WTC ಫೈನಲ್ ಸೋಲಿನ ಬಳಿಕ ಭಾರತದ ಡ್ರೆಸ್ಸಿಂಗ್ ರೂಮ್ನಲ್ಲಿ ಇಷ್ಟೆಲ್ಲಾ ನಡೆದಿತ್ತು!

ನವದೆಹಲಿ: ಟಿ20 ವಿಶ್ವಕಪ್ ಬಳಿಕ ತಾನು ಭಾರತದ ಟಿ20 ನಾಯಕತ್ವದಿಂದ ಕೆಳಗಿಳಿಯುವುದಾಗಿ ವಿರಾಟ್ ಕೊಹ್ಲಿ ಘೋಷಿಸಿದ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ತಂಡ ಮತ್ತು ವಿರಾಟ್ ನಾಯಕತ್ವದ ಬಗ್ಗೆ ಬೇರೆ ಬೇರೆ ರೀತಿಯ ಮಾತುಕತೆಗಳು ಕ್ರಿಕೆಟ್ ವಲಯದಲ್ಲಿ ನಡೆಯುತ್ತಿವೆ. ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯುತ್ತಿರುವುದಕ್ಕೆ ಬೇರೆ ಬೇರೆ ಕಾರಣಗಳಿವೆ ಎಂದು ಒಂದಿಷ್ಟು ವರದಿಗಳು ಹೇಳುತ್ತಿವೆ. ಆದರೆ ಈ ವರದಿಗಳು ಎಷ್ಟರಮಟ್ಟಿಗೆ ಸತ್ಯ ಅಥವಾ ಸುಳ್ಳು ಅನ್ನೋದು ಗೊತ್ತಿಲ್ಲ.
ವಿರಾಟ್ ಕೊಹ್ಲಿ ತಂಡದಲ್ಲಿ ಆಡಲು ಕೆಲ ಆಟಗಾರರಿಗೆ ಮೀಸಲಾತಿ ನೀಡಲಾಗುತ್ತಿತ್ತು ಎಂಬ ಆರೋಪಗಳು ಕೇಳಿ ಬಂದಿವೆ. ಈ ಆರೋಪ ಜೋರಾಗಿದ್ದು ಕಳೆದ ಜೂನ್ನಲ್ಲಿ ರೋಸ್ ಬೌಲ್ನಲ್ಲಿ ನಡೆದಿದ್ದ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತ ಬಳಿಕ. ಕೆಲ ಆಟಗಾರರನ್ನು ಕೊಹ್ಲಿ ತನ್ನ ತಂಡದಲ್ಲಿ ಉಳಿಸಿಕೊಳ್ಳುತ್ತಿರುತ್ತಾರೆ. ಇದೇ ಕಾರಣಕ್ಕೆ ಪಂದ್ಯ ಸೋತಿತ್ತು ಎಂಬ ಆರೋಪ ಕೇಳಿ ಬಂದಿತ್ತು.

WTC ಫೈನಲ್ ಸೋಲಿನ ಬಳಿಕ ರಹಾನೆ, ಪೂಜಾರಗೆ ಕೊಹ್ಲಿ ತರಾಟೆ?
ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತ ಬಳಿಕ ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಮಧ್ಯೆ ಅಸಮಾಧಾನ ಏರ್ಪಟ್ಟಿತ್ತು ಎಂದು ವರದಿಯೊಂದು ಹೇಳಿದೆ. ಫೈನಲ್ ಪಂದ್ಯದ ಬಳಿಕ ಭಾರತದ ಡ್ರೆಸ್ಸಿಂಗ್ ರೂಮ್ನಲ್ಲಿ ಪೂಜಾರ ಮತ್ತು ರಹಾನೆ ವಿರುದ್ಧ ರೇಗಾಡಿದ್ದರು. ತನ್ನ ಕಳಪೆ ಸ್ಟ್ರೈಕ್ ರೇಟ್ಗಾಗಿ ಪೂಜಾರ ಎದುರು ಕೊಹ್ಲಿ ಕೋಪ ತೋರಿಕೊಂಡಿದ್ದರೆ, ಟೆಸ್ಟ್ ವೃತ್ತಿ ಬದುಕಿನಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವುದಕ್ಕೆ ಉಪನಾಯಕ ಅಜಿಂಕ್ಯ ರಹಾನೆ ಕೂಡ ಕೊಹ್ಲಿ ಕೋಪಕ್ಕೆ ಗುರಿಯಾಗಿದ್ದರು. ಈ ಸಂಗತಿಯ ಬಗ್ಗೆ ಇಬ್ಬರು ಆಟಗಾರರು (ಪೂಜಾರ ಮತ್ತು ರಹಾನೆ) ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಕಾರ್ಯದರ್ಶಿ ಜಯ ಶಾ ಅವರಿಗೆ ದೂರಿತ್ತಿದ್ದರು. ಪಂದ್ಯದ ಬಳಿಕ ಕೊಹ್ಲಿ ತಮ್ಮ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾಗಿ ಶಾಗೆ ಆಟಗಾರರು ದೂರು ನೀಡಿದ್ದರಿಂದ ಕೊಹ್ಲಿ ನಾಯಕತ್ವಕ್ಕೆ ಕಂಟಕ ಎದುರಾಗಿದೆ. ಇದರ ಬೆಳವಣಿಗೆಯ ಭಾಗವಾಗಿಯೇ ಕೊಹ್ಲಿ ಟಿ20 ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ಪ್ರಕಟಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಟಿ20 ವಿಶ್ವಕಪ್ ಬಳಿಕ ಏಕದಿನ ನಾಯಕತ್ವದಿಂದಲೂ ಕೊಹ್ಲಿ ಕೆಳಕ್ಕೆ?
ಕೊಹ್ಲಿ ನಾಯಕತ್ವದ ಬಗ್ಗೆ ದೂರುಗಳು ಬಂದಿರುವುದರಿಂದ ಬಿಸಿಸಿಐ ಇನ್ನುಳಿದ ಆಟಗಾರರ ಜೊತೆಗೂ ಕೊಹ್ಲಿ ನಾಯಕತ್ವದ ಬಗ್ಗೆ ಅಭಿಪ್ರಾಯ ಕಲೆ ಹಾಕಲಿದೆ ಎಂದು ತಿಳಿದು ಬಂದಿದೆ. ಗಾಳಿ ಸುದ್ದಿಯ ಪ್ರಕಾರ, ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಬಳಿ ವಿರಾಟ್ ಕೊಹ್ಲಿ ಏಕದಿನ ನಾಯಕತ್ವದ ಬಗ್ಗೆಯೂ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಅಂದರೆ ಟಿ20 ವಿಶ್ವಕಪ್ ಬಳಿಕ ಕೊಹ್ಲಿ ಏಕದಿನ ಮತ್ತು ಟೆಸ್ಟ್ ನಾಯಕತ್ವದಿಂದ ಕೆಳಗಿಳಿಯಲೂ ಬಹುದು ಅಥವಾ ಟೆಸ್ಟ್ ಒಂದರಲ್ಲೇ ನಾಯಕರಾಗಿ ಮುಂದುವರೆಯಬಹುದು. WTC ಫೈನಲ್ ಪಂದ್ಯದ ಬಳಿಕ ಮಾತನಾಡಿದ್ದ ಕೊಹ್ಲಿ, ಬ್ಯಾಟ್ಸ್ಮನ್ಗಳು ಒತ್ತಡಕ್ಕೀಡುವ ಮಾಡುವಂತೆ ಬೌಲರ್ಗಳು ಮಾಡಬಾರದು. ತಂಡದಲ್ಲಿ ಗಟ್ಟಿಯಾಗಬೇಕಾದರೆ ಬ್ಯಾಟ್ಸ್ಮನ್ಗಳು ಕೂಡ ಹೇಗಾದರೂ ತಂಡಕ್ಕೆ ರನ್ ಗಳಿಸಲೇಬೇಕು ಎಂದು ಕೊಹ್ಲಿ ಹೇಳಿದ್ದರಂತೆ. ಈ ಎಲ್ಲಾ ಸಂಗತಿಗಳನ್ನು ಪರಿಗಣಿಸಿ ಬಿಸಿಸಿಐ ಮುಂದೆ ತನ್ನ ನಿರ್ಧಾರ ಪ್ರಕಟಿಸಲಿದೆ ಎಂದು ತಿಳಿದು ಬಂದಿದೆ.

WTC ಫೈನಲ್ನಲ್ಲಿ ಭಾರತ-ನ್ಯೂಜಿಲೆಂಡ್ ಸ್ಕೋರ್
WTC ಆರಂಭಿಕ ಆವೃತ್ತಿಯ ಫೈನಲ್ ಪಂದ್ಯ ಇಂಗ್ಲೆಂಡ್ನ ಸೌಥಾಂಪ್ಟನ್ನಲ್ಲಿರುವ ರೋಸ್ ಬೌಲ್ ಸ್ಟೇಡಿಯಂನಲ್ಲಿ ನಡೆದಿತ್ತು. ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟಿದ್ದ ಭಾರತ ಮೊದಲ ಇನ್ನಿಂಗ್ಸ್ನಲ್ಲಿ ರೋಹಿತ್ ಶರ್ಮಾ 34, ಶುಭ್ಮನ್ ಗಿಲ್ 28, ಚೇತೇಶ್ವರ ಪೂಜಾರ 8, ವಿರಾಟ್ ಕೊಹ್ಲಿ 44, ಅಜಿಂಕ್ಯ ರಹಾನೆ 49, ರಿಷಭ್ ಪಂತ್ 4, ರವೀಂದ್ರ ಜಡೇಜಾ 15, ರವಿಚಂದ್ರನ್ ಅಶ್ವಿನ್ 22 ರನ್ನೊಂದಿಗೆ 92.1 ಓವರ್ಗೆ ಎಲ್ಲಾ ವಿಕೆಟ್ ಕಳೆದು 217 ರನ್ ಗಳಿಸಿತ್ತು. ನ್ಯೂಜಿಲೆಂಡ್ ಆರಂಭಿಕ ಇನ್ನಿಂಗ್ಸ್ನಲ್ಲಿ 99.2 ಓವರ್ಗೆ 249 ರನ್ ಬಾರಿಸಿ ಮುನ್ನಡೆ ಸಾಧಿಸಿತ್ತು. ದ್ವಿತೀಯ ಇನ್ನಿಂಗ್ಸ್ನಲ್ಲಿ ಭಾರತ ರೋಹಿತ್ ಶರ್ಮಾ 30, ಶುಭ್ಮನ್ ಗಿಲ್ 8, ಚೇತೇಶ್ವರ ಪೂಜಾರ 15, ವಿರಾಟ್ ಕೊಹ್ಲಿ 13, ಅಜಿಂಕ್ಯ ರಹಾನೆ 15, ರಿಷಭ್ ಪಂತ್ 41, ರವೀಂದ್ರ ಜಡೇಜಾ 16, ರವಿಚಂದ್ರನ್ ಅಶ್ವಿನ್ 7, ಮೊಹಮ್ಮದ್ ಶಮಿ 13 ರನ್ನೊಂದಿಗೆ 73 ಓವರ್ಗೆ 170 ರನ್ ಗಳಿಸಿತ್ತು. ನ್ಯೂಜಿಲೆಂಡ್ ದ್ವಿತೀಯ ಇನ್ನಿಂಗ್ಸ್ನಲ್ಲಿ 45.5 ಓವರ್ಗೆ 2 ವಿಕೆಟ್ ಕಳೆದು 140 ರನ್ ಗಳಿಸಿ ಟ್ರೋಫಿ ಜಯಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications