ಲೀಡ್ಸ್, ಆಗಸ್ಟ್ 23: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯ ಬುಧವಾರದಿಂದ ಆರಂಭವಾಗಲಿದೆ. ಎರಡನೇ ಹಾಗೂ ಮೂರನೇ ಟೆಸ್ಟ್ನ ಮಧ್ಯೆ 9 ದಿನಗಳ ಸುದೀರ್ಘ ಬಿಡುವು ಸಿಕ್ಕಿರುವ ಕಾರಣದಿಂದಾಗಿ ಆಟಗಾರರು ಮತ್ತಷ್ಟು ಹುರುಪಿನಿಂದ ಈಗ ಮತ್ತೊಂದು ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಉಪನಾಯಕ ಅಜಿಂಕ್ಯ ರಹಾನೆ ಪ್ರತಿಕ್ರಿಯೆ ನೀಡಿದ್ದು ತಮ್ಮ ಫಾರ್ಮ್ ಬಗೆಗಿನ ಟೀಕೆಗಳಿಗೆ ಉತ್ತರ ನೀಡಿದ್ದಾರೆ.
ಅಇಂಕ್ಯ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಸತತವಾಗಿ ಹಲವು ಪಂದ್ಯಗಳಲ್ಲಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಮಾಜಿ ಆಟಗಾರರು ಹಾಗೂ ಕ್ರಿಕೆಟ್ ಪ್ರೇಮಿಗಳಿಂದ ಸಾಕಷ್ಟು ಟೀಕೆಗಳು ಎದುರಾಗಿತ್ತು. ಈ ರೀತಿಯ ಟೀಕೆಗಳಿಗೆ ಕಳವಳಗೊಳ್ಳದೆ ತಮ್ಮ ಅನುಭವದಿಂದ ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸಬಲ್ಲೆವು ಎಂದು ಉತ್ತರವನ್ನು ನೀಡಿದ್ದಾರೆ. ಜನರು ಪ್ರಮುಖ ಜನರ ಬಗ್ಗೆಯೇ ಮಾತನಾಡುತ್ತಾರೆ. ಆದರೆ ಹೊರಗಿನ ಸದ್ದುಗಳು ತಮ್ಮನ್ನು ಆತಂಕಗೊಳ್ಳುವಂತೆ ಮಾಡಲಾರದು ಎಂದಿದ್ದಾರೆ ಅಜಿಂಕ್ಯಾ ರಹಾನೆ.
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಅಜಿಂಕ್ಯ ರಹಾನೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವು ತಾವು ಹಾಗೂ ಚೇತೇಶ್ವರ್ ಪೂಜಾರ ಇಬ್ಬರೂ ಕೂಡ ತಂಡಕ್ಕಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುವತ್ತ ಹೆಚ್ಚು ಗಮನಹರಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಐಪಿಎಲ್ 2021: ಬೆಂಗಳೂರಿನಲ್ಲಿ ಕ್ವಾರಂಟೈನ್ ಆರಂಭಿಸಿದ ಆರ್ಸಿಬಿ-ವಿಡಿಯೋ
ಕಳೆದ ಹಲವು ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಈ ಅನುಭವಿ ಆಟಗಾರರಿಂದ ದೊಡ್ಡ ಮೊತ್ತದ ಪ್ರದರ್ಶನ ಬಂದಿಲ್ಲ. ಹೀಗಾಗಿ ಇಬ್ಬರ ಮೇಲೆಯೂ ಈಗ ಸಾಕಷ್ಟು ಒತ್ತಡಗಳಿವೆ. ಕಳೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ರನ್ಗಳಿಸಲು ಈ ಇಬ್ಬರು ಆಟಗಾರರು ಕೂಡ ವಿಫಲವಾಗಿದ್ದರು. ನಂತರ ಕಳೆದ ಜೂನ್ ತಿಂಗಳಿನಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಆಡಿದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿಯೂ ಕೂಡ ಈ ಇಬ್ಬರಿಂದಲೂ ಉತ್ತಮ ಪ್ರದರ್ಶನ ಬಾರಲೇ ಇಲ್ಲ. ಇನ್ನು ಇಂಗ್ಲೆಂಡ್ ವಿರುದ್ಧದ ಸರಣಿಯ ನಾಟಿಂಗ್ಹ್ಯಾಮ್ನಲ್ಲಿ ನಡೆದ ಪಂದ್ಯದಲ್ಲಿ ಇಬ್ಬರು ಆಟಗಾರರು ಕೂಡ ಎರಡಂಕಿಯನ್ನು ಕೂಡ ಗಳಿಸುವಲ್ಲಿ ವಿಫಲವಾಗಿದ್ದರು. ಆದರೆ ಲಾರ್ಡ್ಸ್ ಮೈದಾನದಲ್ಲಿ ನಡೆದ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಈ ಜೋಡಿ ನಿರ್ಣಾಯಕ 100 ರನ್ಗಳ ಜೊತೆಯಾಟವನ್ನು ನೀಡಿತ್ತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 151 ರನ್ಗಳಿಂದ ಗೆದ್ದು ಬೀಗಿದೆ.
"ನನ್ನ ಬಗ್ಗೆ ಜನರು ಮಾತನಾಡಿಕೊಳ್ಳುತ್ತಿರುವ ಬಗ್ಗೆ ನಾನು ಖುಷಿ ಪಡುತ್ತೇನೆ. ಯಾಕೆಂದರೆ ಜನರು ಯಾವಾಗಲೂ ಮುಖ್ಯ ವ್ಯಕ್ತಿಗಳ ಬಗ್ಗೆ ಮಾತ್ರವೇ ಮಾತನಾಡುತ್ತಾರೆ. ಆದರೆ ನಾನು ಅದರ ಬಗ್ಗೆ ಹೆಚ್ಚು ಕಳವಳಗೊಂಡಿಲ್ಲ. ನಾನು ತಂಡಕ್ಕೆ ಉತ್ತಮ ಕೊಡುಗೆ ನೀಡುವ ಬಗ್ಗೆ ನನ್ನ ಗಮನ ಹರಿಸುತ್ತೇನೆ. ನಾನು ಹಾಗೂ ಚೇತೇಶ್ವರ್ ಪೂಜಾರ ಸುದೀರ್ಘ ಕಾಲದಿಂದ ಆಡುತ್ತಿದ್ದೇವೆ. ಇಂತಾ ಸಂದರ್ಭಗಳಲ್ಲಿ ಒತ್ತಡಗಳನ್ನು ಹೇಗೆ ನಿಭಾಯಿಸಬೇಕೆಂಬ ಅನುಭವ ನಮಗಿದೆ" ಎಂದಿದ್ದಾರೆ ಅಜಿಂಕ್ಯಾ ರಹಾನೆ.
"ಟೀಕೆಗಳನ್ನು ಮಾಡುವವರ ಬಗ್ಗೆ ಯೋಚಿಸುತ್ತಿಲ್ಲ. ನಾವೀಗ ತಂಡದ ಬಗ್ಗೆ ಚಿತ್ತ ನೆಟ್ಟಿದ್ದೇವೆ. ನಾವೀಗ ತಂಡಕ್ಕೆ ಅತ್ಯುತ್ತಮ ಕೊಡುಗೆ ನೀಡಲು ಬಯಸುತ್ತೇವೆ. ನಮ್ಮಿಂದ ನಿಯಂತ್ರಣ ಮಾಡಲು ಸಾಧ್ಯವಿಲ್ಲದ ಬಗ್ಗೆ ನಾವು ಯೋಚಿಸುವುದಕ್ಕೆ ಹೋಗಲಾರೆವು. ನನಗೆ ಎಲ್ಲವೂ ಸ್ಪೂರ್ತಿಯನ್ನು ನೀಡುತ್ತದೆ. ದೇಶಕ್ಕಾಗಿ ಆಡುವುದು ನನ್ನನ್ನು ಹೆಚ್ಚು ಸ್ಪೂರ್ತಿಗೊಳಿಸುತ್ತದೆ. ನಾನು ಟೀಕೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಜನರು ಪ್ರಮುಖ ವ್ಯಕ್ತಿಗಳ ಬಗ್ಗೆ ಮಾತ್ರವೇ ಟೀಕೆ ಮಾಡುತ್ತಾರೆ. ನನ್ನಿಂದ ನಿಯಂತ್ರಣ ಮಾಡಬಲ್ಲ ವಿಷಯಗಳ ಬಗ್ಗೆ ಮಾತ್ರವೇ ನಾನು ಗಮನಹರಿಸುತ್ತೇನೆ" ಎಂದಿದ್ದಾರೆ ಅಜಿಂಕ್ಯಾ ರಹಾನೆ.
ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಅಜಿಂಕ್ಯಾ ರಹಾನೆ ಎರಡನೇ ಇನ್ನಿಂಗ್ಸ್ನಲ್ಲಿ ಮಹತ್ವದ 61 ರನ್ಗಳ ಕೊಡುಗೆಯನ್ನು ನೀಡಿದ್ದರು. ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್ನಲ್ಲಿ ಆರಂಭಿಕರಾದ ಕೆಎಲ್ ರಾಹುಲ್ ರೋಹಿತ್ ಶರ್ಮಾ ಹಾಗೂ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕಣಕ್ಕಿಳಿದಿದ್ದ ಅಜಿಂಕ್ಯಾ ರಹಾನೆ ಚೇತೇಶ್ವರ್ ಪೂಜಾರ ಅವರನ್ನು ಸೇರಿಕೊಂಡ ರಹಾನೆ ತಂಡವನ್ನು ಕುಸಿತದಿಂದ ಪಾರುಮಾಡಿದ್ದಷ್ಟೇ ಅಲ್ಲದೆ ಉತ್ತಮ ರನ್ ಕೂಡ ಪೇರಿಸಿದರು. ನಾಲ್ಕನೇ ವಿಕೆಟ್ಗೆ ಈ ಜೋಡಿ 100 ರನ್ಗಳನ್ನು ಕಲೆ ಹಾಕಿದ್ದರು.
ಇನ್ನು ಈ ಸಂದರ್ಭದಲಲ್ಇ ಅಜಿಮ್ಕಯಾ ರಹಾನೆ ಲಾರ್ಡ್ಸ್ ಅಂಗಳದಲ್ಲಿ ಸಿಡಿಸಿದ 61 ರನ್ಗಳ ಕೊಡುನೆ ತನಗೆ ಹೆಚ್ಚು ತೃಪ್ತಿ ನೀಡಿದೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಆ ಇನ್ನಿಂಗ್ಸ್ನಲ್ಲಿ ಪೂಜಾರ ಅವರು ನೀಡಿದ 45 ರನ್ಗಳ ಕೊಡುಗೆ ಕೂಡ ಬಹಳ ಮಹತ್ವದ ಪಾತ್ರವಹಿಸಿದೆ ಎಂದಿದ್ದಾರೆ.
ಭಾರತ ಸಂಭಾವ್ಯ ತಂಡ: ಕೆಎಲ್ ರಾಹುಲ್, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್/ ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್
ಇಂಗ್ಲೆಂಡ್ ಸಂಭಾವ್ಯ ತಂಡ: ರೋರಿ ಬರ್ನ್ಸ್, ಹಸೀಬ್ ಹಮೀದ್, ಒಲೀ ಪೋಪ್/ಡೇವಿಡ್ ಮಲನ್, ಜೋ ರೂಟ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಜಾನಿ ಬೈರ್ಸ್ಟೊ, ಮೊಯೀನ್ ಅಲಿ, ಒಲ್ಲಿ ರಾಬಿನ್ಸನ್, ಸ್ಯಾಮ್ ಕರನ್, ಸಾಕಿಬ್ ಮಹಮೂದ್ ಮತ್ತು ಜೇಮ್ಸ್ ಆಂಡರ್ಸನ್