
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಬಂಗಾರ ಗೆದ್ದಿದ್ದ ಅಥ್ಲೀಟ್ ನೀರಜ್ ಚೋಪ್ರಾ ತನ್ನ ಬದುಕಿನ ಅಪರೂಪದ ಕನಸೊಂದನ್ನು ನನಸು ಮಾಡಿದ್ದಾರೆ. ಹೆತ್ತವರನ್ನೊಮ್ಮೆ ವಿಮಾನದಲ್ಲಿ ಕರೆದೊಯ್ಯಬೇಕನ್ನೋ ಕನಸು ಚೋಪ್ರಾ ಅವರಲ್ಲಿತ್ತು. ಆ ಕನಸನ್ನು ಚೋಪ್ರಾ ಶನಿವಾರ (ಸೆಪ್ಟೆಂಬರ್ 11) ನನಸು ಮಾಡಿದ್ದಾರೆ.
ಕರ್ನಾಟಕದ ಬಳ್ಳಾರಿಯಲ್ಲಿ ಇನ್ಸ್ಪೈರ್ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ ನಲ್ಲಿ ನೀರಜ್ ಚೋಪ್ರಾ ಅವರ ಸ್ಪಾನ್ಸರರ್ ಜೆಎಸ್ಡಬ್ಲ್ಯೂ ಸ್ಪೋರ್ಟ್ಸ್ ಒಂದು ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮಕ್ಕೆ ಪ್ರಚಾರ ರಾಯಭಾರಿಯಾಗಿ ನೀರಜ್ ಹೋಗಿದ್ದಾರೆ. ಹೋಗುವಾಗ ತನ್ನ ಹೆತ್ತವರಾದ ಸತೀಶ್ ಕುಮಾರ್ ಮತ್ತು ಸರೋಜ್ ದೇವಿ ಅವರನ್ನು ಕರೆದೊಯ್ದಿದ್ದಾರೆ.
"ಇವತ್ತು ನನ್ನ ಕನಸೊಂದು ನನಸಾಗಿದೆ. ಅದೇನೆಂದರೆ ಇದೇ ಮೊದಲ ಬಾರಿಗೆ ನಾನು ನನ್ನ ಹೆತ್ತವರನ್ನು ವಿಮಾನ ಯಾನದ ಮೂಲಕ ಕೊರೆದುಕೊಂಡು ಹೋಗಲು ಸಾಧ್ಯವಾಯ್ತು," ಎಂದು ನೀರಜ್ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ. ಈ ಟ್ವೀಟ್ನಲ್ಲಿ ನೀರಜ್ ತನ್ನ ಹೆತ್ತವರೊಂದಿಗೆ ವಿಮಾನದ ಯಾನದಲ್ಲಿರುವ ಚಿತ್ರಗಳಿವೆ.
ನೀರಜ್ ಚೋಪ್ರಾ ಪ್ರಯಾಣಿಸಿದ್ದ ಅದೇ ವಿಮಾನದಲ್ಲಿ ನಿರಜ್ ಅವರ ಕೋಚ್, ಜರ್ಮನ್ನ ಬಯೋ ಮೆಕ್ಯಾನಿಕ್ ಪರಿಣಿತ ಕ್ಲಾಸ್ ಬಾರ್ಟೋನಿಯೆಟ್ಜ್ ಮತ್ತು ಒಲಿಂಪಿಕ್ಸ್ ಸೂಪರ್ ಹೆವಿವೇಟ್ ವಿಭಾಗದ ಬಾಕ್ಸರ್ ಸತೀಶ್ ಕುಮಾರ್ ಕೂಡ ಇದ್ದರು.
ಜುಲೈ 24ರಿಂದ ಆಗಸ್ಟ್ 8ರ ವರೆಗೆ ಜಪಾನ್ನ ಟೋಕಿಯೋದಲ್ಲಿ ನಡೆದಿದ್ದ 2020ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪುರುಷರ ಜಾವೆಲಿನ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ 23ರ ಹರೆಯದ ನೀರಜ್ ಚೋಪ್ರಾ ಬಂಗಾರ ಗೆದ್ದಿದ್ದರು. ಇದು ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಅಥ್ಲೆಟಿಕ್ಸ್ನಲ್ಲಿ ಸಿಕ್ಕ ಮೊದಲ ಬಂಗಾರ ಮತ್ತು ಟೋಕಿಯೋದಲ್ಲಿ ದೊರೆತ ಏಕಮಾತ್ರ ಚಿನ್ನದ ಪದಕವಾಗಿ ಗಮನ ಸೆಳೆದಿತ್ತು.