
ದುಬೈ, ಸೆಪ್ಟೆಂಬರ್ 22: ಸುಮಾರು 14 ತಿಂಗಳ ಕಾಲ ಸೀಮಿತ ಓವರ್ ಕ್ರಿಕೆಟ್ ನಿಂದ (ಏಕದಿನ) ಹೊರಗುಳಿದಿದ್ದ ಭಾರತದ ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ತಾನು ಯಾರಿಗೂ ಏನನ್ನೂ ಸಾಧಿಸಿ ತೋರಿಸಬೇಕಾಗಿಲ್ಲ ಎಂದಿದ್ದಾರೆ. ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಭರ್ಜರಿ ಆಟ ಪ್ರದರ್ಶಿಸಿರುವ ಜಡೇಜಾ ಟೀಕಾಕಾರರು, ಆಯ್ಕೆ ಸಮಿತಿಯನ್ನುದ್ದೇಶಿಸಿ ಪ್ರಯಿಕ್ರಿಸಿದ್ದಾರೆ.
ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಗಾಯಕ್ಕೀಡಾಗಿ ಏಷ್ಯಾಕಪ್ ಟೂರ್ನಿಯಿಂದ ಹೊರಗುಳಿದಿದ್ದರಿಂದ ಅವರ ಜಾಗಕ್ಕೆ ಜಡೇಜಾ ಅವರನ್ನು ಕರೆತರಲಾಗಿತ್ತು. ಸೂಪರ್ ಫೋರ್ ಮೊದಲ ಪಂದ್ಯದ ಭಾರತ-ಬಾಂಗ್ಲಾದೇಶ ಮುಖಾಮುಖಿಯಲ್ಲಿ ಜಡೇಜಾ ಕೇವಲ 29 ರನ್ನಿಗೆ 4 ವಿಕೆಟ್ ಕಬಳಿಸಿದ್ದರು. ಭಾರತ ಈ ಪಂದ್ಯದಲ್ಲಿ 7 ವಿಕೆಟ್ ಭರ್ಜರಿ ಗೆಲುವು ದಾಖಲಿಸಿತ್ತು.
ಸೆಪ್ಟೆಂಬರ್ 21ರ ಬಾಂಗ್ಲಾ-ಭಾರತ ಪಂದ್ಯದ ಬಳಿಕ ಮಾತನಾಡಿದ ಜಡೆಜಾ, 'ಭಾರತ ತಂಡಕ್ಕೆ ಮರಳಿರುವ ಈ ಕ್ಷಣವನ್ನು ನಾನು ಯಾವತ್ತಿಗೂ ನೆನಪಿಟ್ಟುಕೊಳ್ಳುತ್ತೇನೆ. ಯಾಕೆಂದರೆ ತಂಡದಿಂದ ದೂರವಿದ್ದು ಸುಮಾರು 480 ದಿನಗಳೇ ಕಳೆದಿದ್ದವು' ಎಂದು ತಂಡದಲ್ಲಿ ಅವಕಾಶ ದೊರೆಯದ ಬಗ್ಗೆ ಬೇಸರ ತೋರಿಕೊಂಡರು.
'ಇವತ್ತಿನ ಈ ಗೆಲುವಿನ ಬಳಿಕ ನಾನು ಯಾರಿಗೂ ಏನನ್ನೂ ಸಾಧಿಸಿ ತೋರಿಸಬೇಕಿಲ್ಲವೆಂದು ಭಾವಿಸಿದ್ದೇನೆ. ನನ್ನ ಸಾಮರ್ಥ್ಯವೇನೆಂದು ನನಗೆ ಗೊತ್ತು. ನಾನದನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳಬೇಕಿದೆ. ನಾನೇನು ಮಾಡಬಲ್ಲನೆಂದು ನಾನು ಯಾರಿಗೂ ತೋರಿಸಿಕೊಳ್ಳುವ ಗೋಜಿಗೆ ಹೋಗೋಲ್ಲ. ನನಗೆ ನಾನೇ ಸವಾಲೆಸೆದು ಸಾಧನೆ ದಾರಿಯಲ್ಲಿ ಸಾಗುವತ್ತ ನಾನು ಯೋಚಿಸುತ್ತಿದ್ದೇನೆ' ಎಂದು ಸರ್ ರವೀಂದ್ರ ಜಡೇಜಾ ಹೇಳಿದರು.