ನವದೆಹಲಿ, ಜುಲೈ 19: ಕ್ರೀಡಾ ಸಂಸ್ಥೆಗಳಿಂದ ರಾಜಕಾರಣಿಗಳನ್ನು ಹೊರಗಿಡಲು ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ. ಕಳೆದ ವರ್ಷ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿಗೆ ಅನುಗುಣವಾಗಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ.
2010ರಲ್ಲಿ ನಡೆದಿದ್ದ ಕಾಮನ್ವೆಲ್ತ್ ಕ್ರೀಡಾಕೂಟದ ಹಗರಣದ ವೇಳೆಯಲ್ಲೇ ಕ್ರೀಡಾ ಸಂಸ್ಥೆಗಳನ್ನು ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪದಿಂದ ಮುಕ್ತ ಮಾಡಬೇಕೆಂಬ ಕೂಗೆದ್ದಿತು.
ಆನಂತರ, 2013ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೋಸದಾಟದ ಪ್ರಕರಣಗಳು ಹೊರಬಿದ್ದಾಗ ಈ ಕೂಗಿಗೆ ಭಾರೀ ಬೆಂಬಲ ವ್ಯಕ್ತವಾಯಿತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ನೇಮಿಸಿದ್ದ ನ್ಯಾ. ಆರ್.ಎಂ. ಲೋಧಾ ಸಮಿತಿಯು ದೇಶದಲ್ಲಿನ ಕ್ರಿಕೆಟ್ ಆಡಳಿತ ಮಂಡಳಿಗಳಲ್ಲಿ ಪಾರದರ್ಶಕತೆ ತರಲು ಹಲವಾರು ಶಿಫಾರಸುಗಳನ್ನು ನೀಡಿದರು. ದೇಶದ ಎಲ್ಲಾ ಕ್ರಿಕೆಟ್ ಮಂಡಳಿಗಳಿಂದ ರಾಜಕೀಯ ವ್ಯಕ್ತಿಗಳನ್ನು ಹೊರಗಿಡುವ ವಿಚಾರವನ್ನು ನ್ಯಾ. ಲೋಧಾ ಅವರು ಪ್ರಸ್ತಾಪ ಮಾಡಿದ್ದರು. ಇದನ್ನು ಸ್ವೀಕರಿಸಿದ್ದ ಸುಪ್ರೀಂ ಕೋರ್ಟ್, ಇದನ್ನು ದೇಶದ ನಾನಾ ಕ್ರೀಡಾ ಸಂಸ್ಥೆಗಳಿಗೂ ಅನ್ವಯಿಸಬಾರದೇಕೆ ಎಂದು ಕೇಂದ್ರ ಸರ್ಕಾರವನ್ನು ಕೇಳಿತ್ತು.
ಈ ಹಿನ್ನೆಲೆಯಲ್ಲಿ, ದೇಶಾದ್ಯಂತ ಕ್ರೀಡಾ ಪ್ರೇಮಿಗಳು ಹಾಗೂ ಕ್ರೀಡಾಪಟುಗಳು ಸುಪ್ರೀಂ ಸೂಚನೆಯನ್ನು ಸ್ವಾಗತಿಸಿದ್ದರು. ಹಾಗಾಗಿ, ಕೇಂದ್ರ ಸರ್ಕಾರವೂ ಈ ಬಗ್ಗೆ ಪರಾಮರ್ಶಿಸಿ ನಿರ್ಧರಿಸಿವುದಾಗಿ ಹೇಳಿತ್ತು. ಇದೀಗ, ಈ ಬಗ್ಗೆ ಕಟ್ಟುನಿಟ್ಟಾದ ಆದೇಶವನ್ನು ಕೇಂದ್ರ ಸರ್ಕಾರ ಹೊರಡಿಸಿದೆ.
ಪರಿಣಾಮವೇನು?
ಕ್ರೀಡಾ ಸಂಸ್ಥೆಗಳಿಂದ ರಾಜಕೀಯ ವ್ಯಕ್ತಿಗಳನ್ನು ಹೊರಗಿಡಲು ಕೇಂದ್ರ ಸರ್ಕಾರದ ನೀಡಿರುವ ಆದೇಶವು ದೇಶದ ನಾನಾ ಕ್ರೀಡಾ ಸಂಸ್ಥೆಗಳಲ್ಲಿ ತಲ್ಲಣ ಉಂಟು ಮಾಡಿದೆ. ದೇಶದ ಹಲವಾರು ಪ್ರತಿಷ್ಠಿತ ಕ್ರೀಡಾ ಸಂಸ್ಥೆಗಳಲ್ಲಿನ ಆಯಕಟ್ಟಿನ ಹುದ್ದೆಗಳಲ್ಲಿ ಹಲವಾರು ವರ್ಷಗಳಿಂದ ಠಿಕಾಣಿ ಹೂಡಿದ್ದ, ಉತ್ತಮ ಸಂಪಾದನೆ ಮಾಡಿಕೊಂಡು ಇದ್ದರು. ಈಗ ಅವರೆಲ್ಲರಿಗೆ ಸರ್ಕಾರದ ಆದೇಶ ಬಿಸಿ ಮುಟ್ಟಿಸಲಿದೆ.