ಹುಬ್ಬಳ್ಳಿ, ಜ.7: ಕರ್ನಾಟಕ ಪ್ರಮುಖ ವೇಗಿಗಳ ದಾಳಿಗೆ ಸಿಲುಕಿ ಜಮ್ಮು- ಕಾಶ್ಮೀರ ತಂಡ ನಲುಕಿ ಶರಣಾಗಿದೆ. ಗಂಡು ಮೆಟ್ಟಿನ ನಾಡಿನಲ್ಲಿ ನಡೆದ ರಣಜಿ ಪಂದ್ಯದಲ್ಲಿ ಸುನಿಲ್ ಜೋಶಿ ಮಾರ್ಗದರ್ಶನದ ತಂಡವನ್ನು ವಿನಯ್ ಕುಮಾರ್ ಪಡೆ ಇನ್ನಿಂಗ್ಸ್ ಹಾಗೂ 30 ರನ್ ಗಳಿಂದ ಸೋಲಿಸಿದೆ. ಈ ಮೂಲಕ ಸತತ ನಾಲ್ಕನೇ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ.
ಮಂಗಳವಾರ ದಿನದ ಅಂತ್ಯಕ್ಕೆ ಅದಿಲ್ ರಿಶಿ ಹಾಗೂ ಐ.ಪಿ. ಸಿಂಗ್ ಅಜೇಯರಾಗಿ ಉಳಿದಿದ್ದರು. ಆದರೆ ದಿನದ ಮೊದಲ ಓವರ್ ಎಸೆದ ನಾಯಕ ವಿನಯ್ಕುಮಾರ್ ಅವರು ತಮ್ಮ ಎರಡನೇ ಎಸೆತದಲ್ಲಿ 4 ರನ್ ಗಳಿಸಿದ್ದ ಐ.ಪಿ.ಸಿಂಗ್ರನ್ನು ಬೋಲ್ಡ್ ಮಾಡಿದರು.
ನಂತರ ಮೂರನೇ ವಿಕೆಟ್ಗೆ ಜೊತೆಗೂಡಿದ ಅದಿಲ್ ರಿಶಿ- ಐಯಾನ್ ಚೌಹಾಣ್ ತಂಡಕ್ಕೆ ಕೊಂಚ ಚೇತರಿಕೆ ನೀಡಿ ಒಂದೊಂದೇ ರನ್ ಜೋಡಿಸಿ ತಂಡವನ್ನು ಮೂರಂಕಿಗೆ ತಲುಪಿಸಿದರು. ಕರ್ನಾಟಕದ ವೇಗಿ ಅಭಿಮನ್ಯು ಮಿಥುನ್ರವರು ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶ ಕಂಡರು. 108 ಎಸೆತಗಳನ್ನು ಎದುರಿಸಿ 36 ರನ್ ಗಳಿಸಿದ್ದ ಆದಿಲ್ ರಿಶಿಯನ್ನು ಔಟ್ ಮಾಡಿದಾಗ ತಂಡದ ಮೊತ್ತ 101 ರನ್ಗಳನ್ನು ಆಗಿತ್ತು.
