ನವದೆಹಲಿ, ನವೆಂಬರ್ 17: ದೆಹಲಿಯಲ್ಲಿನ ಮಾಲಿನ್ಯ ನಿಯಂತ್ರಣಕ್ಕೆ ತರಲು ಯತ್ನಿಸಿ ಅಲ್ಲಿನ ಸರ್ಕಾರ ಸೋತಿದೆ. ಪರಿಸರ ಮಾಲಿನ್ಯ ಸಮಸ್ಯೆ ಪ್ರತಿದಿನ ಉಲ್ಬಣವಾಗುತ್ತಿದೆ. ಈ ನಡುವೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಮ್ಮ ಊರು ದೆಹಲಿ ಉಳಿಸಲು ಮನವಿ ಮಾಡಿದ್ದು, ಮಾಲಿನ್ಯ ನಿಯಂತ್ರಣದ ಬಗ್ಗೆ ಸಲಹೆ ನೀಡಿದ್ದಾರೆ.
ವಿಷಪೂರಿತ ಮಾಲಿನ್ಯ ದೆಹಲಿ ಜನರ ಉಸಿರುಗಟ್ಟಿಸುತ್ತಿದೆ. ಮಾಲಿನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರ ಇನ್ನಿಲ್ಲದ ಕಸರತ್ತು ಮಾಡ್ತಿದೆ. ಕೇಂದ್ರ ಹಾಗೂ ಬೇರೆ ರಾಜ್ಯಗಳ ನೆರವು ಕೇಳ್ತಿದೆ. ಇದೇ ವಿಚಾರ ರಾಜಕಾರಣಿಗಳ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಈ ಮಧ್ಯೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಲಿನ್ಯ ನಿಯಂತ್ರಣದ ಬಗ್ಗೆ ಸಲಹೆ ನೀಡಿದ್ದಾರೆ.

ದೆಹಲಿಯಲ್ಲಿ ವಾಹನ ಬಳಕೆ ವಿಪರೀತವಾಗಿದೆ. ಮಾಲಿನ್ಯ ನಿಯಂತ್ರಣಕ್ಕೆ ಖಾಸಗಿ ವಾಹನ ಬಳಸುವ ಬದಲು ಸಾರ್ವಜನಿಕ ವಾಹನ ಬಳಸಿ ಎಂದು ಕೊಹ್ಲಿ ಸಲಹೆ ನೀಡಿದ್ದಾರೆ.
ಸಾಧ್ಯವಾದಷ್ಟು ಖಾಸಗಿ ವಾಹನ, ಕಾರಿನ ಬಳಕೆಯನ್ನು ಕಡಿಮೆ ಮಾಡಿ. ಹೆಚ್ಚೆಚ್ಚು ಬಸ್, ಮೆಟ್ರೋ, ಕ್ಯಾಬ್ ನಲ್ಲಿ ಸಂಚರಿಸಿ. ವಾರದಲ್ಲಿ ಒಮ್ಮೆ ನೀವು ಹೀಗೆ ಮಾಡಿದ್ರೂ ದೊಡ್ಡ ವ್ಯತ್ಯಾಸವುಂಟಾಗುತ್ತದೆ ಎಂದು ಕೊಹ್ಲಿ ಹೇಳಿದ್ದು, #MujheFarakPadtaHai ಎಂಬ ಟ್ಯಾಗ್ ನೊಂದಿಗೆ ಟ್ವೀಟ್ ಮಾಡಿದ್ದಾರೆ.
'ದೆಹಲಿಯಲ್ಲಿ ಮಾಲಿನ್ಯ ಯಾವ ರೀತಿಯಲ್ಲಿದೆ ಎಂಬುದು ನಿಮಗೆಲ್ಲ ಗೊತ್ತು. ನಾನು ಈ ಬಗ್ಗೆ ಎಲ್ಲರ ಗಮನ ಸೆಳೆಯಲು ಬಯಸ್ತೇನೆ. ಪ್ರತಿಯೊಬ್ಬರೂ ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಈ ಸಮಸ್ಯೆಯಿಂದ ಹೊರ ಬರಲು ನಾವು ಏನು ಮಾಡುತ್ತಿದ್ದೇವೆ ಎಂಬ ಬಗ್ಗೆ ಯೋಚನೆ ಮಾಡಬೇಕಿದೆ. ಮಾಲಿನ್ಯದ ಪಂದ್ಯ ಗೆಲ್ಲಬೇಕಾದ್ರೆ ಎಲ್ಲರೂ ಒಂದಾಗಿ ಆಡಬೇಕು. ಯಾಕೆಂದ್ರೆ ಮಾಲಿನ್ಯ ಕಡಿಮೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಅದರಲ್ಲೀ ದೆಹಲಿ ನಿವಾಸಿಗಳ ಜವಾಬ್ದಾರಿ ಹೆಚ್ಚಿದೆ ಎಂದು ಕೊಹ್ಲಿ ಹೇಳಿದ್ದಾರೆ.