ಕೊರೊನಾ ಭೀತಿ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿಯನ್ನು ಏಪ್ರಿಲ್ 15ರ ವರೆಗೆ ಮುಂದೂಡಲಾಗಿದೆ. ಆದರೆ ಏಪ್ರಿಲ್ 15ರ ಬಳಿಕ ಮುಂದೇನು ಎನ್ನುವುದು ಇನ್ನೂ ಗೊಂದಲವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಇಂದು ಹೇಳಿಕೆ ನೀಡಿದ್ದಾರೆ. ಏಪ್ರಿಲ್ 15ರ ಬಳಿಕ ಐಪಿಎಲ್ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳಬಹುದು ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಕೊರೊನಾ ವೈರಸ್ನ ಪ್ರಭಾವ ನಿಧಾನವಾಗಿ ಹೆಚ್ಚಾಗುತ್ತಿದೆ. ಗುರುವಾರದಂದು ದೇಶದಲ್ಲಿ ಕೊರೊನಾ ನಾಲ್ಕನೇ ಬಲಿಯನ್ನು ಪಡೆದುಕೊಂಡಿದೆ. ಕೊರೊನಾ ವೈರಸ್ನ ಅಟ್ಟಹಾಸಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗುರುವಾರದಂದು ಕೆಲ ಮಹತ್ವದ ಸೂಚನೆಗಳನ್ನು ನೀಡಿದೆ.
ಕೇಂದ್ರ ಸಚಿವ ಕಿರಣ್ ರಿಜಿಜು ಏಪ್ರಿಲ್ 15 ರ ನಂತರ ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರ ಹೊಸ ಸಲಹೆ ಮತ್ತು ಮಾರ್ಗಸೂಚಿಗಳನ್ನು ತರಲಿದೆ ಎಂದಿದ್ದಾರೆ. ಇದು ಕೇವಲ ಕ್ರೀಡಾಕೂಟದ ಪ್ರಶ್ನೆಯಲ್ಲ ಆದರೆ ನಾಗರಿಕರ ಸುರಕ್ಷತೆಯ ಪ್ರಶ್ನೆಯಾಗಿದೆ. ಪಂದ್ಯಗಳ ಆಯೋಜನೆಯ ಸಂದರ್ಭದಲ್ಲಿ ಸಾವಿರಾರು ಪ್ರೇಕ್ಷಕರು ಇರುತ್ತಾರೆ. ಹೀಗಾಗಿ ಇದು ಕ್ರೀಡಾ ಸಂಸ್ಥೆ ಮತ್ತು ಕ್ರೀಡಾಪಟುಗಳ ವಿಚಾರ ಮಾತ್ರವಲ್ಲ ನಾಗರೀಕರ ಪ್ರಶ್ನೆಯೂ ಆಗಿದೆ ಎಂದು ಕೇಂದ್ರ ಕ್ರೀಡಾ ಸಚಿವರು ಹೇಳಿದ್ದಾರೆ.
ಕರೋನ ವೈರಸ್ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಕ್ರೀಡಾಕೂಟಗಳನ್ನು ರದ್ದುಗೊಳಿಸಬೇಕು ಎಂದು ಕ್ರೀಡಾ ಸಚಿವಾಲಯ ಮಾರ್ಚ್ 12 ರಂದು ಸೂಚಿಸಿತ್ತು. ಅನಿವಾರ್ಯ ಕ್ರೀಡಾಕೂಟಗಳಾಗಿದ್ದರೆ ಪ್ರೇಕ್ಷಕರಿಲ್ಲದೆ ಕ್ರೀಡಾಕೂಟಗಳನ್ನು ಆಯೋಜಿಸಬೇಕು ಎಂದು ಸೂಚನೆಯನ್ನು ನೀಡಿತ್ತು.
ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪ್ರವಾಸ ಸಲಹೆಗಳನ್ನು ನೀಡಿತ್ತು. ಮಾತ್ರವಲ್ಲದೆ ವಿದೇಶಿ ಆಟಗಾರರಿಗೆ ವಿಸಾವನ್ನು ನೀಡುವುದಿಲ್ಲ ಎಂದು ತಿಳಿಸಿತ್ತು. ಈ ಬೆಳವಣಿಗೆಯ ಬಳಿಕ ಮಾರ್ಚ್ 11ರಂದು ಮಹತ್ವದ ಸಭೆ ನಡೆಸಿದ ಬಿಸಿಸಿಐ ಮಾರ್ಚ್ 29ರಂದು ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿಯನ್ನು ಏಪ್ರಿಲ್ 15ರವರೆಗೆ ಮುಂದೂಡುವ ನಿರ್ಧಾರವನ್ನು ತೆಗೆದುಕೊಂಡಿತ್ತು.