ದಾವಣಗೆರೆ, ನ. 12: ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಡಾ. ಶಾಮನೂರು ಪಾರ್ವತಮ್ಮ ಶಿವಶಂಕರಪ್ಪ ಅವರ ನೆನಪಿಗಾಗಿ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ.
ದಾವನಗೆರೆಯ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ನ. 27 ರಿಂದ 30ರವರೆಗೆ 7ನೇ ರಾಷ್ಟ್ರ ಮಟ್ಟದ ಹೊನಲು
ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದು ನಗರ ಪಾಲಿಕೆ ಸದಸ್ಯ, ಸಂಘದ ಅಧ್ಯಕ್ಷ ದಿನೇಶ್ ಶೆಟ್ಟಿ ಹೇಳಿದ್ದಾರೆ.
ಈ ಕ್ರಿಕೆಟ್ ಟೂರ್ನಿಯಲ್ಲಿ 24 ತಂಡಗಳ 280 ಆಟಗಾರರು ಭಾಗವಹಿಸುವರು. ಪರಸ್ಥಳದ ಆಟಗಾರರಿಗೆ ಊಟ, ವಸತಿ ಸೌಲಭ್ಯವನ್ನು ಒದಗಿಸಲಾಗುವುದು ಎಂದು ದಿನೇಶ್ ಶೆಟ್ಟಿ ತಿಳಿಸಿದರು.
ಕ್ರಿಕೆಟ್ ಪ್ರಶಸ್ತಿ ಬಹುಮಾನ ಮೊತ್ತ:
* ಪ್ರಥಮ ಬಹುಮಾನವಾಗಿ 3,00,001 ರೂ.,
* ದ್ವಿತೀಯ ಬಹುಮಾನವಾಗಿ 2,00,001 ರೂ. ಹಾಗೂ
* ತೃತೀಯ ಬಹುಮಾನವಾಗಿ 1,00,001 ರೂ.
ಈ ನಗದು ಬಹುಮಾನದೊಂದಿಗೆ ಎಸ್.ಎಸ್. ಶಾಮನೂರು ಡೈಮಂಡ್ ಹಾಗೂ ಅಕ್ಷತ್ ಕಪ್, ಶಿವಗಂಗಾ ಕಪ್ ಹೆಸರಿನಲ್ಲಿ ಪ್ರಶಸ್ತಿ ಫಲಕವನ್ನು ನೀಡಲಾಗುತ್ತದೆ.
ನ. 27ರಂದು ಸಂಜೆ 6 ಗಂಟೆಗೆ ಸಚಿವರಾದ ಶಾಮನೂರು ಶಿವಶಂಕರಪ್ಪ ಅವರು ಪಂದ್ಯಾವಳಿಯನ್ನು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ದಿನೇಶ್ ಕೆ. ಶೆಟ್ಟಿ ವಹಿಸುವರು. ರಾಜಗೋಪಾಲ ರೆಡ್ಡಿ, ಶ್ರೀನಿವಾಸ್ ಶಿವಗಂಗಾ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ.
ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಪತ್ನಿ ಪಾರ್ವತಮ್ಮ ಅವರು ತಮ್ಮ 73ನೇ ವಯಸ್ಸಿನಲ್ಲಿ 2007ರಲ್ಲಿ ಇಹಲೋಕ ತ್ಯಜಿಸಿದ್ದರು. ಶಿವಶಂಕರಪ್ಪನವರ ಜೊತೆ 51 ವರ್ಷಗಳ ದಾಂಪತ್ಯ ವಸಂತಗಳನ್ನು ಕಂಡಿದ್ದ ಚನ್ನಗಿರಿ ತಾಲೂಕಿನ ವಡ್ನಾಳ್ ಮೂಲದ ಪಾರ್ವತಮ್ಮ ಅವರು ತಮ್ಮ ಕೊನೆದಿನಗಳಲ್ಲಿ ನರರೋಗಕ್ಕೆ ತುತ್ತಾಗಿ ಹಿಂಸೆ ಅನುಭವಿಸಿದ್ದರು. ಅವರ ನೆನಪಿನಲ್ಲಿ ಕ್ರಿಕೆಟ್ ಟೂರ್ನಿಯನ್ನು ಪ್ರತಿವರ್ಷ ಹಮ್ಮಿಕೊಳ್ಳಲಾಗುತ್ತದೆ.