ಚಂಡೀಗಢ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಹಾಕಿ ತಂಡದಲ್ಲಿದ್ದ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳ ಪುರುಷ ಆಟಗಾರರು ಮತ್ತು ಮಹಿಳಾ ಆಟಗಾರ್ತಿಯರಿಗೆ ಅವರವರ ತವರಿನಲ್ಲಿ ಬುಧವಾರ (ಆಗಸ್ಟ್ 11) ಭರ್ಜರಿ ಸ್ವಾಗತ ಲಭಿಸಿದೆ. ಆಗಸ್ಟ್ 8ರ ಭಾನುವಾರವಷ್ಟೇ ಮುಕ್ತಾಯಗೊಂಡ ಟೋಕಿಯೋ ಒಲಿಂಪಿಕ್ಸ್ ಪುರುಷರ ಮತ್ತು ಮಹಿಳೆಯರ ಹಾಕಿ ಪಂದ್ಯದಲ್ಲಿ ಎರಡೂ ತಂಡಗಳು ಉತ್ತಮ ಪ್ರದರ್ಶನ ನೀಡಿದ್ದವು. ಪುರುಷರ ತಂಡ ಕಂಚು ಗೆದ್ದಿದ್ದರೆ, ಮಹಿಳಾ ತಂಡ ಇದೇ ಮೊದಲ ಬಾರಿಗೆ ಸೆಮಿಫೈನಲ್ಗೆ ಪ್ರವೇಶಿಸಿ ದಾಖಲೆ ನಿರ್ಮಿಸಿತ್ತು.
ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಗೆದ್ದಿರುವ 4 ಕ್ರಿಕೆಟಿಗರ ಪಟ್ಟಿ
ಟೋಕಿಯೋ ಒಲಿಂಪಿಕ್ಸ್ನಲ್ಲಿ ಹಾಕಿ ಸ್ಪರ್ಧೆಯಲ್ಲಿ ಆಡಿ ದೇಶಕ್ಕೆ ಕಂಚಿನ ಪದಕ ಗೆದ್ದ ಭಾರತೀಯ ಹಾಕಿ ಪುರುಷರ ತಂಡದಲ್ಲಿದ್ದ ನಾಯಕ ಮನ್ಪ್ರೀತ್ ಸಿಂಗ್, ಮಹಿಳಾ ಹಾಕಿ ಪ್ಲೇಯರ್ ಗುರ್ಜಿತ್ ಕೌರ್ ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್ನಲ್ಲಿ ಬುಧವಾರ ಪ್ರಾರ್ಥನೆ ಸಲ್ಲಿಸಿದರು.
ಹಬ್ಬದ ರೀತಿಯಲ್ಲಿ ಆಟಗಾರರ ಬರಮಾಡಿಕೊಂಡು ಮೆರವಣಿಗೆ
ಟೋಕಿಯೋದಿಂದ ಅಮೃತಸರದಲ್ಲಿರುವ ಶ್ರೀ ಗುರು ರಾಮ್ ದಾಸ್ ಜೀ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಟಗಾರರು ಆಗಮಿಸಿದ ತಕ್ಷಣ ಆಟಗಾರರಿಗೆ ಅಲ್ಲಿನ ಜಿಲ್ಲಾಡಳಿತದಿಂದ ಅದ್ದೂರಿ ಸ್ವಾಗತ ಲಭಿಸಿತು. ರಸ್ತೆಯ ಇಕ್ಕೆಲಗಳಲ್ಲಿ ಜನ ಸೇರಿ ಹಬ್ಬರ ರೀತಿಯಲ್ಲಿ ಆಟಗಾರರನ್ನು ಸ್ವಾಗತಿಸಿದ್ದು ಕಂಡುಬಂತು. ಮೆರವಣಿಗೆ ಸಾಗುತ್ತಿದ್ದಂತೆ ಕೆಲವರು ಢೋಲ್ ಬಡಿಯುತ್ತಿದ್ದರೆ ಇನ್ನೂ ಕೆಲವರು ಭಾಂಗ್ರ ನೃತ್ಯದ ಮೂಲಕ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು.
ಶಕೀಬ್ ಅಲ್ ಹಸನ್, ಸ್ಟಫಾನಿ ಟೇಲರ್ಗೆ ಜುಲೈ ತಿಂಗಳ ಐಸಿಸಿ ಪ್ಲೇಯರ್ ಆಫ್ ದ ಮಂಥ್ ಪ್ರಶಸ್ತಿ
ಪುರುಷರ ಹಾಕಿ ತಂಡಕ್ಕೆ ಭರ್ಜರಿ ನಗದು ಪುರಸ್ಕಾರ ಘೋಷಣೆ
ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತೀಯ ಪುರುಷರ ತಂಡ ಕಂಚಿನ ಪದಕ ಜಯಿಸಿತ್ತು. ಇದು ಭಾರತೀಯ ಹಾಕಿ ತಂಡಕ್ಕೆ ಒಲಿಂಪಿಕ್ಸ್ ನಲ್ಲಿ 41 ವರ್ಷಗಳ ಬಳಿಕ ಸಿಕ್ಕಿದ ಪದಕ. ಹೀಗಾಗಿ ಹಾಕಿ ಪುರುಷರ ತಂಡಕ್ಕೆ ಭರ್ಜರಿ ನಗದು ಪುರಸ್ಕಾರವೂ ಘೋಷಣೆಯಾಗಿದೆ.
* ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿಂದ: ಸುರೇಂದರ್ ಕುಮಾರ್ ಮತ್ತು ಸುಮಿತ್ ಅವರಿಂದ ತಲಾ 2.5 ಕೋಟಿ ರೂಪಾಯಿ, ಸರ್ಕಾರಿ ಉದ್ಯೋಗಗಳು ಮತ್ತು ಹರಿಯಾಣ ಶಹರಿ ವಿಕಾಸ್ ಪ್ರಾಧಿಕಾರನ್ (HSVP) ಪ್ಲಾಟ್ಗಳಲ್ಲಿ ರಿಯಾಯಿತಿ ದರದಲ್ಲಿ ವಾಸಿಸಲು ಅವಕಾಶ.
* ಬಿಸಿಸಿಐನಿಂದ: ಸಂಪೂರ್ಣ ತಂಡಕ್ಕೆ 1.25 ಕೋಟಿ ರೂಪಾಯಿ
* BYJU'S ನಿಂದ: 1 ಕೋಟಿ ರೂಪಾಯಿ
* ಐಒಎಯಿಂದ: 25 ಲಕ್ಷ ರೂಪಾಯಿ ದೊರೆತಿದೆ.
1980ರಲ್ಲಿ ಬಂಗಾರ ಗೆದ್ದ ಬಳಿಕ ಭಾರತಕ್ಕೆ ಇದೇ ಮೊದಲ ಪದಕ
ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತ ಗೆದ್ದ ಕಂಚಿನ ಪದಕ ವಿಶೇಷ ಯಾಕೆಂದರೆ 1980ರ ಒಲಿಂಪಿಕ್ಸ್ನಲ್ಲಿ ಬಂಗಾರ ಗೆದ್ದ ಬಳಿಕ ಇದೇ ಮೊದಲಬಾರಿಗೆ ಭಾರತಕ್ಕೆ ಪದಕ ಲಭಿಸಿತ್ತು. ಆಗಸ್ಟ್ 5ರ ಗುರುವಾರ ನಡೆದ ಕಂಚಿನ ಪದಕದ ಪಂದ್ಯದಲ್ಲಿ ಜರ್ಮನಿ ವಿರುದ್ಧ ಭಾರತ 5-4ರ ಜಯ ಗಳಿಸಿತ್ತು. ಪಂದ್ಯದಲ್ಲಿ ಮೊದಲು ಗೋಲ್ ಖಾತೆ ತೆರೆದಿದ್ದು ಜರ್ಮನಿ ತಂಡ. ಮೊದಲ ಕ್ವಾರ್ಟರ್ನ 2ನೇ ನಿಮಿಷದಲ್ಲಿ ತೈಮೂರ್ ಒರುಜ್ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ನೀಡಿದರು. ಅದಾಗಿ ಮೊದಲ ಕ್ವಾರ್ಟರ್ನಲ್ಲಿ ಎರಡೂ ತಂಡಗಳಿಂದ ಗೋಲ್ ದಾಖಲಾಗಲಿಲ್ಲ. ಮೊದಲ ಕ್ವಾರ್ಟರ್ 1-0ಯಿಂದ ಕೊನೆಗೊಂಡಿತು. ಆದರೆ ದ್ವಿತೀಯ ಕ್ವಾರ್ಟರ್ ಆರಂಭದಲ್ಲೇ ಭಾರತ ಗೋಲ್ ಬಾರಿಸಿತು. 17ನೇ ನಿಮಿಷದಲ್ಲಿ ಸಿಮರ್ಜೀತ್ ಸಿಂಗ್ ಗೋಲ್ ಬಾರಿಸಿ ಭಾರತಕ್ಕೆ ಹುರುಪು ತುಂಬಿದರು. ಮತ್ತೆ ಜರ್ಮನಿಯ ನಿಕ್ಲಾಸ್ ವೆಲ್ಲೆನ್ 24ನೇ ನಿಮಿಷದಲ್ಲಿ ಗೋಲ್ ಬಾರಿಸಿದರು. ಅಂತೂ ಪಂದ್ಯ ಮುಕ್ತಾಯದ ವೇಳೆ ಭಾರತ ವಿಜಯೋತ್ಸವ ಆಚರಿಸಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತ್ತು.