IND vs PAK: ಸೂಪರ್ 4 ಸೋಲಿಗೆ ಅರ್ಷ್ದೀಪ್ ಕ್ಯಾಚ್ ಬಿಟ್ಟದ್ದೇ ಕಾರಣ; ಕೊಹ್ಲಿ ಹೇಳಿದ್ದಿಷ್ಟು!

ನಿನ್ನೆ ( ಸೆಪ್ಟೆಂಬರ್ 4 ) ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಸೂಪರ್ 4 ಪಂದ್ಯ ನಡೆಯಿತು. ಈ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನದ ವಿರುದ್ಧ ಅಂತಿಮ ಹಂತದಲ್ಲಿ ಸೋಲನ್ನು ಅನುಭವಿಸಿತು. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ವಿರಾಟ್ ಕೊಹ್ಲಿ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿ ಪಾಕಿಸ್ತಾನಕ್ಕೆ 182 ರನ್ಗಳ ಗುರಿಯನ್ನು ನೀಡಿತ್ತು.
ಇನ್ನು ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ ಮೊಹಮ್ಮದ್ ರಿಜ್ವಾನ್ ಅವರ ಜವಾಬ್ದರಿಯುತ ಅರ್ದಶತಕ ಹಾಗೂ ಮೊಹಮ್ಮದ್ ನವಾಜ್ ಅವರ ಸ್ಪೋಟಕ ಆಟದ ನೆರವಿನಿಂದ 19.5 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಕಲೆಹಾಕಿ 5 ವಿಕೆಟ್ಗಳ ರೋಚಕ ಗೆಲುವನ್ನು ಕಂಡಿತು. ಹೀಗೆ ಭಾರತ ತಂಡ ಪಂದ್ಯದಲ್ಲಿ ದೊಡ್ಡ ಮೊತ್ತ ಕಲೆಹಾಕಿದರೂ ಸಹ ಸೋಲನ್ನು ಅನುಭವಿಸಿದ್ದು ತಂಡದ ಬೌಲರ್ಗಳ ಕಳಪೆ ಪ್ರದರ್ಶನದ ಕಾರಣದಿಂದಾಗಿ ಎಂಬ ಟೀಕೆಗಳು ವ್ಯಕ್ತವಾದವು. ಅದರಲ್ಲಿಯೂ ಅಸಿಫ್ ಅಲಿ ಕ್ಯಾಚ್ ಕೈಚೆಲ್ಲಿದ ಅರ್ಷ್ದೀಪ್ ಸಿಂಗ್ ದೊಡ್ಡ ಮಟ್ಟದಲ್ಲಿ ಟೀಕೆಗಳನ್ನು ಎದುರಿಸುತ್ತಿದ್ದಾರೆ.
ಹೌದು, ಟೀಮ್ ಇಂಡಿಯಾ ನೀಡಿದ್ದ ಗುರಿಯನ್ನು ಬೆನ್ನತ್ತಿದ್ದ ಪಾಕಿಸ್ತಾನ ಕೊನೆಯ 3 ಓವರ್ಗಳಲ್ಲಿ 34 ರನ್ ಬಾರಿಸಬೇಕಾದ ಅಗತ್ಯವಿತ್ತು. ಈ ಸಂದರ್ಭದಲ್ಲಿ ತಂಡದ ರವಿ ಬಿಷ್ಣೋಯಿ 18ನೇ ಓವರ್ ಎಸೆದರು. ಪಾಕ್ನ ಅಸಿಫ್ ಅಲಿ ಹಾಗೂ ಖುಷ್ದಿಲ್ ಶಾ ಕಣದಲ್ಲಿದ್ದರು. ಈ ಓವರ್ನ ಮೂರನೇ ಎಸೆತವನ್ನು ಎದುರಿಸಿದ ಅಸಿಫ್ ಅಲಿ ದೊಡ್ಡ ಹೊಡೆತ ಬಾರಿಸುವ ಯತ್ನಕ್ಕೆ ಕೈಹಾಕಿ ವಿಫಲರಾಗಿದ್ದರು ಹಾಗೂ ಚೆಂಡು ಫೀಲ್ಡರ್ ಅರ್ಷ್ದೀಪ್ ಸಿಂಗ್ ಬಳಿ ಸಾಗಿತ್ತು. ಈ ಸುಲಭ ಕ್ಯಾಚ್ ಅನ್ನು ಅರ್ಷ್ದೀಪ್ ಸಿಂಗ್ ಹಿಡಿಯಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅರ್ಷ್ದೀಪ್ ಸಿಂಗ್ ಈ ಕ್ಯಾಚ್ ಪಡೆಯುವಲ್ಲಿ ವಿಫಲರಾಗಿ ಚೆಂಡನ್ನು ಕೈಚೆಲ್ಲಿದ್ದರು. ಈ ವೇಳೆ ನಾಯಕ ರೋಹಿತ್ ಶರ್ಮಾ ಕೂಡ ಮೈದಾನದಲ್ಲಿಯೇ ಬೇಸರ ಹೊರಹಾಕಿದ್ದರು. ಇನ್ನು ಅರ್ಷ್ದೀಪ್ ಸಿಂಗ್ ಈ ಕ್ಯಾಚ್ ಬಿಟ್ಟದ್ದೇ ಸೋಲಿಗೆ ಪ್ರಮುಖ ಕಾರಣ ಹಾಗೂ ಪಂದ್ಯ ತಿರುವು ಪಡೆದುಕೊಂಡದ್ದೇ ಇಲ್ಲಿ ಎಂಬ ಟೀಕೆಗಳು ಶುರುವಾದವು. ಹೀಗೆ ಅರ್ಷ್ದೀಪ್ ಸಿಂಗ್ ವಿರುದ್ಧ ವ್ಯಕ್ತವಾಗುತ್ತಿರುವ ಟೀಕೆಗಳ ಕುರಿತಾಗಿ ಮಾತನಾಡಿರುವ ವಿರಾಟ್ ಕೊಹ್ಲಿ ಈ ಕೆಳಕಂಡಂತೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇಂಥ ಪಂದ್ಯಗಳಲ್ಲಿ ತಪ್ಪು ಸಹಜ
ಅರ್ಷ್ದೀಪ್ ಸಿಂಗ್ ಕ್ಯಾಚ್ ಬಿಟ್ಟದ್ದರ ಕುರಿತು ಪಂದ್ಯ ಮುಕ್ತಾಯದ ನಂತರ ಮಾತನಾಡಿದ ವಿರಾಟ್ ಕೊಹ್ಲಿ ಇಂಥಹ ಒತ್ತಡ ಇರುವ ಪಂದ್ಯಗಳಲ್ಲಿ ಆಟಗಾರರು ತಪ್ಪುಗಳನ್ನು ಮಾಡುವುದು ಸಹಜ ಎಂದಿದ್ದಾರೆ. ಒತ್ತಡ ಹೆಚ್ಚಿರುವ ಪಂದ್ಯಗಳಲ್ಲಿ ಯಾರಾದರೂ ತಪ್ಪುಗಳನ್ನು ಮಾಡುವುದು ಸಹಜ ಹಾಗೂ ತಂಡದಲ್ಲಿ ಹಿರಿಯ ಆಟಗಾರರಿದ್ದು, ಒಳ್ಳೆಯ ವಾತಾವರಣವಿದೆ, ಹೀಗಾಗಿ ತಪ್ಪು ಮಾಡುವ ಆಟಗಾರರು ತಮ್ಮ ತಪ್ಪುಗಳನ್ನು ಸ್ವೀಕರಿಸಿ, ತಿದ್ದಿಕೊಳ್ಳುವತ್ತ ದೃಷ್ಟಿ ಇಡಬೇಕು ಎಂದಿದ್ದಾರೆ. ಇನ್ನೂ ಮುಂದುವರೆದು ಮಾತನಾಡಿದ ವಿರಾಟ್ ಕೊಹ್ಲಿ ನಾಯಕ ಮತ್ತು ಕೋಚ್ಗೆ ತಂಡದಲ್ಲಿ ಇಂಥ ಒಳ್ಳೆಯ ವಾತಾವರಣ ನಿರ್ಮಿಸಿರುವ ಕೋಚ್ ಹಾಗೂ ನಾಯಕನಿಗೆ ಕೀರ್ತಿ ಸಲ್ಲಬೇಕು ಎಂದರು.

