ಅಬ್ಬರಿಸಿದ ಶೇನ್ ವಾಟ್ಸನ್
ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಶೇನ್ ವಾಟ್ಸನ್, ಈ ಬಾರಿ ಚೆನ್ನೈ ಪರ ಆಡುತ್ತಿದ್ದಾರೆ. ಮಾತ್ರವಲ್ಲ, ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಶುಕ್ರವಾರದ ಪಂದ್ಯದಲ್ಲಿಯೂ ವಾಟ್ಸನ್ ಆರಂಭದಿಂದಲೇ ವೇಗವಾಗಿ ಬ್ಯಾಟ್ ಬೀಸತೊಡಗಿದರು. ಅಂಬಟಿ ರಾಯುಡು ವಿಕೆಟ್ ಬೇಗನೆ ಕಳೆದುಕೊಂಡರೂ ಅದರ ಬಗ್ಗೆ ವಾಟ್ಸನ್ ತಲೆ ಕೆಡಿಸಿಕೊಳ್ಳಲಿಲ್ಲ. ಕೇವಲ 57 ಎಸೆತಗಳಲ್ಲಿ 106 ರನ್ ಗಳಿಸಿ ಕೊನೆಯ ಓವರ್ನಲ್ಲಿ ಔಟಾದರು. ಅವರ ಇನ್ನಿಂಗ್ಸ್ನಲ್ಲಿ 6 ಸಿಕ್ಸರ್ ಮತ್ತು 9 ಬೌಂಡರಿಗಳಿದ್ದವು.
ರೈನಾ-ವಾಟ್ಟೊ ಜೊತೆಯಾಟ
ಗಾಯದಿಂದ ಚೇತರಿಸಿಕೊಂಡು ಮತ್ತೆ ತಂಡವನ್ನು ಸೇರಿಕೊಂಡಿರುವ ಸುರೇಶ್ ರೈನಾ, ತಮ್ಮಲ್ಲಿನ ಸಾಮರ್ಥ್ಯ ಕೊಂಚವೂ ಕುಂದಿಲ್ಲ ಎಂಬಂತೆ ವೇಗದ ಆಟಕ್ಕೆ ಮೊರೆಹೋದರು. 29 ಎಸೆತಗಳಲ್ಲಿ 46 ರನ್ ಗಳಿಸಿದ ಅವರು ಅರ್ಧಶತಕ ಗಳಿಸುವಲ್ಲಿ ವಿಫಲರಾದರು. ಆದರೆ, ವಾಟ್ಸನ್ ಜತೆಗೆ ಕೇವಲ ಏಳು ಓವರ್ಗಳಲ್ಲಿ 81 ರನ್ ಜತೆಯಾಟ ನೀಡಿದರು. ಇದು ಚೆನ್ನೈ ತಂಡ ಬೃಹತ್ ಮೊತ್ತದತ್ತ ದಾಪುಗಾಲು ಇಡಲು ನೆರವಾಯಿತು.
ಕೊನೆಯಲ್ಲಿ ಬ್ರಾವೊ ಸಾಥ್
ನಾಯಕ ಎಂ.ಎಸ್. ಧೋನಿ ಮತ್ತು ಸ್ಯಾಮ್ ಬಿಲ್ಲಿಂಗ್ಸ್ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾಗಲಿಲ್ಲ. ಇಬ್ಬರೂ ಬೇಗನೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಡ್ವೇಯ್ನ್ ಬ್ರಾವೊ 16 ಎಸೆತದಲ್ಲಿ 24 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು.
ಮಿಂಚಿದ ವೇಗದ ಬೌಲರ್ಗಳು
ಚೆನ್ನೈ ತಂಡದ ಬೌಲಿಂಗ್ ದಾಳಿ ಕಟ್ಟುನಿಟ್ಟಾಗಿತ್ತು. ಎದುರಾಳಿ ತಂಡದವರಿಗೆ ರನ್ ಗಳಿಸಲು ಅವಕಾಶ ನೀಡಲಿಲ್ಲ. ಆರಂಭಿಕ ಆಟಗಾರರಾದ ನಾಯಕ ಅಜಿಂಕ್ಯ ರಹಾನೆ ಮತ್ತು ಹೆನ್ರಿಕ್ ಕ್ಲಾಸೆನ್ ಅವರನ್ನು ಬೇಗನೆ ಪೆವಿಲಿಯನ್ಗೆ ಅಟ್ಟಿದ ಬೌಲರ್ಗಳು, ಸಂಜು ಸ್ಯಾಮ್ಸನ್, ರಾಹುಲ್ ತ್ರಿಪಾಠಿ ಅವರಿಗೂ ಹೆಚ್ಚು ಕಾಲ ನಿಂತುಕೊಳ್ಳಲು ಬಿಡಲಿಲ್ಲ.
