಯಕುಮಾರ್ ಯಾದವ್ ಭಾರತಕ್ಕಾಗಿ ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಲು ಬಯಸುವುದಾಗಿ ತಿಳಿಸಿದ್ದರು.
ಕೊನೆಯ ಕ್ಷಣದಲ್ಲಿ ಅವರಿಗೆ ಟೆಸ್ಟ್ನಲ್ಲಿ ಆಡಲು ಕರೆ ಬಂದರೂ ಬರಬಹುದು. ಆದರೆ, ಸೂರ್ಯಕುಮಾರ್ ಯಾದವ್ ಅಲ್ಲಿಯವರೆಗೂ ದೇಶೀಯ ಕ್ರಿಕೆಟ್ನಲ್ಲಿ ಆಡಲು ನಿರ್ಧರಿಸಿದ್ದಾರೆ.

ಟೆಸ್ಟ್ ಕೂಡ ಆಡುವುದು ನನ್ನ ಗುಡಿ
ನಾನು ಕ್ರಿಕೆಟ್ ಆಡುವುದನ್ನು ಆರಂಭಿಸಿದ್ದು, ಕೆಂಪು ಚೆಂಡಿನ ಮೂಲಕ. ನಾನು ನನ್ನ ಮುಂಬೈ ತಂಡಕ್ಕಾಗಿ ಪ್ರಥಮ ದರ್ಜೆ ಕ್ರಿಕೆಟ್ ಅನ್ನು ಸಹ ಆಡಿದ್ದೇನೆ, ಟೆಸ್ಟ್ ಕ್ರಿಕೆಟ್ನಲ್ಲಿ ಆಡಬೇಕು ಎನ್ನುವುದು ನನ್ನ ಉದ್ದೇಶ, ಶೀಘ್ರದಲ್ಲೇ ಭಾರತ ತಂಡದ ಪರವಾಗಿ ಆಡುವ ವಿಶ್ವಾಸ ಇದೆ ಎಂದು ಅವರು ಹೇಳಿದರು. ಸದ್ಯ ಯಾವುದೇ ಸರಣಿ ಇಲ್ಲದ ಕಾರಣ ಸೂರ್ಯಕುಮಾರ್ ಯಾದವ್ ರಣಜಿ ಆಡಲು ನಿರ್ಧರಿಸಿದ್ದಾರೆ.
ಸೂರ್ಯಕುಮಾರ್ ಯಾದವ್ 77 ಪ್ರಥಮ ದರ್ಜೆ ಪಂದ್ಯಗಳಿಂದ 44.01 ಸರಾಸರಿಯಲ್ಲಿ 5326 ರನ್ ಗಳಿಸಿದ್ದಾರೆ ಮತ್ತು 2010 ರಲ್ಲಿ ಗುಜರಾತ್ ವಿರುದ್ಧಇನ್ನಿಂಗ್ಸ್ನಲ್ಲಿ 200 ರನ್ ಗಳಿಸಿದ್ದಾರೆ.

ಅಜಿಂಕ್ಯ ರಹಾನೆ ಮುಂಬೈ ತಂಡದ ನಾಯಕ
ಹಿರಿಯ, ಅನುಭವಿ ಆಟಗಾರ ಅಜಿಂಕ್ಯ ರಹಾನೆ ಮುಂಬೈ ತಂಡದ ನಾಯಕತ್ವದ ಹೊಣೆ ಹೊತ್ತಿದ್ದಾರೆ. ಸಲೀಲ್ ಅಂಕೋಲಾ ನೇತೃತ್ವದ ಮುಂಬೈ ಕ್ರಿಕೆಟ್ ಸಂಸ್ಥೆಯ ಹಿರಿಯ ಆಯ್ಕೆ ಸಮಿತಿಯು ಮೊದಲ ರಣಜಿ ಟ್ರೋಫಿ ಪಂದ್ಯಕ್ಕಾಗಿ ತನ್ನ 17 ಸದಸ್ಯರ ತಂಡವನ್ನು ಪ್ರಕಟಿಸಿದೆ. ಎರಡನೇ ಪಂದ್ಯಕ್ಕೆ ಸೂರ್ಯಕುಮಾರ್ ಯಾದವ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಮೊದಲ ರಣಜಿ ಪಂದ್ಯಕ್ಕೆ ಮುಂಬೈ ತಂಡ: ಅಜಿಂಕ್ಯ ರಹಾನೆ (ನಾಯಕ), ಪೃಥ್ವಿ ಶಾ, ಯಶಸ್ವಿ ಜೈಸ್ವಾಲ್, ಅರ್ಮಾನ್ ಜಾಫರ್, ಸರ್ಫರಾಜ್ ಖಾನ್, ಸುವೇದ್ ಪರ್ಕರ್, ಹಾರ್ದಿಕ್ ತಮೋರ್, ಪ್ರಸಾದ್ ಪವಾರ್, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ತುಷಾರ್ ದೇಶಪಾಂಡೆ, ಮೋಹಿತ್ ಅವಸ್ತಿ, ಸಿದ್ಧಾರ್ಥ್ ರಾವತ್ , ಸೂರ್ಯಾಂಶ್ ಶೆಡ್ಗೆ, ಶಶಾಂಕ್ ಅತ್ತಾರ್ಡೆ, ಮುಶೀರ್ ಖಾನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications