
ಸಿಡ್ನಿ, ಡಿಸೆಂಬರ್ 4: ಆಸ್ಟ್ರೇಲಿಯಾದ ಆರಂಭಿಕ ಎಡಗೈ ಬ್ಯಾಟ್ಸ್ಮನ್ ಉಸ್ಮಾನ್ ಖವಾಜಾ ಅವರ ಸಹೋದರ ಅರ್ಸಲನ್ ಖವಾಜಾ ಅವರನ್ನು ಸುಳ್ಳು ಭಯೋತ್ಪಾದನೆ ಸಂಚಿನ ಕುರಿತಾದ ಬರಹಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಬಂಧಿಸಲಾಗಿದೆ.
ಗುರುವಾರದಿಂದ ಆರಂಭವಾಗಲಿರುವ ಭಾರತದ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಡಲು ಸಿದ್ಧತೆ ನಡೆಸಿರುವ ಉಸ್ಮಾನ್ ಖವಾಜ ಅವರಿಗೆ ಇದು ಆಘಾತ ಉಂಟುಮಾಡಿದೆ.
ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದಲ್ಲಿ ಸರಣಿ ದಾಳಿಗಳನ್ನು ನಡೆಸುವ ಕುರಿತು ಕೈಬರಹದಲ್ಲಿ ಬರೆಯಲಾಗಿದ್ದ ಪುಸ್ತಕವೊಂದು ಆಗಸ್ಟ್ 30ರಂದು ದೊರೆತಿತ್ತು.
ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಮಾಲ್ಕಂ ಟರ್ನ್ಬುಲ್, ಮಾಜಿ ವಿದೇಶಾಂಗ ಸಚಿವೆ ಜೂಲಿ ಬಿಷಪ್ ಮತ್ತು ಅನೇಕ ಗಣ್ಯರನ್ನು ಹಾಗೂ ಸಿಡ್ನಿ ಒಪೇರಾ ಹೌಸ್ಅನ್ನು ಗುರಿಯನ್ನಾಗಿರಿಸಿಕೊಂಡು ದಾಳಿ ನಡೆಸುವ ಸಂಚು ರೂಪಿಸಲಾಗಿದೆ ಎಂಬಂತೆ ಆ ನೋಟ್ ಪುಸ್ತಕದಲ್ಲಿ ಬರೆಯಲಾಗಿತ್ತು. ಇದನ್ನು ಬೆನ್ನತ್ತಿದ್ದ ಪೊಲೀಸರು ವ್ಯಾಪಕ ತನಿಖೆ ನಡೆಸಿದ್ದರು.
ವಿಶ್ವವಿದ್ಯಾಲಯದ ಆವರಣದಲ್ಲಿ ಐಟಿ ಉದ್ಯೋಗಿಯಾಗಿ, ಪಿಎಚ್.ಡಿ ಮಾಡುತ್ತಿರುವ ಶ್ರೀಲಂಕಾ ಮೂಲದ ಮೊಹಮ್ಮದ್ ಕಮರ್ ನಿಜಮ್ದೀನ್ ಎಂಬಾತನನ್ನು ತಪ್ಪಾಗಿ ಬಂಧಿಸಲಾಗಿತ್ತು. ಕುಖ್ಯಾತ ಗೌಲ್ಬರ್ಗ್ ಜೈಲಿನಲ್ಲಿ ನಾಲ್ಕು ವಾರ ಇರಿಸಲಾಗಿತ್ತು. ಆದರೆ, ಅವರು ನಿರಪರಾಧಿ ಎಂಬುದು ಗೊತ್ತಾಗಿದ್ದರಿಂದ ಅವರ ವಿರುದ್ಧದ ಆರೋಪಗಳನ್ನು ಕೈಬಿಡಲಾಗಿತ್ತು.
