ಟಿ20 ವಿಶ್ವಕಪ್: ಭಾರತ ಸೋತಿದ್ದಲ್ಲದೆ, ನಮ್ಮ ಅವಕಾಶಗಳಿಗೂ ಕೊಳ್ಳಿ ಇಟ್ಟಿದೆ ಎಂದ ಶೋಯೆಬ್ ಅಖ್ತರ್

ಐಸಿಸಿ ಟಿ20 ವಿಶ್ವಕಪ್ 2022ರ ಸೂಪರ್ 12 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲುವ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಭಾರತ ಮೊದಲ ಸೋಲನ್ನ ಅನುಭವಿಸಿದೆ. ಹರಿಣಗಳ ದಾಳಿಗೆ ತತ್ತರಿಸಿದ ಭಾರತ ಕೇವಲ 133 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ ಇನ್ನೆರಡು ಎಸೆತಗಳು ಬಾಕಿ ಇರುವಂತೆಯೇ ಐದು ವಿಕೆಟ್ಗಳ ಗೆಲುವು ಸಾಧಿಸಿತು.
ಗ್ರೂಪ್ 2 ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನ ಕಳೆದುಕೊಂಡಿರುವ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಎರಡನೇ ಸ್ಥಾನಕ್ಕೆ ಕುಸಿದಿದೆ. ಈ ಮೂಲಕ ಪಾಕಿಸ್ತಾನ ತಂಡವು ಸೆಮಿಫೈನಲ್ ತಲುಪುವ ಹಾದಿ ದುರ್ಗಮಗೊಂಡಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಸೋಲಿನ ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಮಾಜಿ ಬೌಲರ್, ರಾವಲ್ಪಿಂಡಿ ಎಕ್ಸ್ಪ್ರೆಸ್ ಶೋಯೆಬ್ ಅಖ್ತರ್ ತುಂಬಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಭಾರತ ಮತ್ತು ಜಿಂಬಾಬ್ವೆ ಎದುರು ಸತತ ಎರಡು ಪಂದ್ಯ ಸೋತು ನೆದರ್ಲ್ಯಾಂಡ್ಸ್ ವಿರುದ್ಧ ಪಂದ್ಯ ಗೆದ್ದಿರುವ ಪಾಕಿಸ್ತಾನ ತಂಡವು ಉಳಿದ ಎರಡು ಪಂದ್ಯಗಳನ್ನ ಗೆದ್ದರೂ ಸಹ ಅದೃಷ್ಟ ಪರೀಕ್ಷೆಗೆ ಇಳಿಯಬೇಕಿದೆ.
ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಟೀಂ ಇಂಡಿಯಾ ಸೋಲಿನ ಕುರಿತು ಪ್ರತಿಕ್ರಿಯಿಸಿರುವ ಶೋಯೆಬ್ ಅಖ್ತರ್ ಭಾರತ ನಮ್ಮ ಅವಕಾಶಗಳನ್ನೆಲ್ಲಾ ಹಾಳು ಮಾಡಿದೆ ಎಂದು ದೂರಿದ್ದಾರೆ.
''ಭಾರತ ನಮ್ಮ ಅವಕಾಶಗಳನ್ನೆಲ್ಲಾ ಹಾಳು ಮಾಡಿದೆ. ವಾಸ್ತವವಾಗಿ ನಮ್ಮ ಕೈಯಾರೆ ನಾವೇ ಅವಕಾಶವನ್ನ ಕೈ ಚೆಲ್ಲಿದ್ದೇವೆ. ಇದು ಭಾರತದ ಸಮಸ್ಯೆಯಲ್ಲ, ನಾವು ತುಂಬಾ ಕೆಟ್ಟದಾಗಿ ಆಡಿದೆವು ಮತ್ತು ಇತರರಿಗೆ ಅದೃಷ್ಟ ಪರೀಕ್ಷೆಯನ್ನು ನೀಡಿದ್ದೇವೆ. ಭಾರತ ಬಲಿಷ್ಠವಾಗಿ ಕಂಬ್ಯಾಕ್ ಮಾಡಲಿ ಎಂದು ನಾನು ಆಶಿಸುತ್ತೇನೆ'' ಎಂದು ಅಖ್ತರ್ ಹೇಳಿದ್ದಾರೆ.
'' ಈ ಪಿಚ್ಗಳಲ್ಲಿ ಆಡುವುದು ಸುಲಭವಾಗಿಲ್ಲ ಮತ್ತು ಭಾರತದ ಪ್ರದರ್ಶನ ನಮಗೆ ಬೇಸರ ಮೂಡಿಸಿದೆ. ಬ್ಯಾಟರ್ಗಳು ಸ್ವಲ್ಪ ಹೆಚ್ಚು ತಾಳ್ಮೆವಹಿಸಿ ಆಡಬೇಕಾಗಿತ್ತು. ಆತುರ ಮಾಡದಿದ್ರೆ ಭಾರತ 150 ರನ್ ಕಲೆಹಾಕಬಹುದಿತ್ತು. ಆದ್ರೆ ದಕ್ಷಿಣ ಆಫ್ರಿಕಾ ತನ್ನ ಅನುಭವಿ ಆಟಗಾರರನ್ನು ಚೆನ್ನಾಗಿ ಬಳಸಿಕೊಂಡಿತು. ಕಿಲ್ಲರ್ ಮಿಲ್ಲರ್ ತನ್ನೆಲ್ಲಾ ಅನುಭವವನ್ನು ಧಾರೆಯೆರೆದು ಮಕ್ರಾಮ್ ಜೊತೆಗೆ ಬೊಂಬಾಟ್ ಆಟವಾಡಿದ್ರು. ಲುಂಗಿ ಎನ್ಗಿಡಿ ಅದ್ಭುತವನ್ನೇ ಸೃಷ್ಟಿಸಿದ್ರು, ಪೇಸ್ ಇಲ್ಲದಿದ್ರೂ ಶಾರ್ಟ್ ಬಾಲ್ ಮತ್ತು ಸೀಮ್ ಮೂಲಕ ವಿಕೆಟ್ ಪಡೆದರು'' ಎಂದು ಅಖ್ತರ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ತಿಳಿಸಿದ್ದಾರೆ.
ಜೊತೆಗೆ ಇಲ್ಲಿನಿಂದ ಪಾಕಿಸ್ತಾನಕ್ಕೆ ತುಂಬಾ ಕಷ್ಟವಾಗಲಿದೆ ಎಂದು ಅಖ್ತರ್ ಮರು ಉಚ್ಚರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications