ಭಾರತ 'ರಾಜ'ನಂತೆ ಸೆಮಿಫೈನಲ್ ಹೋಗೋದು ಖಚಿತ: ಮೆಕಲಂ ಭವಿಷ್ಯ
ಲಂಡನ್, ಜೂನ್ 1: ವಿಶ್ವಕಪ್ ಸಮರ ಆರಂಭವಾದಾಗಿಂದಲೂ ಯಾರು ಹೆಚ್ಚು ಶಕ್ತರು, ಯಾವ ತಂಡ ಗೆಲ್ಲಬಹುದು ಎಂಬ ಲೆಕ್ಕಾಚಾರ ಜೋರಾಗಿದೆ. ನ್ಯೂಜಿಲೆಂಡ್ನ ಮಾಜಿ ನಾಯಕ ಬ್ರೆಂಡನ್ ಮೆಕಲಂ, ವಿಶ್ವಕಪ್ನಲ್ಲಿ ಆಡುತ್ತಿರುವ ಎಲ್ಲ ತಂಡಗಳ ಪ್ರತಿ ಪಂದ್ಯದ ಭವಿಷ್ಯ ನುಡಿದಿದ್ದಾರೆ. ಯಾರು ಎಷ್ಟು ಪಂದ್ಯಗಳನ್ನು ಗೆಲ್ಲಬಹುದು, ಯಾವ ತಂಡ ಯಾರ ಎದುರು ಸೋಲುತ್ತದೆ, ಯಾರು ಸೆಮಿಫೈನಲ್ ಪ್ರವೇಶಿಸುತ್ತಾರೆ ಎಂದು ಮೆಕಲಂ ಲೆಕ್ಕಾಚಾರ ಹಾಕಿ ಬರೆದಿಟ್ಟಿದ್ದಾರೆ.
ನ್ಯೂಜಿಲೆಂಡ್ ತಂಡ ವಿಕೆಟ್ ಕೀಪರ್, ನಾಯಕ, ಅದ್ಭುತ ಫೀಲ್ಡರ್, ಮಿಗಿಲಾಗಿ ಸ್ಫೋಟಕ ಬ್ಯಾಟ್ಸ್ಮನ್ ಆಗಿದ್ದ ಬ್ರೆಂಡನ್ ಮೆಕಲಂ, ಎಲ್ಲ ತಂಡಗಳ ಬ್ಯಾಟಿಂಗ್ ಹಾಗೂ ಬೌಲಿಂಗ್ ಸಾಮರ್ಥ್ಯವನ್ನು ಅಳೆದೂ ತೂಗಿ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.
ಬ್ರೆಂಡನ್ ಮೆಕಲಂ ಪ್ರಕಾರ, ಲೀಗ್ ಪಂದ್ಯಗಳಲ್ಲಿ ಭರ್ಜರಿ ಜಯಗಳಿಸಿ ಎದುರಾಳಿಗಳಿಗೆ ಆಘಾತ ನೀಡುವ ಸಾಮರ್ಥ್ಯ ಇರುವ ತಂಡಗಳೆಂದರೆ ಇಂಗ್ಲೆಂಡ್ ಮತ್ತು ಭಾರತ. ಈ ಎರಡೂ ತಂಡಗಳು ತಾವಾಡುವ 9 ಪಂದ್ಯಗಳ ಪೈಕಿ ಎಂಟು ಪಂದ್ಯಗಳಲ್ಲಿ ಗೆಲ್ಲುತ್ತವೆ ಎಂದು ಮೆಕಲಂ ಹೇಳಿದ್ದಾರೆ. ಇನ್ನು ಆಸ್ಟ್ರೇಲಿಯಾ ಆರು ಪಂದ್ಯಗಳಲ್ಲಿ ಗೆದ್ದು ಸೆಮಿಫೈನಲ್ ಪ್ರವೇಶಿಸುತ್ತದೆಯಂತೆ.
