ದಕ್ಷಿಣ ಆಫ್ರಿಕಾ ಮೂಲದ ಮಾಜಿ ಅಂಪೈರ್ ರೂಡಿ ಕೊರ್ಜೆನ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ದಕ್ಷಿಣ ಆಪ್ರಿಕಾದ ಡಿವರ್ಡೇಲ್ ಪ್ರದೇಶದಲ್ಲಿ ನಡೆದ ಭೀಕರ ಅಪಘಾತದಲ್ಲಿ ಮಾಜಿ ಅಂಪೈರ್ ರೂಡಿ ಸೇರಿದಂತೆ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಗಾಲ್ಫ್ ಆಡಿದ ಬಳಿಕ ಕೇಪ್ ಟೌನ್ನಿಂದ ನೆಲ್ಸನ್ ಮಂಡೇಲಾ ಕೊಲ್ಲಿಯ ಡೆಸ್ಪಾಚ್ನಲ್ಲಿರುವ ತನ್ನ ಮನೆಗೆ ಕೊರ್ಜೆನ್ ಗೆಳೆಯರ ಜೊತೆಗೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಭೀಕರ ಅಪಘಾತ ಸಂಭವಿಸಿದ್ದು ನಾಲ್ವರು ಮೃತಪಟ್ಟಿದ್ದಾರೆ. ಮಾಜಿ ಅಂಪೈರ್ ಕೂಡ ಮೃತಪಟ್ಟಿರುವ ವಿಚಾರವನ್ನು ಅವರ ಪುತ್ರ ಖಚಿತಪಡಿಸಿದ್ದಾರೆ.
ಅಲೊಗಾ ಎಫ್ಎಂ ನ್ಯೂಸ್ಗೆ ಕೊರ್ಜೆನ್ ಪುತ್ರ ಪ್ರತಿಕ್ರಿಯಿಸಿದ್ದಾರೆ. "ತಮ್ಮ ಗೆಳಯರ ಜೊತೆಗೆ ಅವರು ಗಾಲ್ಫ್ ಆಡಲು ತೆರಳಿದ್ದರು. ಸೋಮವಾರವೇ ಆವರು ವಾಪಾಸಾಗುವ ನಿರೀಕ್ಷೆಯಲ್ಲಿ ನಾವಿದ್ದೆವು. ಆದರೆ ಅವರು ಮತ್ತೊಂದು ಸುತ್ತಿನ ಪಂದ್ಯವನ್ನು ಆಡಿದರು ಎನಿಸುತ್ತದೆ. ಹೀಗಾಗಿ ಅವರು ಅಲ್ಲಿಂದ ತಡವಾಗಿ ಹೊರಟಿದ್ದರು" ಎಂದು ಕೊರ್ಜೆನ್ ಪುತ್ರ ತಿಳಿಸಿದ್ದಾರೆ.
ಕೊರ್ಜೆನ್ 1992ರಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಮೂಲಕ ಅಂತರಾಷ್ಟ್ರೀಯ
ಕ್ರಿಕೆಟ್ನಲ್ಲಿ ಅಂಪಾಯರ್ ವೃತ್ತಿಯನ್ನು ಆರಂಭಿಸಿದರು. ಈ ಸರಣಿಯಲ್ಲಿಯೇ ಮೊದಲ ಬಾರಿಗೆ ಆಟಗಾರರ ರನೌಟ್ ತೀರ್ಮಾನಕ್ಕೆ ರೀಪ್ಲೇಯನ್ನು ಬಳಸಲಾಗಿತ್ತು.
ಪೋರ್ಟ್ ಎಲಿಜಬೆತ್ನಲ್ಲಿ 43 ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಟೆಸ್ಟ್ನಲ್ಲಿ ಕೋರ್ಜೆನ್ ಅಂಪಾಯರಿಂಗ್ ವೃತ್ತಿಯನ್ನು ಆರಂಭಿಸಿದ್ದರು. ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ 1992ರಲ್ಲಿ ಪೂರ್ಣ ಸಮಯದ ಅಂಪೈರ್ ನೇಮಕಗೊಳಿಸಲಾಯಿತು. ಅದಾದ ಬಳಿಕ ಅಂಪೈರ್ ಆಗಿ ಕೊರ್ಜೆನ್ ಹಿಂದಿರುಗಿ ನೋಡಲೇ ಇಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ಟೆಸ್ಟ್ ಹಾಗೂ 200 ಏಕದಿನ ಪಂದ್ಯಗಳಲ್ಲಿ ಅಂಪಾಯರ್ ಆಗಿ ಕರ್ತವ್ಯ ನಿರ್ವಹಿಸಿದ ಎರಡನೇ ಅಂಪೈರ್ ಎನಿಸಿದ್ದಾರೆ ಕೊರ್ಜೆನ್.
2003 ಹಾಗೂ 2007ರ ವಿಶ್ವಕಪ್ನಲ್ಲಿ ಅವರು ಮೂರನೇ ಅಂಪೈರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. 2010ರಲ್ಲಿ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅಂಪಾಯರಿಂಗ್ ಕರ್ತವ್ಯ ಮುಗಿಸಿದ ಬಳಿಕ ನಿವೃತ್ತಿ ಘೋಷಣೆ ಮಾಡಿದರು.
ಇನ್ನು ಮಾಜಿ ಅಂಪೈರ್ ನಿಧನಕ್ಕೆ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸಂತಾಪ ವ್ಯಕ್ತಪಡಿಸಿದ್ದಾರೆ. ಆಟಗಾರನಾಗಿದ್ದ ಸಂದರ್ಭದಲ್ಲಿ ಅಂಪಾಯರ್ ಕೊರ್ಜೆನ್ ಅವರೊಂದಿಗೆ ಇದ್ದ ಆತ್ಮೀಯ ಒಡನಾಟವನ್ನು ಸೆಹ್ವಾಗ್ ಟ್ವೀಟ್ನಲ್ಲಿ ಸ್ಮರಿಸಿದ್ದಾರೆ. "ವೇಳೆ ರೂಡಿ ಕೊರ್ಜೆನ್. ಓಂ ಶಾಂತಿ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ನನಗೆ ಅವರೊಂದಿಗೆ ಅತ್ಯುತ್ತಮ ಒಡನಾಟವಿತ್ತು. ಬ್ಯಾಟಿಂಗ್ ವೇಳೆ ನಾನು ದುಡುಕಿದಾಗೆಲ್ಲಾ ನನಗೆ ಗದರಿ ಎಚ್ಚರಿಸುತ್ತಿದ್ದರು"
"ಎಚ್ಚರಿಕೆಯಿಂದ ಆಟವಾಡು, ನಾನು ನಿನ್ನ ಬ್ಯಾಟಿಂಗ್ ನೋಡಬೇಕು ಎನ್ನುತ್ತಿದ್ದರು. ಒಮ್ಮೆ ತಮ್ಮ ಮಗನಿಗಾಗಿ ಒಂದು ನಿಗದಿತ ಬ್ರ್ಯಾಂಡ್ನ ಪ್ಯಾಡ್ ಬಗ್ಗೆ ವಿಚಾರಿಸಿದ್ದರು. ಆಗ ನಾನು ಪ್ಯಾಡ್ಅನ್ನು ಅವರಿಗೆ ಉಡುಗೊರೆಯಾಗಿ ನೀಡಿದ್ದೆ. ಅದಕ್ಕೆ ಅವರು ಬಹಳ ಖುಷಿಪಟ್ಟಿದ್ದರು. ಆತನೋರ್ವ ಜಂಟಲ್ಮೆನ್ ಹಾಗೂ ಅದ್ಭುತ ವ್ಯಕ್ತಿ. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ರೂಡಿ" ಎಂದು ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.