ಅದು ಕಾಕತಾಳೀಯವೋ ಅಥವಾ ಉದ್ದೇಶಪೂರ್ವಕವೋ ಗೊತ್ತಿಲ್ಲ. ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಎಂಎಸ್ ಧೋನಿ ಹುಟ್ಟುಹಬ್ಬದಂದು ಫೇಸ್ಬುಕ್ ಹಾಗೂ ಟ್ವಿಟ್ಟರ್ನ ಕವರ್ ಫೋಟೋ ಬದಲಾಯಿಸಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಎಂಎಸ್ ಧೋನಿ ಅಭಿಮಾನಿಗಳು ಗೌತಮ್ ಗಂಭೀರ್ ವಿರುದ್ಧ ತಮ್ಮ ಅಸಮಾಧಾನವನ್ನು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.
ಅರೆ, ಧೋನಿ ಹುಟ್ಟುಹಬ್ಬಕ್ಕೂ ಗಂಭೀರ್ ಸಾಮಾಜಿಕ ಜಾಲತಾಣದ ಕವರ್ ಫೋಟೋ ಬದಲಾವಣೆಗೂ ಏನಿದು ಸಂಬಂದ ಎಂಬ ಪ್ರಶ್ನೆ ಮೂಡಬಹುದು. ಗೌತಮ್ ಗಂಭೀರ್ ಬದಲಾವಣೆ ಮಾಡಿದ ಫೋಟೋ 2011ರ ಏಕದಿನ ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಅರ್ಧ ಶತಕದ ಸಂಭ್ರಮವನ್ನು ವ್ಯಕ್ತಪಡಿಸುತ್ತಿರುವ ಫೋಟೋ ಇದಾಗಿದೆ. ಧೋನಿ ಬಗೆಗಿನ ಅಸಮಾಧಾನವನ್ನು ವ್ಯಕ್ತಪಡಿಸಲೆಂದೇ ಗಂಭೀರ್ ಈ ವರ್ತನೆಯನ್ನು ತೋರಿದ್ದಾರೆ ಎಂಬುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಎಂಎಸ್ ಧೋನಿ ಹುಟ್ಟುಹಬ್ಬ: ಮಾಹಿ ಕ್ರಿಕೆಟ್ ಜೀವನದ ಐದು ಸ್ಮರಣೀಯ ಇನ್ನಿಂಗ್ಸ್ಗಳ ಮೆಲುಕು
ಬುಧವಾರ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಧೋನಿ ಅಭಿಮಾನಿಗಳು ಕ್ರಿಕೆಟ್ ಪ್ರೇಮಿಗಳು ಧೋನಿ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಎಂಎಸ್ ಧೋನಿ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬಂದಿತು. ಎರಡು ವಿಶ್ವಕಪ್ ಗೆದ್ದುಕೊಟ್ಟ ನಾಯಕ ಎಂಬ ಕಾರಣಕ್ಕೆ ಅಭಿಮಾನಿಗಳಲ್ಲಿ ಧೋನಿ ಮೇಲೆ ವಿಶೇಷ ಪ್ರೀತಿಯಿದೆ. ಅದರಲ್ಲೂ 28 ವರ್ಷಗಳ ನಂತರ ಭಾರತ ಏಕದಿನ ವಿಶ್ವಕಪ್ ಚಾಂಪಿಯನ್ ಪಟ್ಟಕ್ಕೇರಲು ಧೋನಿ ನೇತೃತ್ವದಲ್ಲಿ ಸಾಧ್ಯವಾಗಿದ್ದಕ್ಕೆ ಧೋನಿ ಮೇಲೆ ವಿಶೇಷ ಅಭಿಮಾನವನ್ನು ಕ್ರಿಕೆಟ್ ಪ್ರೇಮಿಗಳು ಹೊಂದಿದ್ದಾರೆ.
ಆದರೆ ಧೋನಿ ನೇತೃತ್ವದಲ್ಲಿ ಗೆದ್ದ ಎರಡು ವಿಶ್ವಕಪ್ಗಳಲ್ಲಿಯೂ ಗೌತಮ್ ಗಂಭೀರ್ ಪಾತ್ರ ಮಹತ್ವದ್ದು ಎಂಬುದು ಮರೆಯುವಂತಿಲ್ಲ. ಟಿ20 ವಿಶ್ವಕಪ್ ಫೈನಲ್ನಲ್ಲಿ 54 ಎಸೆತಗಳಲ್ಲಿ 73 ರನ್ ಬಾರಿಸಿದ್ದರೆ ಏಕದಿನ ವಿಶ್ವಕಪ್ನ ಫೈನಲ್ನಲ್ಲಿ ಗಂಭೀರ್ 97 ರನ್ಗಳಿಸಿ ಔಟಾಗಿದ್ದರು. ಆದರೆ ಈ ಎರಡು ವಿಶ್ವಕಪ್ನಲ್ಲಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರೂ ಧೋನಿಗೆ ಸಿಕ್ಕ ಮಹತ್ವ ತನಗೆ ಸಿಗಲಿಲ್ಲ ಎಂಬ ಬೇಸರ ಗಂಭೀರ್ಗೆ ಇದ್ದಂತಿದೆ. ಇದಕ್ಕೆ ಪೂರಕವಾಗಿ ಹಲವಾರು ಬಾರಿ ಗಂಭೀರ್ ಹೇಳಿಕೆಯನ್ನು ನೀಡಿದ್ದರು.
ಈಗ ಗೌತಮ್ ಗಂಭೀರ್ ಸಾಮಾಜಿಕ ಜಾಲತಾಣದಲ್ಲಿ ಕವರ್ ಫೋಟೋ ಬದಲಾವಣೆ ಮಾಡಿದ ಸಂದರ್ಭ ಧೋನಿ ಅಭಿಮಾನಿಗಳನ್ನು ಕೆರಳುವಂತೆ ಮಾಡಿದೆ. ಹೀಗಾಗಿ ಗೌತಮ್ ಗಂಭೀರ್ ಅವರ ಈ ನಡೆಯ ಬಗ್ಗೆ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಕೆಲ ಅಭಿಮಾನಿಗಳು ಟೀಮ್ ಇಂಡಿಯಾಗೆ ಗಂಭೀರ್ ನೀಡಿದ ಕೊಡುಗೆಗೆ ಗೌರವವನ್ನು ವ್ಯಕ್ತಪಡಿಸುತ್ತಲೇ ನೀವು ಕವರ್ ಫೋಟೋ ಬದಲಾವಣೆ ಮಾಡಿದ ಸಮಯ ಸರಿಯಿಲ್ಲ ಎಂದು ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.