ಆದರೆ, ಸೆಮಿಫೈನಲ್ ಪ್ರವೇಶಿಸುವ ನಾಲ್ಕನೆಯ ತಂಡ ಯಾವುದು ಎಂದು ನಿರ್ದಿಷ್ಟವಾಗಿ ಹೇಳಲು ಅವರಿಗೆ ಸಾಧ್ಯವಾಗಿಲ್ಲ. ನಾಲ್ಕು ತಂಡಗಳ ನಡುವೆ ನಾಲ್ಕನೆಯ ಸ್ಥಾನಕ್ಕೆ ಪೈಪೋಟಿ ಇದೆ ಎನ್ನುವುದು ಅವರ ಅಭಿಪ್ರಾಯ. ಅದರಲ್ಲಿ ಅವರ ತವರಿನ ತಂಡ ನ್ಯೂಜಿಲ್ಯಾಂಡ್ ಕೂಡ ಇದೆ. ವೆಸ್ಟ್ ಇಂಡೀಸ್, ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಭಾರಿ ಪೈಪೋಟಿ ಇರಲಿದೆ ಎಂದಿರುವ ಅವರು, ತಮ್ಮ ದೇಶದ ತಂಡ ಅದೃಷ್ಟದೊಂದಿಗೆ ನಾಲ್ಕರ ಘಟ್ಟ ತಲುಪಲಿ ಎಂದು ಆಶಿಸಿದ್ದಾರೆ.
ಭಾರತ ಸೋಲುವುದು ಒಂದೇ ಪಂದ್ಯದಲ್ಲಿ
ಮೆಕಲಂ ಅವರ ಅಭಿಪ್ರಾಯದಂತೆ, ಇಂಗ್ಲೆಂಡ್ ಒಂದು ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲಲಿದೆ. ಹಾಗೆಯೇ ಭಾರತ, ಇಂಗ್ಲೆಂಡ್ ವಿರುದ್ಧ ಮಾತ್ರ ಸೋಲು ಅನುಭವಿಸಲಿದೆ. ಉಳಿದಂತೆ ಎರಡೂ ತಂಡಗಳು ಎಲ್ಲ ಪಂದ್ಯಗಳಲ್ಲಿಯೂ ಎದುರಾಳಿಗಳನ್ನು ಬಗ್ಗುಬಡಿಯಲಿವೆ.
ಮಳೆ ಮತ್ತು ಅದೃಷ್ಟ ಕೂಡ ನಾಲ್ಕನೆಯ ಹಂತದ ತಂಡದ ಸ್ಥಾನವನ್ನು ನಿರ್ಧರಿಸುವಲ್ಲಿ ಪಾತ್ರ ವಹಿಸುವ ಸಾಧ್ಯತೆ ಇದೆ. ನ್ಯೂಜಿಲೆಂಡ್ ಸ್ವಲ್ಪ ಅದೃಷ್ಟ ಪಡೆದು ಅರ್ಜತೆ ಗಿಟ್ಟಿಸಬಹುದು ಎಂಬ ಆಶಯ ನನಗಿದೆ ಎಂದು ಮೆಕಲಂ ಫೇಸ್ಬುಕ್ ಪೋಸ್ಟ್ನಲ್ಲಿ ಬರೆದಿದ್ದಾರೆ.
ವಿಶ್ವಕಪ್: ಕೆಳಕ್ರಮಾಂಕದ ಬ್ಯಾಟ್ಸ್ಮನ್ಗಳ ಬಗ್ಗೆ ಕೊಹ್ಲಿ ಹೇಳಿದ್ದಿದು
ಭಾರತ ಗೆಲ್ಲುವುದು ಕಷ್ಟ ಎಂದ ಮಾರ್ಕ್ ವಾ
ಮೆಕಲಂ ಅವರ ವಿಶ್ಲೇಷಣೆಯನ್ನು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮಾರ್ಕ್ ವಾ ಭಾಗಶಃ ಒಪ್ಪಿಕೊಂಡಿದ್ದಾರೆ. ಆದರೆ, ಭಾರತದ ವಿಚಾರದಲ್ಲಿ ಅವರು ತಕರಾರು ಎತ್ತಿದ್ದಾರೆ. ನಾಲ್ಕರ ಘಟ್ಟದಲ್ಲಿ ಭಾರತಕ್ಕೆ ಅವಕಾಶ ಸಿಗುವ ಸಾಧ್ಯತೆಗೆ ಅವರು ಸಹಮತ ವ್ಯಕ್ತಪಡಿಸಿಲ್ಲ.
ಭಾರತದ ಮಧ್ಯಮ ಕ್ರಮಾಂಕ ಬಹಳ ದುರ್ಬಲವಾಗಿದೆ. ಅಲ್ಲದೆ, ಅದು ನಾಯಕ ವಿರಾಟ್ ಕೊಹ್ಲಿ ಮತ್ತು ವೇಗಿ ಜಸ್ಪ್ರೀತ್ ಬೂಮ್ರಾ ಅವರ ಮೇಲೆ ಅತಿಯಾಗಿ ಅವಲಂಬನೆ ಹೊಂದಿದೆ. ಹೀಗಾಗಿ ಸೆಮಿಫೈನಲ್ ತಲುಪಲು ಭಾರತ ತೀರಾ ಕಷ್ಟಪಡಬೇಕಿದೆ ಎಂದು ಮಾರ್ಕ್ ವಾ ಹೇಳಿದ್ದಾರೆ.

