
ಬೆಂಗಳೂರು, ಜನವರಿ 03: ಭಾರತದ ಅಂಡರ್19 ಕ್ರಿಕೆಟ್ ತಂಡ ವಿಶ್ವಕಪ್ ಜಯಿಸಿದ್ದನ್ನು ದೇಶವೇ ಖುಷಿಯಿಂದ ಆಚರಿಸುತ್ತಿದೆ. ವಿಜೇತ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ ಆದರೆ ಈ ಗೆಲುವಿನ ಹಿಂದೆ ಇರುವ ಶ್ರಮ ಸಣ್ಣದಲ್ಲ.
ಹೌದು 20 ದಿನಗಳ ಕಾಲ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಆಡಿದ ಬೆರಳಿಣಿಕೆ ಪಂದ್ಯದಲ್ಲಿ ಜಯಗಳಿಸಲು ಭಾರತದ ಈ ಮೀಸೆ ಚಿಗುರದ ಹುಡುಗರು ಪಟ್ಟಿರುವ ಶ್ರಮ ಅಷ್ಟಿಷ್ಟಲ್ಲ.
ವಿಶ್ವಕಪ್ ಪ್ರಾರಂಭವಾಗಲು ಇನ್ನೂ ಒಂದು ವರ್ಷ ಬಾಕಿ ಇರುವಂತೆಯೇ ಕಪ್ ಗೆಲ್ಲಲು ಭಾರತದ ಎಳೆಯರನ್ನು ತಯಾರು ಮಾಡುತ್ತಿದ್ದರು ಕೋಚ್ ರಾಹುಲ್ ದ್ರಾವಿಡ್.
ದ್ರಾವಿಡ್ ಆಟ ನೋಡಿದವರಿಗೆ ಗೊತ್ತೆ ಇರುತ್ತದೆ ಅವರೆಂತಹಾ ಶಿಸ್ತಿನ ಮನುಷ್ಯ, ಕ್ರಿಕೆಟ್ ಪ್ರೇಮಿ, ಸಂಯಮಿ, ಬುದ್ಧಿವಂತ ಎಂಬುದು ಈ ಎಲ್ಲಾ ಗುಣಗಳನ್ನೂ ಬಳಸಿ ರಾಹುಲ್ ಅವರು ಭಾರತದ ಕ್ರಿಕೆಟ್ ತಂಡದ ಆಟಗಾರರಲ್ಲಿದ್ದ ಓರೆ-ಕೋರೆಗಳನ್ನು ತಿದ್ದಿದ್ದಾರೆ. ಇದಕ್ಕೆ ಅವರು ತೆಗೆದುಕೊಂಡ ಸಮಯ ಬರೋಬ್ಬರಿ 14 ತಿಂಗಳು.
ತಂಡದ ಆಯ್ಕೆ ವಿಚಾರದಿಂದ ಹಿಡಿದು ಅವರ ನ್ಯೂನತೆಗಳು, ದೇಹ ಪರಿಸ್ಥಿತಿ, ಮಾನಸಿಕ ಸ್ಥಿಮಿತ, ಆಹಾರ, ಏಕಾಗ್ರತೆ ಪ್ರತಿಯೊಂದರ ಮೇಲೂ ಕಳೆದ 14 ತಿಂಗಳಿನಿಂದಲೂ ಪ್ರಯೋಗಗಳು ನಡೆಯುತ್ತಲೆ ಇತ್ತಂತೆ.
ಸ್ವತಃ ದ್ರಾವಿಡ್ ಅವರೇ ಇಂದು ಪೈನಲ್ ಪಂದ್ಯದ ನಂತರ ಈ ವಿಷಯ ಹೇಳಿದ್ದು, ಸತತ 14 ತಿಂಗಳ ಶ್ರಮಕ್ಕೆ ಸಿಕ್ಕ ಪ್ರತಿಫಲ ಇದು ಎಂದಿದ್ದಾರೆ.
ಕೋಚ್ ದ್ರಾವಿಡ್ ಜೊತೆಗೆ ಕ್ರಿಕೆಟ್ ತಂಡದ ಫಿಸಿಯೊ, ಹೆಲ್ತ್ ಟ್ರೇನರ್, ತಂತ್ರಜ್ಞ, ಫಿಡಿಯಾಟ್ರೀಶಿಯನ್, ಧ್ಯಾನದ ಗುರು ಹೀಗೆ ಒಂದು ದೊಡ್ಡ ತಂಡವೇ ಈ ಎಳೆಯ ಆಟಗಾರರನ್ನು ಮಾನಸಿಕವಾಗಿ, ದೈಹಿಕವಾಗಿ ಗಟ್ಟಿ ಮಾಡಿದೆ.
ಇಂದು ವಿಶ್ವಕಪ್ ಅನ್ನು ಕೈಯಲ್ಲಿ ಹಿಡಿದ ಆ 11 ಆಟಗಾರರಷ್ಟೆ ನಿಮಗೆ ಕಾಣಿಸುತ್ತಿದ್ದಾರೆ ಆದರೆ ಅವರ ಈ ಗೆಲುವಿನ ಹಿಂದೆ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಹಲವು ಮಂದಿ ಸಿಬ್ಬಂದಿ ಪರಿಶ್ರಮ ಅಡಗಿದೆ.
ಆಟಗಾರರೂ ಸಹ ಕೋಚ್ ನೀಡಿದ ಆಕಾರಕ್ಕೆ ಇಮ್ಮನ್ನು ಒಗ್ಗಿಸಿಕೊಂಡು ಇಂದು ವಿಶ್ವವೇ ತಿರುಗಿ ನೋಡುವಂತಹಾ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಅವರ ಮುಂದಿನ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ ಎಂದು ಹಾರೈಸೋಣ ಅಲ್ಲವೆ...?