ಬಲಿಷ್ಠ ಬೌಲಿಂಗ್ ಲೈನ್ಅಪ್
ಚೆನ್ನೈ ತಂಡದ ನಾಯಕ ಧೋನಿ ಅವರಿಗೆ ಬೌಲಿಂಗ್ ಆಯ್ಕೆಗೆ ಹೆಚ್ಚಿನ ಅವಕಾಶ ಇರುವುದು ನೆರವಾಯಿತು. ದೀಪಕ್ ಚಾಹರ್, ಶಾರ್ದೂಲ್ ಠಾಕೂರ್ ಮತ್ತು ಇಮ್ರಾನ್ ತಾಹೀರ್ ಬೌಲಿಂಗ್ಗೆ ಮೀಸಲಾದ ಆಟಗಾರರು. ಅವರಿಗೆ ಶೇನ್ ವಾಟ್ಸನ್, ಕರಣ್ ಶರ್ಮಾ, ಡ್ವೇಯ್ನ್ ಬ್ರಾವೊ, ರವೀಂದ್ರ ಜಡೇಜಾ ಸಾಥ್ ನೀಡಿದರು. ಸುರೇಶ್ ರೈನಾ ಕೂಡ ಬೌಲಿಂಗ್ ಮಾಡಬಲ್ಲವರಾಗಿರುವುದರಿಂದ ಯಾವೊಬ್ಬ ಬೌಲರ್ ಹೆಚ್ಚು ರನ್ ಬಿಟ್ಟುಕೊಟ್ಟರೂ ಪರ್ಯಾಯವಾಗಿ ಮತ್ತೊಬ್ಬ ಬೌಲರ್ ಇರುವುದರಿಂದ ಧೋನಿಗೆ ಕಷ್ಟವಾಗಲಿಲ್ಲ. ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಇಮ್ರಾನ್ ತಾಹೀರ್ ಮಾತ್ರ ದುಬಾರಿಯಾದರು.
ಚೇಸಿಂಗ್ ಸಾಮರ್ಥ್ಯ ಇಲ್ಲದಿದ್ದರೂ ಪರೀಕ್ಷೆ
ಉತ್ತಮ ಬ್ಯಾಟಿಂಗ್ ಟ್ರ್ಯಾಕ್ ಹೊಂದಿದ್ದ ಪುಣೆ ಪಿಚ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದವರು ಉತ್ತಮ ಮೊತ್ತ ಕಲೆಹಾಕಲು ಅವಕಾಶವಿತ್ತು. ಟಾಸ್ ಗೆದ್ದ ರಾಜಸ್ಥಾನ ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್ ಮಾಡಿದ್ದರೆ ಚೆನ್ನೈಗೆ ದೊಡ್ಡ ಗುರಿ ನೀಡಬಹುದಾಗಿತ್ತು. ಹೆಸರಾಂತ ಆಟಗಾರರಿದ್ದರೂ, ರಾಜಸ್ಥಾನ ತಂಡ ಬೃಹತ್ ಮೊತ್ತವನ್ನು ಬೆನ್ನಟ್ಟಿ ಗೆದ್ದಿರುವುದು ಇತಿಹಾಸದಲ್ಲಿ ಕಡಿಮೆ. ಚೇಸಿಂಗ್ ಸಾಮರ್ಥ್ಯ ಕಡಿಮೆ ಇರುವ ತಂಡವಾಗಿರುವುದರಿಂದ, ಆ ಸವಾಲನ್ನು ಆಯ್ದುಕೊಂಡು ರಹಾನೆ ತಪ್ಪೆಸಗಿದರು.
ವಾಟ್ಸನ್ಗೆ ಜೀವದಾನ
ಕೇವಲ ಎಂಟು ರನ್ ಗಳಿಸಿದ್ದಾಗ ಶೇನ್ ವಾಟ್ಸನ್, ಸ್ಟುವರ್ಟ್ ಬಿನ್ನಿ ಬೌಲಿಂಗ್ನಲ್ಲಿ ಮೊದಲ ಸ್ಲಿಪ್ನತ್ತ ಕ್ಯಾಚ್ ನೀಡಿದ್ದರು. ಅದನ್ನು ಹಿಡಿತಕ್ಕೆ ಪಡೆದುಕೊಳ್ಳುವಲ್ಲಿ ಫೀಲ್ಡರ್ ರಾಹುಲ್ ತ್ರಿಪಾಠಿ ವಿಫಲರಾದರು. ಇದರ ಒಟ್ಟಾರೆ ಪರಿಣಾಮ ತಂಡದ ಮೇಲೆ ಆಗಿದ್ದು ಸ್ಪಷ್ಟ. ಏಕೆಂದರೆ ವಾಟ್ಸನ್ ಬಳಿಕ ಶತಕ ಸಿಡಿಸಿದರು. ಆರಂಭದಲ್ಲಿ ಕೈಗೆ ಬಂದ ತುತ್ತನ್ನು ಕೈಚೆಲ್ಲಿದ್ದು ರಾಜಸ್ಥಾನ ತಂಡಕ್ಕೆ ಮಾರಕವಾಯಿತು. ರೈನಾ ವಿಕೆಟ್ ಪತನದ ಬಳಿಕ ಚೆನ್ನೈ ತಂಡದ ರನ್ ಗಳಿಕೆಗೆ ಕಡಿವಾಣ ಬಿದ್ದರೂ, ಆಗಲೇ ತಡವಾಗಿತ್ತು.
