ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕಠಿಣ ಹೋರಾಟದ ನಂತರ ಗೆಲುವು ಸಾಧಿಸಿದ ಟೀಂ ಇಂಡಿಯಾ ತನ್ನ ತಪ್ಪುಗಳಿಂದ ಪಾಠ ಕಲಿಯಬೇಕಾಗಿದೆ ಎಂದು ಮಾಜಿ ಕ್ರಿಕೆಟಿಗ ಸಬಾ ಕರೀಮ್ ಹೇಳಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಗೆಲ್ಲಲು ಭಾರತ ತಂಡಕ್ಕೆ ಆಸ್ಟ್ರೇಲಿಯಾ ದೊಡ್ಡ ಸವಲಾಗಲಿದೆ. ಈ ಕಠಿಣ ಸವಾಲಿಗೆ ಭಾರತ ತಂಡ ಸಜ್ಜಾಗಬೇಕಿದೆ ಎಂದು ಅವರು ಸಲಹೆ ನೀಡಿದ್ದಾರೆ.
"ಇದು ಟೀಮ್ ಇಂಡಿಯಾಕ್ಕೆ ಎಚ್ಚರಿಕೆಯ ಕರೆ. ಈ ಟೆಸ್ಟ್ ಪಂದ್ಯದಲ್ಲಿ ಆದ ಸಮಸ್ಯೆಗಳನ್ನು ಬಗೆಹರಿಸುವುದು ಮುಖ್ಯವಾಗಿದೆ. 2023ರ ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯಗಳನ್ನು ಆಡುತ್ತೇವೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆಯುವ ಬಗ್ಗೆ ಮಾತ್ರ ಚರ್ಚೆ ಮಾಡಲಾಗುತ್ತಿದೆ. ಆದರೆ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗೆಲ್ಲಬೇಕಾಗಿದೆ. ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಆದ ತಪ್ಪುಗಳು ಪುನರಾವರ್ತನೆ ಆಗಬಾರದು" ಎಂದು ಅವರು ಹೇಳಿದರು.
IPL 2023: ಈ ಕನ್ನಡಿಗರನ್ನು ತಂಡದಿಂದ ಕೈಬಿಟ್ಟ ಕ್ರಮವನ್ನು ಟೀಕಿಸಿದ ಮಾಜಿ ಕ್ರಿಕೆಟಿಗ
ಬಾಂಗ್ಲಾದೇಶದ ವಿರುದ್ಧದ 2ನೇ ಟೆಸ್ಟ್ನಲ್ಲಿ 145 ರನ್ಗಳ ಗುರಿಯನ್ನು ಬೆನ್ನತ್ತಿದ ಭಾರತ ತಂಡ ಒಂದು ಹಂತದಲ್ಲಿ 74 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಸೋಲಿನ ಭೀತಿ ಎದುರಿಸಿತ್ತು. ಆದರೆ, ರವಿಚಂದ್ರನ್ ಅಶ್ವಿನ್ ಮತ್ತು ಶ್ರೇಯಸ್ ಅಯ್ಯರ್ ಅಜೇಯ 71 ರನ್ಗಳ ಜೊತೆಯಾಟ ಆಡುವ ಮೂಲಕ ಭಾರತಕ್ಕೆ 3 ವಿಕೆಟ್ಗಳ ಜಯ ತಂದುಕೊಟ್ಟರು. ಈ ಗೆಲುವಿನಿಂದ ಭಾರತ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿತು. ವಿಶ್ವ ಟೆಸ್ಟ್ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಭದ್ರಪಡಿಸಿಕೊಂಡಿತು.
ಸ್ಪಿನ್ನರ್ ವಿರುದ್ಧ ಉತ್ತಮವಾಗಿ ಆಡುತ್ತಿಲ್ಲ
ಟೆಸ್ಟ್ ಸರಣಿಯಲ್ಲಿ ಬಾಂಗ್ಲಾದೇಶದ ಸ್ಪಿನ್ನರ್ಗಳು ಭಾರತದ ಬ್ಯಾಟರ್ಗಳನ್ನು ಕಾಡಿದರು ಎಂದು ಸಬಾ ಕರೀಮ್ ಹೇಳಿದರು. ಮೆಹಿದಿ ಹಸನ್ ಮಿರಾಜ್ ಮತ್ತು ತೈಜುಲ್ ಇಸ್ಲಾಮ್ ಭಾರತ ಅಗ್ರ ಕ್ರಮಾಂಕದ ಬ್ಯಾಟರ್ಗಳನ್ನು ಔಟ್ ಮಾಡಿದರು. ಹಸನ್ ಎರಡು ಟೆಸ್ಟ್ಗಳಲ್ಲಿ 11 ವಿಕೆಟ್ ಪಡೆದರೆ, ಇಸ್ಲಾಂ ಸರಣಿಯಲ್ಲಿ ಎಂಟು ವಿಕೆಟ್ಗಳನ್ನು ಪಡೆದರು.
"ಟೀಮ್ ಇಂಡಿಯಾ ಬ್ಯಾಟರ್ಗಳು ಸ್ಪಿನ್ನರ್ಗಳ ವಿರುದ್ಧ ಆತ್ಮವಿಶ್ವಾಸದಿಂದ ಆಡುತ್ತಿಲ್ಲ. ಅವರ ವಿರುದ್ಧ ರಕ್ಷಣಾತ್ಮಕ ಆಟ ಆಡುವಲ್ಲಿ ವಿಫಲರಾಗುತ್ತಿದ್ದೇವೆ. ಭಾರತದ ಬ್ಯಾಟರ್ಗಳು ಸ್ಪಿನ್ನರ್ಗಳ ವಿರುದ್ಧ ಆಡುವುದನ್ನು ಹೆಚ್ಚಾಗಿ ಅಭ್ಯಾಸ ಮಾಡಬೇಕಾಗುತ್ತದೆ" ಎಂದು ಸಲಹೆ ನೀಡಿದರು.
ಭಾರತದ ಮಾಜಿ ಕ್ರಿಕೆಟಿಗ ರೀತೀಂದರ್ ಸಿಂಗ್ ಸೋಧಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತದ ಬ್ಯಾಟ್ಸ್ಮನ್ಗಳು ತಮ್ಮ ಆಟವನ್ನು ಸುಧಾರಿಸಿದರೆ, ಅವರು ಆಸ್ಟ್ರೇಲಿಯಾಕ್ಕೆ ತವರಿನಲ್ಲಿ ಕಠಿಣ ಸವಾಲನ್ನು ಹಾಕಬಹುದು ಎಂದು ಹೇಳಿದ್ದಾರೆ.