ನಾನೂ ಇಂತ ಪರಿಸ್ಥಿತಿ ಎದುರಿಸಿದ್ದೆ ಎಂದ ಕೊಹ್ಲಿ
ಇನ್ನು ತಾನೂ ಸಹ ಈ ರೀತಿಯ ಸಂದರ್ಭವನ್ನು ಅನುಭವಿಸಿದ್ದೆ ಎಂಬ ವಿಚಾರವನ್ನು ಕೊಹ್ಲಿ ಬಿಚ್ಚಿಟ್ಟಿದ್ದು, ಹಳೆಯ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ. "ನಾನು ನನ್ನ ಮೊದಲ ಚಾಂಪಿಯನ್ಸ್ ಟ್ರೋಫಿ ಆಡುವಾಗ ಪಾಕ್ ವಿರುದ್ಧದ ಪಂದ್ಯದಲ್ಲಿ ಅಫ್ರಿದಿ ಎಸೆತದಲ್ಲಿ ಕೆಟ್ಟ ಹೊಡೆತ ಬಾರಿಸಿ ಕಡಿಮೆ ಮೊತ್ತಕ್ಕೆ ಔಟ್ ಆಗಿದ್ದೆ ಹಾಗೂ ಅಂದು ನನಗೆ ನಿದ್ರೆ ಬರದೇ ಬೆಳಗ್ಗಿನ ಜಾವ ಐದು ಗಂಟೆಯವರೆಗೂ ಛಾವಣಿ ನೋಡುತ್ತಾ ನಿಂತಿದ್ದೆ ಮತ್ತು ನನ್ನ ಕೆರಿಯರ್ ಮುಗಿಯಿತು ಎಂದುಕೊಂಡಿದ್ದೆ. ಆದರೆ ಅಂತದ್ದೇನೂ ಆಗಲಿಲ್ಲ, ಇಂಥ ತಪ್ಪುಗಳು ಸಹಜ" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಅರ್ಷ್ದೀಪ್ ಸಿಂಗ್ ಪರ ಬ್ಯಾಟ್ ಬೀಸಿದ ಮಾಜಿ ಕ್ರಿಕೆಟಿಗರು
ಇನ್ನು ಅರ್ಷ್ದೀಪ್ ಸಿಂಗ್ ವಿರುದ್ಧ ವ್ಯಕ್ತವಾಗುತ್ತಿರುವ ಟೀಕೆಗಳ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅರ್ಷ್ದೀಪ್ ಸಿಂಗ್ ಉತ್ತಮ ಆಟಗಾರ ಆತನ ಕುರಿತು ಟೀಕಿಸುವವರಿಗೆ ನಾಚಿಕೆ ಆಗಬೇಕು ಎಂದು ಟ್ವೀಟ್ ಮಾಡಿದ್ದಾರೆ. ಪಾಕಿಸ್ತಾನದ ಮೊಹಮ್ಮದ್ ಹಫೀಜ್ ಕೂಡ ಈ ಕುರಿತು ಪ್ರತಿಕ್ರಿಯಿಸಿದ್ದು, ಇಂತ ತಪ್ಪುಗಳಾಗುವುದು ಸಹಜ ಟ್ರೋಲ್ ಮಾಡಬೇಡಿ ಎಂದು ಟ್ವೀಟ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications