ದುಬೈ: ಸನ್ ರೈಸರ್ಸ್ ಹೈದರಾಬಾದ್ ವೇಗಿ ಟಿ ನಟರಾಜನ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದ್ವಿತೀಯ ಹಂತದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಕೋವಿಡ್-19 ಸೋಂಕಿಗೆ ತುತ್ತಾಗಿರುವ ನಟರಾಜನ್ ತಂಡದಿಂದ ಹೊರಗುಳಿದಿದ್ದರು. ಆರಂಭಿಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೈದರಾಬಾದ್ ಹೀನಾಯ ಸೋಲು ಕೂಡ ಕಂಡಿತ್ತು.
ಐಸಿಸಿ ಟಿ20 ವಿಶ್ವಕಪ್ ರೋಮಾಂಚನಕಾರಿ ಅಧಿಕೃತ ಗೀತೆ ಬಿಡುಗಡೆ
ಆದರೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಸೋಲಿಗೆ ಟಿ ನಟರಾಜನ್ ತಂಡದಲ್ಲಿ ಇಲ್ಲದಿದ್ದಿದ್ದು ಕಾರಣವಲ್ಲ. ನಟರಾಜನ್ ಅನುಪಸ್ಥಿತಿ ಆಟದ ಮೇಲೆ ಏನೂ ಪರಿಣಾಮ ಬೀರಿಲ್ಲ ಎಂದು ಹೈದರಾಬಾದ್ನ ಮುಖ್ಯ ಕೋಚ್ ಟ್ರೆವರ್ ಬೇಲಿಸ್ ಹೇಳಿದ್ದಾರೆ. ಡೆಲ್ಲಿ ವಿರುದ್ಧ ಹೈದರಾಬಾದ್ ತಂಡದ ಕಳಪೆ ಪ್ರದರ್ಶನದ ಕುರಿತು ಟ್ರೆವರ್ ಪ್ರತಿಕ್ರಿಯಿಸಿದ್ದಾರೆ.
ನಟರಾಜ್ ಅನುಪಸ್ಥಿತಿ ಪರಿಣಾಮ ಬೀರಿದೆ ಅನ್ನಿಸುತ್ತಿಲ್ಲ
"ಪಂದ್ಯದ ಫಲಿತಾಂಶಕ್ಕೆ ಟಿ ನಟರಾಜನ್ ಇಲ್ಲದಿದ್ದಿದ್ದು ಪರಿಣಾಮ ಬೀರಿದೆ ಎಂದು ನನಗೆ ಅನ್ನಿಸುತ್ತಿಲ್ಲ. ಈ ರಾತ್ರಿ ನಮ್ಮ ತಂಡದ ಆಟ ಆಟಗಾರರು ಚೆನ್ನಾಗಿ ಆಡಿದರು. ಎದುರಾಳಿ ತಂಡ ನಮಗಿಂತಲೂ ಚೆನ್ನಾಗಿ ಆಡಿತು. ಈ ಸೋಲು ಕೊಂಚ ಬೇಸರ ಮೂಡಿಸಿದೆ. ನಟರಾಜನ್ ಮುಂದೆ ಆಡ್ತಾರೆ. ಆದರೆ ಇವರೆಲ್ಲ ವೃತ್ತಿಪರ ಆಟಗಾರರು. ಈಗ ಮತ್ತು ಮೊದಲೂ ಕೂಡ ಪಂದ್ಯ ಶುರುವಾಗುವ ಹೊತ್ತಿನಲ್ಲಿ ಯಾವುದಾದರೂ ಒಬ್ಬ ಆಟಗಾರನಿಗೆ ಗಾಯವಾಗಿ ಆತ ತಂಡದಿಂದ ಹೊರಬೀಳಬೇಕಾಗಿ ಬರುತ್ತಿತ್ತು. ಅವರ ಬದಲಿಗೆ ಬೇರೆ ಆಟಗಾರರನ್ನು ಆಡಿಸಬೇಕಾಗಿ ಬರುತ್ತಿತ್ತು. ಇದು ಕೂಡ ಹೀಗೆಯೇ. ಎಲ್ಲಾ ಆಟಗಾರರ ವಿಚಾರದಲ್ಲೂ ಇದು ನಡೆಯುತ್ತದೆ. ನಟರಾಜ್ ಶೀಘ್ರ ಚೇತರಿಸಿ ತಂಡ ಸೇರಿಕೊಳ್ಳಲಿದ್ದಾರೆ. ನಾವು ಒಂದು ಪಂದ್ಯ ಸೋತರೂ ತಪ್ಪುಗಳನ್ನು ತಿದ್ದಿಕೊಂಡು ಈ ಹೊತ್ತಿನಲ್ಲಿ ಮುನ್ನಡೆಯಬೇಕಾಗಿದೆ," ಎಂದು ಪಂದ್ಯದ ಬಳಿಕ ಮಾತನಾಡಿದ ಟ್ರೆವರ್ ಬೇಲಿಸ್ ಹೇಳಿದ್ದಾರೆ.
