
ಇಂದೋರ್, ಮಾರ್ಚ್ 14: ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ (ಮಾರ್ಚ್ 14) ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಕರ್ನಾಟಕ 8 ವಿಕೆಟ್ ಭರ್ಜರಿ ಗೆಲುವನ್ನಾಚರಿಸಿದೆ. ರೋಹನ್ ಕದಮ್ ಮತ್ತು ಮಯಾಂಕ್ ಅಗರ್ವಾಲ್ ಅರ್ಧಶತಕದ ನೆರವಿನಿಂದ ರಾಜ್ಯ ತಂಡ ಚೊಚ್ಚಲ ಟ್ರೋಫಿ ಗೆದ್ದುಕೊಂಡಿತು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಮಹಾರಾಷ್ಟ್ರಕ್ಕೆ ನಾಯಕ ರಾಹುಲ್ ತ್ರಿಪಾಠಿ 30, ನೌಶಾದ್ ಅಜೇಯ 69, ಅಂಕಿತ್ ಬಾವ್ನೆ 29 ರನ್ ಸೇರಿಸಿದರು. 20 ಓವರ್ಗೆ ಮಹಾರಾಷ್ಟ್ರ 4 ವಿಕೆಟ್ ಕಳೆದು 155 ರನ್ ಪೇರಿಸಿತು. ಮಹಾರಾಷ್ಟ್ರ ಇನ್ನಿಂಗ್ಸ್ ವೇಳೆ ರಾಜ್ಯ ತಂಡದ ಅಭಿಮನ್ಯು ಮಿಥುನ್ 2, ಕೆಸಿ ಕಾರಿಯಪ್ಪ ಮತ್ತು ಜಗದೀಶ್ ಸುಚಿತ್ ತಲಾ ಒಂದು ವಿಕೆಟ್ ಪಡೆದರು.
ಇನ್ನಿಂಗ್ಸ್ಗೆ ಇಳಿದ ಕರ್ನಾಟದಿಂದ ಆರಂಭಿಕ ಆಟಗಾರ ರೋಹನ್ 39 ಎಸೆತಗಳಿಗೆ 60 ರನ್ ಸಿಡಿಸಿದರು. ಜೊತೆಗೆ ಅಗರ್ವಾಲ್ ಅಜೇಯ 85 ರನ್ (57 ಎಸೆತ) ಸೇರಿಸಿದ್ದು ತಂಡ ಸುಲಭ ಗೆಲುವು ದಾಖಲಿಸಲು ಸಹಕಾರಿಯಾಯ್ತು. ಕರ್ನಾಟಕ 18.3 ಓವರ್ಗೆ 2 ವಿಕೆಟ್ ನಷ್ಟದೊಂದಿಗೆ 159 ರನ್ ಬಾರಿಸಿತು. ಟೂರ್ನಿಯಲ್ಲಿ ಈ ಹಿಂದೆ ಆಡಿರುವ ಯಾವುದೇ ಪಂದ್ಯಗಳಲ್ಲೂ ಕರ್ನಾಟಕ ಸೋತಿರಲಿಲ್ಲ ಅನ್ನೋದು ವಿಶೇಷ. ರಾಜ್ಯ ತಂಡ 7ರಲ್ಲಿ ಏಳೂ ಗೆಲುವು ದಾಖಲಿಸಿತ್ತು. ಪ್ರಶಸ್ತಿ ಸುತ್ತಿನಲ್ಲೂ ಕರ್ನಾಟಕ ಪಾರಮ್ಯ ಮೆರೆಯಿತು.
ಅಂತೂ ಕರ್ನಾಟಕ ಈ ಗೆಲುವಿನೊಂದಿಗೆ ಸತತ 14 ಟಿ20 ಪಂದ್ಯಗಳನ್ನು ಗೆದ್ದ ಹಿರಿಮೆಗೆ ಪಾತ್ರವಾಗಿದೆ. ಇದರ ಜೊತೆಗೆ ಟಿ20ಯಲ್ಲಿ ಸತತ ಗೆಲುವು ಸಾಧಿಸಿದ ದೇಸಿ ತಂಡವಾಗಿ ಕರ್ನಾಟಕ ದಾಖಲೆ ಬರೆದಿದೆ. ಫೈನಲ್ ನಲ್ಲಿ ಮಯಾಂಕ್ ಅಗರ್ವಾಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.