ನಿಜಮ್ದೀನ್ ಅವರನ್ನು ಸಿಲುಕಿಸಲು ಅರ್ಸಲನ್ ಖವಾಜಾ ಈ ರೀತಿ ಭಯೋತ್ಪಾದಕ ಮತ್ತು ಭೀತಿ ಮೂಡಿಸುವ ಸುಳ್ಳು ಸಂಚಿನ ಕಥೆಯನ್ನು ಸೃಷ್ಟಿಸಿದ್ದರು ಎಂದು ಆರೋಪಿಸಲಾಗಿದೆ. ನಿಜಮ್ದೀನ್ ಅವರನ್ನು ಬಂಧನವನ್ನು ಖಂಡಿಸಿ ವಿವಿಧೆಡೆ ಪ್ರತಿಭಟನೆಗಳು ನಡೆದಿದ್ದವು.
39 ವರ್ಷದ ಅರ್ಸಲನ್ ಖವಾಜಾ ಅವರನ್ನು ಮಂಗಳವಾರ ಬೆಳಿಗ್ಗೆ ಸಿಡ್ನಿಯ ಪರಮಟ್ಟ ಎಂಬಲ್ಲಿ ಬಂಧಿಸಲಾಗಿದೆ.
ಮಹಿಳೆಯೊಬ್ಬರ ವಿಚಾರದಲ್ಲಿ ಸಹೋದ್ಯೋಗಿ ಕಮರ್ ನಿಜಮ್ದೀನ್ ಜೊತೆ ಅರ್ಸಲನ್ ಖವಾಜಾ ಜಗಳ ಮಾಡಿಕೊಂಡಿದ್ದರು. ಹೀಗಾಗಿ ಅವರನ್ನು ಸಿಲುಕಿಸಲು ಈ ರೀತಿ ನಕಲಿ 'ಹಿಟ್ ಲಿಸ್ಟ್' ತಯಾರಿಸಿದ್ದರು ಎಂದು ಆರೋಪಿಸಲಾಗಿದೆ.
ಅರ್ಸಲನ್ ಅವರ ಜಾಮೀನು ಕೋರಿಕೆಯನ್ನು ವಜಾಗೊಳಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಉಸ್ಮಾನ್ ಖವಾಜಾ ಪ್ರಕರಣದಲ್ಲಿ ತಮ್ಮನ್ನು ಕೇಳದಂತೆ ಮನವಿ ಮಾಡಿದ್ದಾರೆ.
'ನಾನು ಹೆಚ್ಚೇನೂ ಹೇಳುವುದಿಲ್ಲ. ಇದು ಪೊಲೀಸರು ತನಿಖೆ ನಡೆಸುತ್ತಿರುವ ಪ್ರಕರಣ. ಕಾನೂನು ಪ್ರಕ್ರಿಯೆಗೆ ಗೌರವ ನೀಡುವ ಸಲುವಾಗಿ ನಾನು ಈ ಬಗ್ಗೆ ಮಾತನಾಡುವುದಿಲ್ಲ. ಈ ಸಂದರ್ಭದಲ್ಲಿ ನನ್ನ ಮತ್ತು ನನ್ನ ಕುಟುಂಬದ ಖಾಸಗಿತನವನ್ನು ಗೌರವಿಸಬೇಕು' ಎಂದು ಅವರು ಹೇಳಿದ್ದಾರೆ.
ಖವಾಜಾ ಸಹೋದರರು ಮೂಲತಃ ಪಾಕಿಸ್ತಾನದವರಾಗಿದ್ದಾರೆ. ಆಸ್ಟ್ರೇಲಿಯಾ ತಂಡದಲ್ಲಿ ಆಡಲು ಸ್ಥಾನ ಪಡೆದ ಮೊದಲ ಮುಸ್ಲಿಂ ಆಟಗಾರ ಎಂಬ ಹೆಗ್ಗಳಿಕೆಗೆ ಉಸ್ಮಾನ್ ಖವಾಜಾ ಪಾತ್ರರಾಗಿದ್ದಾರೆ.