ನಂತರ ಕ್ರೀಸ್ಗೆ ಇಳಿದ ನಾಯಕ ಪರ್ವೇಜ್ ರಸೂಲ್ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದರು. ಐಯಾನ್ ಚೌಹಾಣ್ ತಾಳ್ಮೆಯುತ ಆಟಕ್ಕೆ ಮುಂದಾದರು. ಭೋಜನ ವಿರಾಮದ ವೇಳೆಗೆ ತಂಡದ ಮೊತ್ತವು 130 ರನ್ಗಳಾಗಿತ್ತು. [ಉತ್ತಪ್ಪ ಆರ್ಭಟ, ಕರ್ನಾಟಕಕ್ಕೆ ಹ್ಯಾಟ್ರಿಕ್ ಜಯ]
ಅದರೆ, 148 ಸ್ಕೋರ್ ಆಗಿದ್ದಾಗ ನಾಯಕ ರಸೂಲ್ ಅರವಿಂದ್ ಶ್ರೀನಾಥ್ ಬೌಲಿಂಗ್ ನಲ್ಲಿ ಸ್ಟಂಪ್ ಔಟ್ ಆದರು. ಐಯಾನ್ ಚೌಹಾಣ್ 94 ರನ್ ಗಳಿಸಿ ವಿರೋಚಿತ ಹೋರಾಟ ಪ್ರದರ್ಶಿಸಿದರು. ಅದರೆ, ವಿನಯ್ ಕುಮಾರ್ 52ಕ್ಕೆ 3, ಮಿಥುನ್ 55ಕ್ಕೆ 3 ಹಾಗೂ ಅರವಿಂದ್ 48ಕ್ಕೆ 3 ವಿಕೆಟ್ ಕಿತ್ತು ಕಾಶ್ಮೀರದ ಆಟಗಾರರ ಕನಸು ಭಗ್ನಗೊಳಿಸಿದರು. [ಮುಂಬೈ ಮಣಿಸಿದ ಜೋಶಿ 'ಕಾಶ್ಮೀರಿ' ಹುಡುಗರು]
ಇದಕ್ಕೂ ಮುನ್ನ ಕರ್ನಾಟಕದ ತಂಡ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ರಾಬಿನ್ ಉತ್ತಪ್ಪ ಅವರ ಅಮೋಘ 156 ರನ್ ಹಾಗೂ ಸಿಎಂ ಗೌತಮ್ 80 ಮತ್ತು ಶ್ರೇಯಸ್ ಗೋಪಾಲ್ 50 ರನ್ ನೆರವಿನಿಂದ 423/9 ಸ್ಕೋರ್ ಮಾಡಿ ಡಿಕ್ಲೇರ್ ಮಾಡಿಕೊಂಡಿತ್ತು. [ನಿರ್ಬಂಧದ ನಡುವೆ ನಡೆದ ಹುಬ್ಬಳ್ಳಿ ರಣಜಿ ಪಂದ್ಯ]
ಸಂಕ್ಷಿಪ್ತ ಸ್ಕೋರ್
ಕರ್ನಾಟಕ 423/9 103 ಓವರ್ ಡಿಕ್ಲೇರ್
ರಾಬಿನ್ ಉತ್ತಪ್ಪ156, ಸಿಎಂ ಗೌತಮ್ 80, ಶ್ರೇಯಸ್ ಗೋಪಾಲ್ 50, ಮನೀಶ್ ಪಾಂಡೆ 33, ಮಹಮ್ಮದ್ ಮುದಾಸೀರ್ 99ಕ್ಕೆ4, ರಾಮ್ ದಯಾಳ್ 66ಕ್ಕೆ3, ಉಮರ್ ನಜೀರ್ 80ಕ್ಕೆ 2
ಜಮ್ಮು ಮತ್ತು ಕಾಶ್ಮೀರ
* ಮೊದಲ ಇನ್ನಿಂಗ್ಸ್ 42.1 ಓವರ್ ಗಳಲ್ಲಿ 160
ಪರ್ವೇಜ್ ರಸೂಲ್ 39, ವಿನಯ್ ಕುಮಾರ್ 37ಕ್ಕೆ 4, ಸ್ಟುವರ್ಟ್ ಬಿನ್ನಿ 37ಕ್ಕೆ 3, ಮಿಥುನ್ 23ಕ್ಕೆ 2
* ಎರಡನೇ ಇನ್ನಿಂಗ್ಸ್ 66.2 ಓವರ್ ಗಳಲ್ಲಿ 233
ಅಯಾನ್ ಚೌಹಾಣ್ 94, ಅದಿಲ್ ರಿಷಿ 36 ವಿನಯ್ ಕುಮಾರ್ 52ಕ್ಕೆ3, ಮಿಥುನ್ 55ಕ್ಕೆ3, ಅರವಿಂದ್ 48ಕ್ಕೆ 3