
ಟಿ20 ವಿಶ್ವಕಪ್ನಲ್ಲಿ ಭಾರತ ಅಫ್ಘಾನಿಸ್ತಾನ ತಂಡವನ್ನು ಎದುರಿಸಲು ಸಜ್ಜಾಗಿದೆ. ಈ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲುವು ಅನಿವಾರ್ಯವಾಗಿದೆ. ಈ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡದ ನಾಯಕ ಮೈಕಲ್ ವಾನ್ ಟೀಮ್ ಇಂಡಿಯಾಗೆ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಭಾರತ ಎಂದಿನಂತೆ ಸುರಕ್ಷಿತವಾಗಿ ಆಡುವ ಪ್ರಯತ್ನ ನಡೆಸಿದರೆ ಅಫ್ಘಾನಿಸ್ತಾನ ಭಾರತವನ್ನು ಮಣಿಸಲಿದೆ ಎಂದಿದ್ದಾರೆ ಮೈಕಲ್ ವಾನ್.
ಭಾರತ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಮಾತನಾಡಿದ ಮೈಕಲ್ ವಾನ್ ಭಾರತ ತಂಡ ಈ ಪಂದ್ಯದಲ್ಲಿ ಗೆಲುವು ಸಾಧಿಸಬೇಕಿದ್ದರೆ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಬೇಕಿದೆ ಎಂದಿದ್ದಾರೆ. ಅಫ್ಘಾನಿಸ್ತಾನದ ವಿರುದ್ಧ ಉತ್ತಮ ಗೆಲುವು ಸಾಧಿಸಲು ಸಾಧ್ಯವಾದರೆ ಭಾರತ ಈ ವಿಶ್ವಕಪ್ನ ಹೋರಾಟದಲ್ಲಿ ಮುಂದುವರಿಯಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
"ಭಾರತಕ್ಕೆ ಇದು ನಿರ್ಣಾಯಕ ದಿನವಾಗಿದೆ. ಭಾರತ ಒಂದು ವೇಳೆ ಸುರಕ್ಷಿತ ರೀತಿಯಲ್ಲಿ ಆಡುವ ಪ್ರಯತ್ನ ನಡೆಸಿದರೆ ಅಫ್ಘಾನಿಸ್ತಾನ ಭಾರತವನ್ನು ಮಣಿಸಲಿದೆ. ಮುನ್ನುಗ್ಗಿ ಮತ್ತು ಆಕ್ರಮಣಕಾರಿಯಾಗಿ ಆಡಿ, ಹಾಗಾದಲ್ಲಿ ಮಾತ್ರ ಗೆಲುವು ಸಾಧಿಸಿ ಟೂರ್ನಿಯಲ್ಲಿ ಮುಂದುವರಿಯಲು ಸಾಧ್ಯ" ಎಂದು ಮೈಕಲ್ ವಾನ್ ಪಂದ್ಯಕ್ಕೂ ಮುನ್ನ ಟ್ವೀಟ್ ಮಾಡಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಭಾರತ ಈಗ ಅಕ್ಷರಶಃ ಮಾಡು ಇಲ್ಲವೇ ಮಡಿ ಪರಿಸ್ಥಿತಿಯಲ್ಲಿದೆ. ಪಾಕಿಸ್ತಾನ ಹಾಘೂ ನ್ಯೂಜಿಲೆಂಡ್ ವಿರುದ್ಧದ ಆರಂಭಿಕ ಎರಡು ಪಂದ್ಯಗಳನ್ನು ಸೋತ ಕಾರಣದಿಂದಾಗಿ ಭಾರತ ಸೆಮಿ ಫೈನಲ್ ಹಾದಿಯನ್ನು ದುರ್ಗಮಗೊಳಸಿದೆ. ಹೀಗಾಗಿ ಅಫ್ಘಾನಿಸ್ತಾನದ ವಿರುದ್ಧ ಭಾರತಕ್ಕೆ ಗೆಲುವು ಬಹಳ ಅಗತ್ಯವಾಗಿದೆ. ವಿಶ್ವದರ್ಜೆಯ ಸ್ಪಿನ್ನರ್ಗಳನ್ನು ಹೊಂದಿರುವ ಅಫ್ಘಾನಿಸ್ತಾನ ಎದುರಾಳಿಯ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಆತ್ಮ ವಿಶ್ವಾಸವನ್ನು ಹೊಂದಿದೆ.
ಭಾರತ ಮುಂದಿನ ಹಂತಕ್ಕೇರಬೇಕಾದರೆ ಈಗ ಉಳಿದಿರುವ ಮೂರು ಪಂದ್ಯಗಳಲ್ಲಿಯೂ ಉತ್ತಮ ಅಂತರದಿಂದ ಗೆಲುವು ಸಾಧಿಸಬೇಕಿದೆ. ಅಲ್ಲದೆ ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ ಮುಂಬರುವ ಒಂದೊಂದು ಪಂದ್ಯಗಳನ್ನು ಸೋಲಲೇ ಬೇಕಿದೆ. ಹಾಗಾದಲ್ಲಿ ಮಾತ್ರವೇ ಭಾರತದ ಸೆಮಿಫೈನಲ್ ಕನಸು ಜೀವಂತವಾಗಿಳಿಯಲು ಸಾಧ್ಯ.
ಇನ್ನು ಈ ನಿರ್ಣಾಯಕ ಪಂದ್ಯಕ್ಕೂ ಮುನ್ನ ಭಾರತ ಅಫ್ಘಾನಿಸ್ತಾನದ ವಿರುದ್ಧ ಸೋತ ಉದಾಹರಣೆಯಿಲ್ಲ. ಇದಕ್ಕೂ ಮುನ್ನ ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳು ಎರಡು ಬಾರಿ ಮುಖಾಮುಖಿಯಾಗಿತ್ತು ಈ ಎರಡು ಸಂದರ್ಭಗಳಲ್ಲಿಯೂ ಭಾರತ ಭರ್ಜರಿಯಾಗಿ ಗೆದ್ದುಕೊಂಡಿದೆ.