
ಕೊಚ್ಚಿ, ಜೂನ್ 9: ಕೇರಳದ ಮಾಜಿ ರಣಜಿ ಟ್ರೋಫಿ ಆಟಗಾರ ಜಯಮೋಹನ್ ಥಂಪಿ ಸಾವಿಗೆ ಸಂಬಂಧಿಸಿ ಪುತ್ರ ಅಶ್ವಿನ್ ಥಂಪಿ ಅವರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. 64 ವರ್ಷ ವಯಸ್ಸಾಗಿದ್ದ ಜಯಮೋಹನ್, ತಿರುವನಂತಪುರಂನಲ್ಲಿ ಸಾವನ್ನಪ್ಪಿದ್ದರು. ಥಂಪಿ ಅವರನ್ನು ಅವರ ಪುತ್ರನೇ ಕೊಲೆ ಮಾಡಿರುವ ಅನುಮಾನದಡಿಯಲ್ಲಿ ಅಶ್ವಿನ್ ಅವರನ್ನು ಬಂಧಿಸಲಾಗಿದೆ.
ಬಲಗೈ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಆಗಿದ್ದ ಜಯಮೋಹನ್ ಥಂಪಿ ಕೇರಳ ತಂಡದ ಪರ 1979 ಮತ್ತು 1982ರ ನಡುವೆ 6 ಪ್ರಥಮದರ್ಜೆ ಪಂದ್ಯಗಳನ್ನು ಆಡಿದ್ದರು. 114 ರನ್ ಗಳಿಸಿದ್ದರು. ಇದಕ್ಕೂ ಮುನ್ನ ಕೇರಳ ಅಂಡರ್-22 ತಂಡದ ಪರ ಮೂರು ವರ್ಷಗಳ ಕಾಲ ಆಡಿದ್ದರು.
ಜಯಮೋಹನ್ ಅವರು ತ್ರವನ್ಕೋರ್ನಲ್ಲಿ ಸ್ಟೇಟ್ ಬ್ಯಾಂಕ್ನ ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತಿದ್ದರೆ, ಪುತ್ರ ಅಶ್ವಿನ್, ಕೇರಳದಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದರು. ಥಂಪಿ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ತಿರುವನಂತಪುರಂನಲ್ಲಿನ ಅವರ ನಿವಾಸದಲ್ಲಿ ಪತ್ತೆಯಾಗಿತ್ತು ಎನ್ನಲಾಗಿದೆ.
ಜಯಮೋಹನ್ ಥಂಪಿ ಪತ್ನಿ ಅನಿತಾ ಅವರು ಒಂದೆರಡು ವರ್ಷಗಳ ಹಿಂದೆ ತೀರಿಕೊಂಡಿದ್ದರು. ಸಂಗಾತಿಯ ಸಾವು ಜಯಮೋಹನ್ ಅವರನ್ನು ಖಿನ್ನತೆಗೀಡುಮಾಡಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಂಗಳವಾರ ಅಶ್ವಿನ್ ಅವರನ್ನು ಬಂಧಿಸಲಾಗಿದೆ. ಈ ವೇಳೆ ಅಶ್ವಿನ್ ತಾನು ತಪ್ಪಿತಸ್ಥನೆಂದು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.