ಬೆಂಗಳೂರು, ಫೆಬ್ರವರಿ 23: ನಾಳೆಯ ವೀಕೆಂಡ್ ರಾಜ್ಯದ ಕ್ರಿಕೆಟ್ ಪ್ರೇಮಿಗಳಿಗೆ ಸುದಿನ ಏಕೆಂದರೆ ಒಟ್ಟಾರೆ ಮೂರು ಪ್ರಮುಖ ಕ್ರಿಕೆಟ್ ಪಂದ್ಯಗಳು ನಾಳೆ ನಡೆಯಲಿವೆ.
ಮೊದಲಿಗೆ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್ ಪ್ರವೇಶಿಸಲಿರುವ ಕಾರಣ ಇದು ಹೈವೋಲ್ಟೇಜ್ ಪಂದ್ಯವಾಗಿರಲಿದೆ.
ದೆಹಲಿಯ ಫಿರೋಜ್ ಶಾ ಕೊಟ್ಲಾ ಮೈದಾನದಲ್ಲಿ ಬೆಳಿಗ್ಗೆ 9 ಗಂಟೆಗೆ ಪಂದ್ಯ ಪ್ರಾರಂಭವಾಗಲಿದ್ದು, ಇಲ್ಲಿಯವರೆಗೆ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ರಾಜ್ಯ ತಂಡ ನಾಳೆ ಗೆಲ್ಲುವ ನೆಚ್ಚಿನ ತಂಡವಾಗಿದೆ.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತದ ಮಹಿಳಾ ತಂಡವು ನಾಳೆ ದ.ಆಫ್ರಿಕಾ ಮಹಿಳಾ ತಂಡದ ವಿರುದ್ಧ 5ನೇ ಹಾಗೂ ಅಂತಿಮ ಟಿ20 ಆಡಲಿದೆ. ಈಗಾಗಲೇ ಸರಣಿಯಲ್ಲಿ 2-1 ಮುನ್ನಡೆ ಗಳಿಸಿರುವ ಭಾರತದ ವನಿತೆಯರು ನಾಳಿನ ಪಂದ್ಯವನ್ನು ಗೆದ್ದು ಸರಣಿ ಜಯಿಸುವ ವೀಶ್ವಾದಲ್ಲಿದ್ದಾರೆ.
ಈಗಾಗಲೇ ದ.ಆಫ್ರಿಕಾ ವಿರುದ್ಧ ಏಕದಿನ ಸರಣಿ ಗೆದ್ದು ಇತಿಹಾಸ ನಿರ್ಮಿಸಿರುವ ಭಾರತದ ಮಹಿಳೆಯರು ನಾಳಿನ ಪಂದ್ಯ ಗೆದ್ದು ಮತ್ತೊಂದು ಇತಿಹಾಸ ಬರೆಯುವರೇ ಕಾದು ನೋಡಬೇಕಿದೆ. ಪಂದ್ಯವನ್ನು ಕೇಪ್ಟೌನ್ನ ನ್ಯೂಲ್ಯಾಂಡ್ಸ್ ಅಂಗಳದಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ 4.30ಕ್ಕೆ ಪಂದ್ಯ ಆರಂಭವಾಗಲಿದೆ.
ಭಾರತ ಪುರುಷರ ಕ್ರಿಕೆಟ್ ತಂಡಕ್ಕೂ ನಾಳೆ ಪ್ರಮುಖ ಪಂದ್ಯವಿದ್ದು, ಅದು ದ.ಆಫ್ರಿಕಾ ತಂಡದ ವಿರುದ್ಧ 3ನೇ ಟಿ20 ಪಂದ್ಯವನ್ನು ಆಡಲಿದೆ. ಪ್ರಸ್ತುತ ಸರಣಿಯು 1-1 ಸಮಬಲದಲ್ಲಿದ್ದು, ನಾಳಿನ ಪಂದ್ಯ ಗೆದ್ದವರ ಪಾಲಿಗೆ ಸರಣಿ ಗೆದ್ದ ಗೌರವ ಒಲಿಯಲಿದೆ. ಈಗಾಗಲೇ ಏಕದಿನ ಸರಣಿಯಲ್ಲಿ ಐತಿಹಾಸಿಕ ವಿಜಯ ಸಾಧಿಸಿರುವ ಭಾರತ ತಂಡ ಟಿ20ಯಲ್ಲಿಯೂ ವಿಜಯ ಸಾಧಿಸಿ ಮತ್ತೊಂದು ಇತಿಹಾಸ ಸೃಷ್ಠಿಸುವ ತವಕದಲ್ಲಿದೆ.
ಕಳೆದ ಪಂದ್ಯದಲ್ಲಿ ಭಾರತದ ಬೌಲಿಂಗ್ ಕಳಪೆ ಆದ್ದರಿಂದ ಸೋಲುಂಡಿತ್ತು ಹಾಗಾಗಿ ನಾಳೆ ನಡೆಯುವ ಪಂದ್ಯಕ್ಕೆ ವೇಗಿ ಬುಮ್ರಾ ವಾಪಾಸಾಗುವ ಸಂಭವ ಇದ್ದು, ನಾಳಿನ ಪಂದ್ಯ ಕುತೂಹಲ ಮೂಡಿಸಿದೆ.