ರಾಹುಲ್ ಮೇಲೆ ಭರವಸೆ
ಮಾರ್ಕ್ ವಾ ಅವರ ಅಭಿಪ್ರಾಯಕ್ಕೆ ಭಾರತದ ಕ್ರಿಕೆಟ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಭಾರತದ ಮಧ್ಯಮ ಕ್ರಮಾಂಕದ ತಲೆನೋವು ಸಂಪೂರ್ಣವಾಗಿ ಮರೆಯಾಗಿಲ್ಲ. ಬಾಂಗ್ಲಾದೇಶದ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ನಾಲ್ಕನೆಯ ಕ್ರಮಾಂಕದಲ್ಲಿ ಆಡಿದ್ದ ಕೆ.ಎಲ್. ರಾಹುಲ್ ಭರ್ಜರಿ ಶತಕ ಬಾರಿಸಿ ಸದ್ಯಕ್ಕೆ ತಾವೇ ಆ ಜಾಗಕ್ಕೆ ಸೂಕ್ತ ಎಂದು ಭರವಸೆ ಮೂಡಿಸಿದ್ದಾರೆ. ವಿಶ್ವಕಪ್ ಪಂದ್ಯಗಳಲ್ಲಿ ಅವರು ಅದನ್ನು ಸಾಬೀತುಪಡಿಸಬೇಕಿದೆ.
ಹೀನಾಯ ಸೋಲಿನ ಬಳಿಕ ಪಾಕ್ ನಾಯಕ ಸರ್ಫರಾಝ್ ಹೇಳಿದ್ದಿದು

ರಾಹುಲ್ ಹೊರತು ಬೇರೆ ನಂಬಿಕೆಯಿಲ್ಲ
ಆದರೆ, ಆರಂಭಿಕ ಆಟಗಾರನಾಗಿರುವ ರಾಹುಲ್, ವಿಶ್ವಕಪ್ನ ಒತ್ತಡದ ಕ್ಷಣಗಳಲ್ಲಿ ನಾಲ್ಕನೆಯ ಕ್ರಮಾಂಕವನ್ನು ಹೇಗೆ ನಿಭಾಯಿಸಲಿದ್ದಾರೆ ಎನ್ನುವುದು ಮುಂದಿರುವ ಪ್ರಶ್ನೆ. 2015ರ ವಿಶ್ವಕಪ್ ಮುಗಿದಾಗಿನಿಂದಲೂ ಭಾರತಕ್ಕೆ ನಾಲ್ಕನೆಯ ಕ್ರಮಾಂಕಕ್ಕೆ ಸೂಕ್ತ ಆಟಗಾರ ದೊರಕಿಲ್ಲ. ತಂಡದಲ್ಲಿರುವ ಕೇದಾರ್ ಜಾಧವ್ ಮತ್ತು ಆಲ್ರೌಂಡರ್ ವಿಜಯಶಂಕರ್ ಈ ಕೊರತೆಯನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸ ಮೂಡಿಲ್ಲ. ಹೀಗಾಗಿ ಅಲ್ಲಿಗೆ ಉಳಿದಿರುವ ಏಕೈಕ ನಂಬಿಕೆ ಕೆಎಲ್ ರಾಹುಲ್ ಮಾತ್ರ. ರಾಹುಲ್ ಈ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿದರೆ ಭಾರತಕ್ಕೆ ಯಶಸ್ಸು ಸಿಗುವುದರಲ್ಲಿ ಅನುಮಾನವಿಲ್ಲ. ಆದರೆ, ಆರಂಭಿಕ ಜೋಡಿಯಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಅಷ್ಟೇ ಪರಿಣಾಮಕಾರಿ ಆರಂಭ ಒದಗಿಸಬೇಕು.
ಬ್ರೆಂಡನ್ ಮೆಕಲಂ ಅವರ ಭವಿಷ್ಯ ನಿಜವಾಗಲಿದೆಯೇ ಅಥವಾ ಮಾರ್ಕ ವಾ ಅವರ ಟೀಕೆಯೇ ನಿಜವಾಗಲಿದೆಯೇ ಎಂಬುದನ್ನು ಕಾದು ನೋಡಬೇಕು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications