ದಕ್ಷಿಣ ಆಫ್ರಿಕಾ ವಿರುದ್ಧ ಮುಂದಿನ ಸರಣಿ
"ಭಾರತ ತನ್ನ ಮುಂದಿನ ಸರಣಿಯನ್ನು ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದಲ್ಲಿ ಆಡಲಿದೆ. ಈ ಸರಣಿಗೆ ಹೊಸ ಆಯ್ಕೆ ಸಮಿತಿ ತಂಡವನ್ನು ಪ್ರಕಟಗೊಳಿಸಲಿದೆ" ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಆಯ್ಕೆ ಸಮಿತಿಗೆ ಯಾರ ಹೆಸರನ್ನು ಅಂತಿಮಗೊಳಿಸಬೇಕು ಎನ್ನುವ ವಿಚಾರದಲ್ಲಿ ಬಿಸಿಸಿಐ, ಮಂಗಳವಾರ (ಮಾ 3) ಸಭೆ ನಡೆಸಿದೆ.
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಮಾಜಿ ಆಲ್ರೌಂಡರ್ ಮದನ್ ಲಾಲ್ ಮತ್ತು ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಜಯ್ ಶಾ ನೇತೃತ್ವದಲ್ಲಿ ಸಭೆ ನಡೆದಿದೆ. ಒಟ್ಟು, ನಾಲ್ವರ ಹೆಸರು ಪ್ರತಿಷ್ಟಿತ ಹುದ್ದೆಗೆ ಕೇಳಿಬರುತ್ತಿದ್ದು, ಅದರಲ್ಲಿ ಇಬ್ಬರು ಕರ್ನಾಟಕದ ಮೂಲದವರು ಎನ್ನುವುದು ಗಮನಿಸಬೇಕಾದ ವಿಚಾರ.
ಸುನಿಲ್ ಜೋಶಿ ಹೆಸರು ಮಂಚೂಣಿಯಲ್ಲಿ
ಲಭ್ಯ ಮಾಹಿತಿಯ ಪ್ರಕಾರ, ಕನ್ನಡಿಗ, ವೃತ್ತಿ ಜೀವನದಲ್ಲಿ ಆಲ್ರೌಂಡರ್ ಆಗಿದ್ದ ಸುನಿಲ್ ಜೋಶಿ ಹೆಸರು ಮಂಚೂಣಿಯಲ್ಲಿ ಕೇಳಿಬರುತ್ತಿದೆ. ಬಹುತೇಕ ಇವರ ಹೆಸರೇ ಅಂತಿಮಗೊಳ್ಳುವ ಸಾಧ್ಯತೆಯಿದೆ. ಹದಿನೈದು ಟೆಸ್ಟ್ ಪಂದ್ಯವನ್ನು ಆಡಿರುವ ಜೋಶಿ, ಆಯ್ಕೆ ಸಮಿತಿಯ ಅಧ್ಯಕ್ಷರಾಗಿ, ಎಂ.ಎಸ್.ಕೆ.ಪ್ರಸಾದ್ ಜಾಗಕ್ಕೆ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ.
ವೆಂಕಟೇಶ್ ಪ್ರಸಾದ್ ಹೆಸರೂ ಕೇಳಿಬರುತ್ತಿದೆ
ಜೋಶಿ ಜೊತೆ ಇನ್ನೊಂದು ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರು ಹರ್ವೀಂದರ್ ಸಿಂಗ್. ಇದರ ಜೊತೆಗೆ, ಇನ್ನೊಬ್ಬ ಕನ್ನಡಿಗ ವೆಂಕಟೇಶ್ ಪ್ರಸಾದ್, ರಾಜೇಶ್ ಚೌಹಾಣ್ ಮತ್ತು ಲಕ್ಷ್ಮಣ್ ಶಿವರಾಮಕೃಷ್ಣನ್. ಈ ಪೈಕಿ ಸುನಿಲ್ ಜೋಷಿ ಅಥವಾ ಹರ್ವೀಂದರ್ ಸಿಂಗ್ ಇಬ್ಬರಲ್ಲಿ ಒಬ್ಬರು ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನುತ್ತವೆ ಬಿಸಿಸಿಐ ಮೂಲಗಳು.