
ಬೆಂಗಳೂರು, ಜುಲೈ 24: ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) 2018ರ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದ ವೇಗದ ಬೌಲರ್ ಅಭಿಮನ್ಯು ಮಿಥುನ್ ಅವರು ಕೆಪಿಎಲ್ ನಲ್ಲಿ ಆಡಲು ಸಾಧ್ಯವಾಗುತ್ತಿಲ್ಲ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಹರಾಜು ಪ್ರಕ್ರಿಯೆಯಲ್ಲಿ ಎ ಮಿಥುನ್ ಅವರನ್ನು 8.30 ಲಕ್ಷ ರುಪಾಯಿಗಳಿಗೆ ಶಿವಮೊಗ್ಗ ಲಯನ್ಸ್ ತಂಡವು ಖರೀದಿಸಿತ್ತು.
ಆದರೆ, 28 ವರ್ಷ ವಯಸ್ಸಿನ ಮಿಥುನ್ ಅವರು ದುಲೀಪ್ ಟ್ರೋಫಿಗೆ ಆಯ್ಕೆಯಾಗಿರುವುದರಿಂದ ಪ್ರಸಕ್ತ ಸಾಲಿನ ಕೆಪಿಎಲ್ನಲ್ಲಿ ಅವರು ಕಣಕ್ಕಿಳಿಯುವುದಿಲ್ಲ ಎಂದು ಕೆಎಸ್ಸಿಎ ವಕ್ತಾರ ವಿನಯ್ ಮೃತ್ಯುಂಜಯ ಹೇಳಿದ್ದಾರೆ.
ಈಗ ಶಿವಮೊಗ್ಗ ಲಯನ್ಸ್ ತಂಡವು ಮಿಥುನ್ ಸ್ಥಾನಕ್ಕೆ ಬೇರೆ ಆಟಗಾರರೊಬ್ಬರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಕಳೆದ ಬಾರಿ ಬಿಜಾಪುರ್ ಬುಲ್ಸ್ ಪರ ಆಡಿದ್ದರು. ಈ ಹಿಂದೆ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸದಸ್ಯರಾಗಿದ್ದರು.
ಅಭಿನವ್ ಮುಕುಂದ್ ನಾಯಕತ್ವದ ಇಂಡಿಯಾ ರೆಡ್ ತಂಡಕ್ಕೆ ಮಿಥುನ್ ಆಯ್ಕೆಯಾಗಿದ್ದಾರೆ. ಅಗಸ್ಟ್ 17ರಿಂದ 29ರವರೆಗೆ ಇಂಡಿಯಾ ರೆಡ್, ಇಂಡಿಯಾ ಬ್ಲೂ ಹಾಗೂ ಇಂಡಿಯಾ ಗ್ರೀನ್ ತಂಡಗಳ ನಡುವೆ ಪಂದ್ಯಗಳು ನಡೆಯಲಿದೆ
ಇಂಡಿಯಾ ರೆಡ್: ಅಭಿನವ್ ಮುಕುಂದ್ (ಕ್ಯಾಪ್ಟನ್), ಆರ್.ಆರ್ ಸಂಜಯ್, ಅಶುತೋಷ್ ಸಿಂಗ್, ಬಾಬಾ ಅಪರಾಜಿತ್, ರೈಟ್ಕ್ ಚಟರ್ಜಿ, ಬಿ.ಸಂದೀಪ್, ಅಭಿಷೇಕ್ ಗುಪ್ತಾ (ವಿಕೆಟ್ ಕೀಪರ್), ಎಸ್. ನದೀಮ್, ಮಿಹಿರ್ ಹಿರ್ವಾನಿ, ಪರ್ವೇಜ್ ರಸೂಲ್, ಆರ್ ಗುರ್ಬಾನಿ, ಅಭಿಮನ್ಯು ಮಿಥುನ್, ಇಶನ್ ಪೊರೆಲ್, ವೈ. ಪೃಥ್ವಿ ರಾಜ್.