ಮೊನಚಿಲ್ಲದ ಬೌಲಿಂಗ್
ರಾಜಸ್ಥಾನ ರಾಯಲ್ಸ್ ತಂಡದ ಬೌಲಿಂಗ್ ಪರಿಣಾಮಕಾರಿಯಾಗಿರಲಿಲ್ಲ. ಈ ಆವೃತ್ತಿಯಲ್ಲಿ ಮೊದಲ ಪಂದ್ಯವಾಡಿದ ಸ್ಟುವರ್ಟ್ ಬಿನ್ನಿ ಎರಡು ಓವರ್ಗಳಲ್ಲಿಯೇ 33 ರನ್ ನೀಡಿದರು. ಹಿಂದಿನ ಪಂದ್ಯದಲ್ಲಿ ಉತ್ತಮ ಬೌಲಿಂಗ್ ದಾಳಿ ನಡೆಸಿದ್ದ ಕೆ. ಗೌತಮ್ 3 ಓವರ್ನಲ್ಲಿ 35 ರನ್ ಚಚ್ಚಿಸಿಕೊಂಡರು. ಜೈದೇವ್ ಉನದ್ಕತ್, ಬೆನ್ ಸ್ಟೋಕ್ಸ್, ಬೆನ್ ಲಾಫ್ಲಿನ್ ಕೂಡ ಸಂಘಟಿತ ದಾಳಿ ನಡೆಸುವಲ್ಲಿ ವಿಫಲರಾದರು. ಕರ್ನಾಟಕದ ಮತ್ತೊಬ್ಬ ಬೌಲರ್ ಶ್ರೇಯಸ್ ಗೋಪಾಲ್ ಮಾತ್ರ ನಾಲ್ಕು ಓವರ್ಗಳಲ್ಲಿ ಕೇವಲ 20 ರನ್ ನೀಡಿ 3 ವಿಕೆಟ್ ಕಿತ್ತರು. ಅವರಿಗೆ ಉಳಿದ ಯಾವ ಬೌಲರ್ನಿಂದಲೂ ಬೆಂಬಲ ಸಿಗಲಿಲ್ಲ
ಬ್ಯಾಟಿಂಗ್ನಲ್ಲಿ ಆರಂಭಿಕ ಕುಸಿತ
ಬೃಹತ್ ಗುರಿ ಬೆನ್ನಟ್ಟಿದ್ದ ರಾಜಸ್ಥಾನ ತಂಡಕ್ಕೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಹೆನ್ರಿಕ್ ಕ್ಲಾಸಿನ್, ಅಜಿಂಕ್ಯ ರಹಾನೆ, ಸಂಜು ಸ್ಯಾಮ್ಸನ್ ಪೈಪೋಟಿಯಲ್ಲಿ ವಿಕೆಟ್ ಒಪ್ಪಿಸಿದರು. ಬೆನ್ ಸ್ಟೋಕ್ಸ್ ಮತ್ತು ಜೋಸ್ ಬಟ್ಲರ್ ತುಸು ಕಾಲ ಮೈದಾನದಲ್ಲಿ ತಳವೂರಿದರೂ, ಅವರ ಆಟ ಗುರಿಯನ್ನು ಬೆನ್ನಟ್ಟುವಷ್ಟು ವೇಗವಾಗಿರಲಿಲ್ಲ.
ಕೊನೆಯಲ್ಲಿ ಬ್ಯಾಟ್ಸ್ಮನ್ಗಳ ಪರೇಡ್
ಜೋಸ್ ಬಟ್ಲರ್ ಔಟಾದ ಬಳಿಕ ರಾಜಸ್ಥಾನ ಮತ್ತೆ ಕುಸಿತದ ಹಾದಿ ಕಂಡಿತು. ಬೌಲಿಂಗ್ನಲ್ಲಿ ದುಬಾರಿಯಾದ ಸ್ಟುವರ್ಟ್ ಬಿನ್ನಿ, ಬ್ಯಾಟಿಂಗ್ನಲ್ಲಿಯೂ ತಮ್ಮ ಸಾಮರ್ಥ್ಯ ಪ್ರದರ್ಶಿಸಲಿಲ್ಲ. ರಣಜಿ ಋತುವಿನಲ್ಲಿ ಉತ್ತಮ ಆಟವಾಡಿರುವ ಕೆ. ಗೌತಮ್ ಬಂದಷ್ಟೇ ವೇಗವಾಗಿ ಮರಳಿದರು. ಬೌಲಿಂಗ್ನಲ್ಲಿ ಸ್ಥಿರತೆ ಕೊರತೆ ಎದುರಿಸಿದ್ದ ರಾಜಸ್ಥಾನ ತಂಡ, ಬ್ಯಾಟಿಂಗ್ನಲ್ಲಿ ಕೂಡ ಅದೇ ಸಮಸ್ಯೆ ಅನುಭವಿಸಿತು. ಕಳೆದ ಪಂದ್ಯದಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳುವ ಗೋಜಿಗೆ ಹೋಗಲಿಲ್ಲ.