ಬೆಂಗಳೂರು, ಅಕ್ಟೋಬರ್ 4: ಚೆಸ್ ವಿಶ್ವ ರ್ಯಾಂಕಿಂಗ್ನಲ್ಲಿ 201ನೇ ಶ್ರೇಯಾಂಕಿತ ಆಟಗಾರ 14ರ ಹರೆಯದ ನಿಹಾಲ್ ಸರಿನ್, ಬೆಂಗಳೂರಿನ ಕೋಣನಕುಂಟೆಯ ಖಾಸಗಿ ಶಾಲಾ ಆವರಣದಲ್ಲಿ ಸುಮಾರು 500 ಮಕ್ಕಳಿಗೆ ಚೆಸ್ ಕೌಶಲಗಳ ಬಗ್ಗೆ ತಿಳಿಸಿಕೊಟ್ಟರು.
ಕೋಣನಕುಂಟೆಯ ಸಿಲಿಕಾನ್ ಅಕಾಡೆಮಿಯಲ್ಲಿ ಐದು ದಿನಗಳ ಕರ್ನಾಟಕ ರಾಜ್ಯ ಮಟ್ಟದ ಚೆಸ್ ಚಾಂಪಿಯನ್ಷಿಪ್ 2019 ಬುಧವಾರದಿಂದ (ಅಕ್ಟೋಬರ್ 3) ನಡೆಯುತ್ತಿದ್ದು, ಚೆಸ್ ಕ್ಷೇತ್ರದಲ್ಲಿನ ಸಾಧಕ ನಿಹಾಲ್ ಕಾರ್ಯಕ್ರಮದಲ್ಲಿನ ಕೇಂದ್ರ ಬಿಂದುವಾಗಿದ್ದರು. ಸ್ಪರ್ಧೆಗೆ ಆಗಮಿಸಿದ ಎಲ್ಲ ಸ್ಪರ್ಧಿಗಳು ಹಾಗು ಪೋಷಕರ ಜೊತೆ ಸಂವಾದ ನಡೆಸಿದ ನಿಹಾನ್, ಕೆಲ ಕಾಲ ಚೆಸ್ ಆಸಕ್ತ ಮಕ್ಕಳಿಗೆ ವಿಶೇಷ ಮೂವ್ಗಳ ಬಗ್ಗೆ ಹೇಳಿಕೊಟ್ಟರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿಹಾಲ್, 'ಕಳೆದ ವರ್ಷ ವಿಶ್ವನಾಥ್ ಆನಂದ್ ಜೊತೆ ಚೆಸ್ ಪಂದ್ಯ ಆಟವಾಡಿದ್ದೆ. ಆ ಪಂದ್ಯ ಡ್ರಾ ಆಗಿತ್ತು. ಇದು ನನ್ನನ್ನು ಬಲಗೊಳಿಸಿದೆ. ನಾನು ಸ್ವಲ್ಪ ನರ್ವಸ್ ಆಗಿದ್ದೆ ಆದರೆ ಈಗ ಇನ್ನು ಛಲ ಜಾಸ್ತಿಯಾಗಿದೆ. ಅಕ್ಟೋಬರ್ 10ರಿಂದ ಫಿಡೆ ಗ್ರಾಂಡ್ ಸ್ವಿಸ್ ನಲ್ಲಿ ಐಸ್ಲೆ ಆಫ್ ಮ್ಯಾನ್ ಆಯೋಜಿತ ಪಂದ್ಯಾಟದಲ್ಲಿ ಭಾಗಿಯಾಗಲಿದ್ದೇನೆ,' ಎಂದರು.
ಭಾರತ ಹಾಗೂ ಬೆಂಗಳೂರು ನಗರದಲ್ಲಿ ಚೆಸ್ಗಿರುವ ಬೇಡಿಕೆ ಬಗ್ಗೆ ಮಾತಾಡಿದ ನಿಹಾಲ್, 'ಬೆಂಗಳೂರು ನಗರದಲ್ಲಿ ಚೆಸ್ ಆಟಕ್ಕೆ ಬೇಡಿಕೆ ಹೆಚ್ಚಿದೆ. ಮಕ್ಕಳು ತಮ್ಮನ್ನು ಸ್ಪರ್ಧಾ ಪರೀಕ್ಷೆಗೆ ತಯಾರಿ ಮಾಡಿಕೊಳ್ಳೋ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಚೆಸ್ ಆಟವನ್ನು ಅಡ್ತಾ ಇದ್ದಾರೆ. ನನ್ನ ಆಟವನ್ನು ಮೆಚ್ಚಿ ನನಗೆ ಪ್ರೋತ್ಸಾಹಿಸಲು ಈಗ ಅಕ್ಷಯಕಲ್ಪ ಸಂಸ್ಥೆ ಮುಂದೆ ಬಂದಿದೆ,' ಎಂದರು.
ಆಯೋಚಿತ ಪಂದ್ಯದ ಬಗ್ಗೆ ಮಾತನಾಡಿದ ಅಕ್ಷಯಕಲ್ಪ ಖಜಾಂಚಿ ಟೋನಿ ಪಿಂಟೋ, 'ಸಂಸ್ಥೆಯು ಮಕ್ಕಳ ಬುದ್ಧಿ ವೃದ್ಧಿಸುವ ಜೊತೆಗೆ ಅವರ ಸರ್ವಾಂಗಿಣ ಬೆಳವಣಿಗೆಯ ಉದ್ದೇಶವನ್ನು ಹೊಂದಿದೆ. ಇದೇ ಕಾರಣಕ್ಕೆ ಅಕ್ಷಯಕಲ್ಪ ಚೆಸ್ ಪಂದ್ಯಟವನ್ನು ಪ್ರೋತ್ಸಾಹಿಸುತ್ತಿದೆ,' ಎಂದರು.