
ನವದೆಹಲಿ, ಮಾರ್ಚ್ 17: ಕೊರೊನಾ ವೈರಸ್ನಿಂದಾಗಿ ವಿಶ್ವದಾದ್ಯಂತ ಕ್ರೀಡಾ ಚಟುವಟಿಕೆಗಳು ಸೇರಿದಂತೆ ಬಹುತೇಕ ಎಲ್ಲಾ ಪ್ರಮುಖ ಕಾರ್ಯಕ್ರಮಗಳು ಅಸ್ತವ್ಯಸ್ತವಾಗಿವೆ. ಒಂದಿಷ್ಟು ಮಂದಿ ಸೋಂಕಿನ ಬಗ್ಗೆ ಇಲ್ಲಸಲ್ಲದ ಭಯ ಮೂಡಿಸುತ್ತಿದ್ದರೆ, ಇನ್ನೊಂದಿಷ್ಟು ಮಂದಿ ಸೋಂಕಿನ ಬಗ್ಗೆ ಜನ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಭಾರತೀಯ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್ ಇನ್ನಿತರರು ಆತಂಕಕಾರಿಯಾಗಿ ಹಬ್ಬುತ್ತಿರುವ ಕೊರೊನಾವೈರಸ್ ಬಗ್ಗೆ ಭೀತಿಗೊಳಗಾಗದಂತೆ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಭಿಮಾನಿಗಳಿಗೆ ಸಲಹೆಯಿತ್ತಿದ್ದರು. ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಕೂಡ ಜನಜಾಗೃತಿಗೆ ಮುಂದಾಗಿದ್ದಾರೆ.
2016ರ ರಿಯೋ ಒಲಿಂಪಿಕ್ನಲ್ಲಿ ಬೆಳ್ಳಿ ಪದಕ ವಿಜೇತ ಸಿಂಧು, ಸೇಫ್ ಹ್ಯಾಂಡ್ಸ್ ಚಾಲೆಂಜ್ ಮೂಲಕ ಜಾಗೃತಿ ಮೂಡಿಸಲು ಯತ್ನಿಸಿದ್ದಾರೆ. ಸೇಫ್ ಹ್ಯಾಂಡ್ಸ್ ಚಾಲೆಂಜ್ ಅಂದರೆ, ಕೊರೊನಾವೈರಸ್ ಅಥವಾ ಕೋವಿಡ್-19 ಹರಡದಂತೆ ತಡಗಟ್ಟಲು ಸರಿಯಾದ ಕ್ರಮದಲ್ಲಿ ಕೈ ತೊಳೆಯುವ ಚಾಲೆಂಜ್.
ತನ್ನ ಟ್ವಿಟರ್ ಖಾತೆಯಲ್ಲಿ ಕೈ ತೊಳೆಯುತ್ತಿರುವ ವೀಡಿಯೋ ಹಾಕಿಕೊಂಡಿರುವ ಸಿಂಧು, ಈ ಚಾಲೆಂಜ್ ಸ್ವೀಕರಿಸುವಂತೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ಟೆನಿಸ್ ಸ್ಟಾರ್ ಸಾನಿಯಾ ಮಿರ್ಝಾ ಅವರಲ್ಲಿ ಕೇಳಿಕೊಂಡಿದ್ದಾರೆ.