ಹೈದರಾಬಾದ್ vs ಡೆಲ್ಲಿ ಪಂದ್ಯದ ವೇಳೆಯ ತಮಾಷೆಯ ಮೀಮ್ಸ್ ನೋಡಿ!
ಡೆಲ್ಲಿ 13 ಎಸೆತ ಉಳಿಸಿ 8 ವಿಕೆಟ್ ಭರ್ಜರಿ ಜಯ
ಬುಧವಾರ ದುಬೈಯ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 33ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಡೆಲ್ಲಿ 13 ಎಸೆತಗಳನ್ನು ಉಳಿಸಿ 8 ವಿಕೆಟ್ ಭರ್ಜರಿ ಗೆಲುವನ್ನಾಚರಿಸಿತ್ತು. ತಂಡ ಈವರೆಗೆ ಆಡಿರುವ 8 ಪಂದ್ಯಗಳಲ್ಲಿ 1 ಪಂದ್ಯದಲ್ಲಷ್ಟೇ ಗೆದ್ದು ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ. ಇನ್ನುಳಿದ ಆರು ಪಂದ್ಯಗಳನ್ನು ಗೆದ್ದರೂ ಕೂಡ ಎಸ್ಆರ್ಎಚ್ನ ಪ್ಲೇ ಆಫ್ ಕನಸು ಈಡೇರೋದಕ್ಕೆ ಗ್ಯಾರಂಟಿಯಿಲ್ಲ. ಆರಂಭಿಕ ಪಂದ್ಯಗಳನ್ನು ಸೋತು ಸೋತು ಸುಣ್ಣವಾಗಿರುವ ಈ ಪಂದ್ಯದಲ್ಲಾದರೂ ಗೆದ್ದು ಮತ್ತೆ ಕಮ್ಬ್ಯಾಕ್ ಮಾಡುತ್ತದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಎಂದಿನಂತೆ ಈ ಬಾರಿ ಕೂಡ ಹೈದರಾಬಾದ್ ಸೋತು ನಿರಾಸೆ ಅನುಭವಿಸಿದೆ. ಈ ಮೊದಲು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ನಾಯಕರಾಗಿದ್ದರು. ತಂಡದ ಕಳಪೆ ಪ್ರದರ್ಶನದಿಂದ ವಾರ್ನರ್ ಅವರನ್ನು ಕೆಳಗಿಳಿಸಲಾಗಿತ್ತು. ಈಗ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ತಂಡದ ನಾಯಕರಾಗಿದ್ದಾರೆ. ಆದರೂ ಎಸ್ಆರ್ಎಚ್ ಸೋಲಿನ ಹಾದಿ ತಪ್ಪಿಲ್ಲ.
ಸೆಪ್ಟೆಂಬರ್ 25ಕ್ಕೆ ಪಂಜಾಬ್-ಹೈದರಾಬಾದ್ ಮುಖಾಮುಖಿ
ಮೊದಲು ಬ್ಯಾಟಿಂಗ್ ಮಾಡಿದ್ದ ಸನ್ ರೈಸರ್ಸ್ ಹೈದರಾಬಾದ್, ವೃದ್ಧಿಮಾನ್ ಸಾಹ 18, ಕೇನ್ ವಿಲಿಯಮ್ಸನ್ 18, ಮನೀಶ್ ಪಾಂಡೆ 17, ಅಬ್ದುಲ್ ಸಮದ್ 28, ರಶೀದ್ ಖಾನ್ 22 ರನ್ನೊಂದಿಗೆ 20 ಓವರ್ಗೆ 9 ವಿಕೆಟ್ ಕಳೆದು 134 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್, ಪೃಥ್ವಿ ಶಾ 11, ಶಿಖರ್ ಧವನ್ 42, ಶ್ರೇಯಸ್ ಐಯ್ಯರ್ 47, ರಿಷಭ್ ಪಂತ್ 35 ರನ್ನೊಂದಿಗೆ 17.5 ಓವರ್ಗೆ 2 ವಿಕೆಟ್ ಕಳೆದು 139 ರನ್ ಗಳಿಸಿತು. 12 ರನ್ಗೆ 2 ವಿಕೆಟ್ ಪಡೆದ ದಕ್ಷಿಣ ಆಫ್ರಿಕಾದ ವೇಗಿ ಅನ್ರಿಕ್ ನಾರ್ಟ್ಜೆ ಪಂದ್ಯಶ್ರೇಷ್ಠರೆನಿಸಿದರು. ದಕ್ಷಿಣ ಆಫ್ರಿಕಾದ ಮತ್ತೊಬ್ಬ ವೇಗಿ ಕಾಗಿಸೊ ರಬಾಡ ಕೂಡ ಪಂದ್ಯದಲ್ಲಿ ಉತ್ತಮ ಬೌಲಿಂಗ್ ನೀಡಿದ್ದರು. ರಬಾಡ 37 ಎಸೆತಗಳಲ್ಲಿ 3 ವಿಕೆಟ್ ಉರುಳಿಸಿದ್ದರು. ಮುಂದೆ ಸನ್ ರೈಸರ್ಸ್ ಹೈದರಾಬಾದ್ಗೆ ಸೆಪ್ಟೆಂಬರ್ 25ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯ ನಡೆಯಲಿದೆ.