ಭಾರತದ ಒಲಿಂಪಿಕ್ಸ್ ಕ್ರೀಡಾಪಟು ಭಜರಂಗ್ ಪುನಿಯಾ ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಆದರೆ ಭವಿಷ್ಯದಲ್ಲಿ ಬರುವ ಸ್ಪರ್ಧೆಗಳಲ್ಲಿ ಮತ್ತಷ್ಟು ಅತ್ಯುತ್ತಮ ಪ್ರದರ್ಶನ ನೀಡಲು ಅಭ್ಯಾಸವನ್ನು ನಡೆಸುವುದಕ್ಕೆ ಸಿದ್ಧನಾಗಿದ್ದೇನೆ ಎಂಬ ಭರವಸೆ ನೀಡಿದ್ದಾರೆ. ಮುಂಬರುವ ಅಭ್ಯಾಸಗಳಿಗೆ ಯಾವುದೂ ಕೂಡ ತನಗೆ ಅಡ್ಡಿಯಾಗಲಾರದು ಎಂದು ಭಜರಂಗ್ ಪುನಿಯಾ ಅಭಿಪ್ರಾಯಪಟ್ಟಿದ್ದಾರೆ.
ಭಾನುವಾರ ಸಮಾರೋಪವಾದ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಕ್ರೀಡಾಪಟುಗಳ ತಂಡವನ್ನು ಧ್ವಜವನ್ನು ಹಿಡಿಯುವ ಮೂಲಕ ಭಜರಂಗ್ ಪುನಿಯಾ ಮುನ್ನಡೆಸಿದ್ದರು. ಇದಾದ ಬಳಿಕ ಮುಂದಿನ ದಿನಗಳಲ್ಲಿ ತಾನು ಮತ್ತಷ್ಟು ಕಠಿಣ ಪರಿಶ್ರಮವನ್ನು ಪಡುವುದಾಗಿ ಹೇಳಿಕೊಂಡಿದ್ದಾರೆ. ಈ ಮೂಲಕ ತನ್ನ ಭವಿಷ್ಯದಲ್ಲಿ ಇನ್ನಷ್ಟು ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ಮೂಡಿಸಿದ್ದಾರೆ ಭಜರಂಗ್ ಪುನಿಯಾ.
"ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಧ್ವಜವನ್ನು ಹಿಡಿಯುವ ಅವಕಾಶ ನನಗೆ ದೊರೆತಿರುವುದಕ್ಕಾಗಿ ನಾನು ಪ್ರತಿಯೊಬ್ಬ ಭಾರತೀಯರಿಗೂ ಧನ್ಯವಾದವನ್ನು ತಿಳಿಸಲು ಬಯಸುತ್ತೇನೆ. ನನ್ನ ದೇಶದ ಧ್ವಜ ಎತ್ತರದಲ್ಲಿ ಹಾರಾಡುವುದನ್ನು ನೋಡಲು ನಾನು ನನ್ನ ಕಠಿಣ ಪರಿಶ್ರಮವನ್ನು ಮುಂದುವರಿಸುತ್ತೇನೆ ಎಂಬ ಭರವಸೆಯನ್ನು ಈ ಮೂಲಕ ನೀಡುತ್ತೇನೆ. ಜೈ ಹಿಂದ್" ಎಂದು ಭಜರಂಗ್ ಪುನಿಯಾ ಟ್ವೀಟ್ ಮಾಡಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ಕಂಚಿನ ಪದಕಕ್ಕಾಗಿ ನಡೆದ ಪ್ಲೇಆಫ್ ಪಂದ್ಯದಲ್ಲಿ ಭಜರಂಗ್ ಪುನಿಯಾ ಕಜಕಿಸ್ತಾನದ ದೌಲೆಟ್ ನಿಯಾಜ್ಬೆಕೋವ್ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿ ಭರ್ಜರಿ ಗೆಲುವು ಸಾಧಿಸಿದರು. 8-0 ಅಂತರದಿಂದ ಗೆಲುವು ಪಡೆಯುವ ಮೂಲಕ ಕಂಚಿನ ಪದಕವನ್ನು ಭಜರಂಗ್ ಪುನಿಯಾ ಗೆದ್ದುಕೊಂಡಿದ್ದಾರೆ.
17 ದಿನಗಳ ಕಾಲ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾನುವಾರ ಸಮಾರೋಪ ಸಮಾರಂಭ ನಡೆದಿತ್ತು. ಅದ್ದೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಭಾರತದ ಪರವಾಗಿ ಭಜರಂಗ್ ಪೂನಿಯಾ ಧ್ವಜವನ್ನು ಹಿಡಿದು ಇತರ ರಾಷ್ಟ್ರಗಳ ಧ್ವಜಧಾರಿಗಳೊಂದಿಗೆ ಮುನ್ನಡೆದರು.
ಕೊರೊನಾವೈರಸ್ನ ಹಿನ್ನೆಲೆಯಲ್ಲಿ ಈ ಬಾರಿಯ ಕ್ರೀಡಾಕೂಟ ಸಾಕಷ್ಟು ನಿರ್ಬಂಧಗಳ ಮಧ್ಯೆ ನಡೆದಿತ್ತು. ಪ್ರೇಕ್ಷಕರಿಗೆ ಸಂಪೂರ್ಣವಾಗಿ ಈ ಕ್ರೀಡಾಕೂಟಕ್ಕೆ ನಿಷೇಧ ಹೇರಲಾಗಿದ್ದು ಮುಚ್ಚಿದ ಬಾಗಿಲಿನಲ್ಲಿಯೇ ಕ್ರೀಡಾಕೂಟ ಆಯೋಜನೆಯಾಗಿತ್ತು. 200 ರಾಷ್ಟ್ರಗಳಿಂದ 11,000ಕ್ಕೂ ಅಧಿಕ ಕ್ರೀಡಾಪಟುಗಳು ಈ ಬಾರಿಯ ಒಲಿಂಪಿಕ್ಸ್ನಲ್ಲಿ ಭಾಗಿಯಾಗಿದ್ದರು. ಭಾರತ ಈ ಬಾರಿಯ ಒಲಿಂಪಿಕ್ಸ್ನಲ್ಲಿ ಒಟ್ಟು 7 ಪದಕ ಪಡೆಯುವ ಮೂಲಕ ಇತಿಹಾಸ ಬರೆದಿದೆ.