ಸ್ಪಿನ್ನರ್ ಕುಲ್ದೀಪ್ ಯಾದವ್
ಭಾರತ ತಂಡದ ಪ್ರಮುಖ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಬೌಲಿಂಗ್ ಈ ಹಿಂದಿನ ಮೊನಚು ಕಳೆದುಕೊಂಡಿದೆ. ನಿರೀಕ್ಷಿತ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಪ್ರದರ್ಶನ ನೀಡಲು ಚಾಹಲ್ ವಿಫಲವಾಗುತ್ತಿರುವುದು ತಂಡಕ್ಕೆ ಕೊಂಚ ಹಿನ್ನಡೆಯುಂಟು ಮಾಡಿತ್ತು. ಆದರೆ ಮೊದಲ ಪಂದ್ಯದಲ್ಲಿ ಚಾಹಲ್ ಗಾಯಗೊಂಡ ಕಾರಣ ಆಡುವ ಬಳಗದಲ್ಲಿ ಅವಕಾಶ ಗಿಟ್ಟಿಸಿಕೊಂಡ ಮತ್ತೋರ್ವ ಸ್ಪಿನ್ನರ್ ಕುಲ್ದೀಪ್ ಯಾದವ್ ಈ ಸರಣಿಯಲ್ಲಿ ಆಡಿದ ಎರಡು ಪಂದ್ಯಗಳಲ್ಲಿಯೂ ಅಮೋಘ ಪ್ರದರ್ಶನ ನೀಡಿದ್ದಾರೆ. ರಿಸ್ಟ್ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ ತವರಿನಲ್ಲಿ ಸಾಧಿಸಿರುವ ಯಶಸ್ಸು ಭಾರತ ತಂಡಕ್ಕೆ ಹೊಸ ಭರವಸೆ ಮೂಡಿಸಿದೆ. ಹೀಗಾಗಿ ಕುಲ್ದೀಪ್ ಟೀಮ್ ಇಂಡಿಯಾದ ಏಕದಿನ ತಂಡದಲ್ಲಿ ಸ್ಥಾನ ಗಟ್ಟಿಮಾಡಿಕೊಳ್ಳುವುದು ಬಹುತೇಕ ಖಚಿತ.
ವೇಗಿ ಮೊಹಮ್ಮದ್ ಸಿರಾಜ್
2022ರಲ್ಲಿ ಭಾರತದ ಪರವಾಗಿ ಏಕದಿನ ಮಾದರಿಯಲ್ಲಿ ಅತ್ಯಂತ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂದರೆ ಅದು ಮೊಹಮ್ಮದ್ ಸಿರಾಜ್. ತಮ್ಮ ಅದ್ಭುತ ಫಾರ್ಮ್ಅನ್ನು ಸಿರಾಜ್ ಈ ವರ್ಷವೂ ಮುಂದುವರಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಯ ಮೂರು ಪಂದ್ಯದಲ್ಲಿಯೂ ಸಿರಾಜ್ ನೀಡಿರುವ ಪ್ರದರ್ಶನ ಎಲ್ಲರ ಗಮನಸೆಳೆದಿದ್ದು ಭಾರತ ತಂಡದ ಏಕದಿನ ಮಾದರಿಯಲ್ಲಿ ಪ್ರಮುಖ ವೇಗಿಯಾಗಿ ಸ್ಥಾನವನ್ನು ಗಟ್ಟಿಮಾಡಿಕೊಳ್ಳುವ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಸಿರಾಜ್ ಒಟ್ಟು 9 ವಿಕೆಟ್ ಸಂಪಾದಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಆರಂಭಿಕ ಆಟಗಾರ ಶುಬ್ಮನ್ ಗಿಲ್
ಈ ಹಿಂದಿನ ಸರಣಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಅಮೋಘ ದ್ವಿಶತಕ ಸಿಡಿಸಿದ್ದ ಇಶಾನ್ ಕಿಶನ್ ಅವರನ್ನು ಬೆಂಚ್ನಲ್ಲಿ ಕುಳ್ಳಿರಿಸಿ ಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಶುಬ್ಮನ್ ಗಿಲ್ಗೆ ಅವಕಾಶ ನೀಡಿದಾಗ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ಆದರೆ ಲಂಕಾ ವಿರುದ್ಧದ ಸರಣಿಯಲ್ಲಿ ಗಿಲ್ ನೀಡಿದ ಪ್ರದರ್ಶನ ಈ ಟೀಕೆಗಳಿಗೆ ಉತ್ತರ ನೀಡಿದಂತಿದೆ. ತಾನೋರ್ವ ಕ್ಲಾಸ್ ಆಟಗಾರ ಎಂಬುದನ್ನು ಗಿಲ್ ಮತ್ತೊಮ್ಮೆ ಸಾಬೀತುಪಡಿಸಿದ್ದು ಶ್ರೀಲಂಕಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಸರಣಿಯ ಮೊದಲ ಪಂದ್ಯದಲ್ಲಿಯೂ ಗಿಲ್ ಅದ್ಭುತ ಆಟವನ್ನು ಪ್ರದರ್ಶಿಸಿದ್ದರು. ಕಳೆದ ಹಲವು ಸಮಯಗಳಿಂದ ಗಿಲ್ ನೀಡುತ್ತಿರುವ ಪ್ರದರ್ಶನವನ್ನು ಮುಂದುವರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಶುಬ್ಮನ್ ಗಿಲ್ ಆರಂಭಿಕನಾಗಿ ಸುದೀರ್ಘ ಕಾಲ ಭಾರತ ತಂಡದಲ್ಲಿ ಮುಂದುವರಿಯುವುದರಲ್ಲಿ ಅನುಮಾನವಿಲ್ಲ.