ತಿರುವನಂತಪುರಂ, ಸೆ. 19:ಕ್ರಿಕೆಟರ್ ಶ್ರೀಶಾಂತ್ ಮೇಲೆ ಹೇರಲಾಗಿದ್ದ ನಿಷೇಧವನ್ನು ಹಿಂಪಡೆಯುವಂತೆ ಕೇರಳದ ಹೈಕೋರ್ಟ್ ಇತ್ತೀಚೆಗೆ ಆದೇಶ ನೀಡಿದ್ದು ನೆನಪಿರಬಹುದು. ಆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಈ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದೆ.
ಶ್ರೀಶಾಂತ್ ಸೇರಿ ಮೂವರು ಆರೋಪ ಮುಕ್ತ
ಕೇರಳ ಹೈಕೋರ್ಟಿನ ಏಕಸದಸ್ಯ ಪೀಠವು ಶ್ರೀಶಾಂತ್ ಮೇಲಿನ ನಿಷೇಧ ಹಿಂಪಡೆಯುವಂತೆ ಬಿಸಿಸಿಐಗೆ ನಿರ್ದೇಶಿಸಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಸ್ಪಾಟ್ ಫಿಕ್ಸಿಂಗ್, ಮ್ಯಾಚ್ ಫಿಕ್ಸಿಂಗ್ ನಲ್ಲಿ ತೊಡಗಿದ್ದ ಆರೋಪದ ಮೇಲೆ ಕೇರಳ ಮೂಲದ ವೇಗಿ, ರಾಜಸ್ಥಾನ್ ರಾಯಲ್ಸ್ ತಂಡದ ಮಾಜಿ ಆಟಗಾರ ಶ್ರೀಶಾಂತ್ ಮೇಲೆ ಕ್ರಿಕೆಟ್ ನಿಂದ ದೂರವುಳಿಯುವಂತೆ ಆಜೀವ ನಿಷೇಧ ಹೇರಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆದೇಶ ಹೊರಡಿಸಿದೆ.
ಟೀಂ ಇಂಡಿಯಾದ ವೇಗಿ ಎಸ್ ಶ್ರೀಶಾಂತ್ ಮೇಲೆ ಹೇರಿರುವ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಜೀವಾವಧಿ ನಿಷೇಧವನ್ನು ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಕೇರಳ ಹೈಕೋರ್ಟ್ ಗೆ ಏಪ್ರಿಲ್ ನಲ್ಲಿ ಸ್ಪಷ್ಟಪಡಿಸಿತ್ತು.
ಆಗಸ್ಟ್ 7ರಂದು ಜಸ್ಟೀಸ್ ಮೊಹಮ್ಮದ್ ಮುಸ್ತಾಕ್ ಅವರಿಂದ ಏಕಸದಸ್ಯ ಪೀಠವನ್ನು ಪ್ರಶ್ನಿಸಿ ಬಿಸಿಸಿಐ ಪ್ರತಿ ಅಫಿಡವಿಟ್ ಸಲ್ಲಿಸಿದೆ. 34 ವರ್ಷ ವಯಸ್ಸಿನ ವೇಗಿ ಶ್ರೀಶಾಂತ್ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಹೇಳಿದೆ.
ಶ್ರೀಶಾಂತ್, ಅಂಕಿತ್ ಚಾವಣ್, ಅಜಿಂತ್ ಚಾಂಡಿಲ ಸೇರಿದಂತೆ 36 ಮಂದಿ ಆರೋಪಿಗಳಿಗೆ ಸ್ಪಾಟ್ ಫಿಕ್ಸಿಂಗ್ ನಿಂದ 2015ರ ಜುಲೈ ತಿಂಗಳಿನಲ್ಲಿ ಪಟಿಯಾಲ ಹೌಸ್ ಕೋರ್ಟಿನಿಂದ ಖುಲಾಸೆ ಸಿಕ್ಕಿದೆ. ಆದರೆ, ಬಿಸಿಸಿಐ ಶಿಸ್ತು ಪಾಲಿನ ಸಮಿತಿ ಮಾತ್ರ ತನ್ನ ಕಾನೂನು ಸಮರ ಮುಂದುವರೆಸಿದೆ.