
ಹೊಸದಿಲ್ಲಿ, ಆಗಸ್ಟ್ 06: ಭಾರತ ಸಂವಿಧಾನದ ವಿಧೇಯಕ 370ನ್ನು ರದ್ದು ಪಡಿಸಿದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿ ಕಾಶ್ಮೀರ ವಿಚಾರದಲ್ಲಿ ಯುನೈಟೆಡ್ ನೇಷನ್ಸ್ ಮಧ್ಯಸ್ಥಿಕೆ ವಹಿಸಬೇಕೆಂದು ಅನಗತ್ಯವಾಗಿ ಮೂಗು ತೂರಿಸಿದ ಪಾಕಿಸ್ತಾನ ಆಲ್ರೌಂಡರ್ ಶಾಹಿದ್ ಅಫ್ರಿದಿಗೆ, ಭಾರತದ ಮಾಜಿ ಆಟಗಾರ ಹಾಗೂ ಲೋಕಸಭೆ ಸದಸ್ಯ ಗೌತಮ್ ಗಂಭೀರ್ ಖಡಕ್ ಉತ್ತರ ನೀಡಿದ್ದಾರೆ.
ವಿಧೇಯಕ 370 ಮತ್ತು 35 'ಎ' ರದ್ದು ಪಡಿಸಿ ಕಾಶ್ಮೀರ ಪುನಾರಚನೆಯ ಮಸೂದೆಗೆ ರಾಜ್ಯಸಭೆಯಲ್ಲಿ ಗ್ರೀನ್ ಸಿಗ್ನಲ್ ಲಭ್ಯವಾಗುತ್ತಿದ್ದಂತೆಯೇ ಟ್ವಿಟರ್ನಲ್ಲಿ ಹಾಜರಾದ ಅಫ್ರಿದಿ, "ಯುನೈಟೆಡ್ ನೇಟನ್ಸ್ನ ಸಂಕಲ್ಪದಂತೆ ಕಾಶ್ಮೀರದ ಮೂಲ ನಿವಾಸಿಗಳಿಗೆ ಅವರ ಹಕ್ಕನ್ನು ನೀಡಬೇಕು," ಎಂದು ಟ್ವೀಟ್ ಮಾಡಿದ್ದರು.
"ನಮ್ಮೆಲ್ಲರಂತೆ ಅವರಿಗೂ ಸ್ವಾತಂತ್ರ್ಯ ಬೇಕು. ಯುನೈಟೆಡ್ ನೇಷನ್ಸ್ ರೂಪಿಸಿದ್ದು ಯಾವ ಕಾರಣಕ್ಕೆ? ಅದು ನಿದ್ರೆ ಮಾಡುತ್ತಿದೆಯೇ? ಕಾಶ್ಮೀರದಲ್ಲಿ ಮಾನವೀಯತೆ ವಿರುದ್ಧ ನಡೆಯುತ್ತಿರುವ ಹಿಂಸಾಚಾರ ಮತ್ತು ತೀವ್ರತೆಯನ್ನು ಅರಿತುಕೊಳ್ಳಬೇಕು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಪಾತ್ರ ವಹಿಸಿ ಮಧ್ಯಸ್ಥಿಕೆಗೆ ಮುಂದಾಗಬೇಕು," ಎಂದು ಅಫ್ರಿದಿ ತಮ್ಮ ಟ್ವೀಟ್ನಲ್ಲಿ ವಟಗುಟ್ಟಿದ್ದಾರೆ.
ಇದಕ್ಕೆ ಖಡಕ್ ಉತ್ತರ ನೀಡಿದ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಗಂಭೀರ್, "ಅಫ್ರೀದಿ ಈ ವಿಚಾರದಲ್ಲಿ ಸ್ಪಷ್ಟವಾಗಿದ್ದಾರೆ. ಮಾನವೀಯತೆಯ ವಿರುದ್ಧ ಅನಗತ್ಯ ತೀವ್ರತೆ ಮತ್ತು ಹಿಂಸಾಚಾರ ಖಂಡಿತಾ ಇದೆ. ಇದನ್ನು ಬೆಳಕಿಗೆ ತಂದ ಅವರನ್ನು ಪ್ರಸಂಶಿಸಲೇ ಬೇಕು. ಆದರೆ, ಒಂದು ಸಂಗತಿಯನ್ನಷ್ಟೇ ಅವರು ಮರೆತಿದ್ದಾರೆ. ಇವೆಲ್ಲವೂ ನಡೆಯುತ್ತಿರುವ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ. ಮಗನೆ ಚಿಂತಿಸಬೇಡ ಇದನ್ನೂ ನಾವು ಶೀಘ್ರದಲ್ಲೇ ಬಗೆ ಹರಿಸಿಕೊಳ್ಳಲಿದ್ದೇವೆ," ಎಂದು ಗಂಭೀರ್ ಟ್ವೀಟ್ ಚಾಟಿ ಬೀಸಿದ್ದಾರೆ.
ಸೋಮವಾರ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ, ವಿಧೇಯಕ 370 ಮತ್ತು 35 'ಎ' ಎರಡನ್ನೂ ರದ್ದುಪಡಿಸಿ, ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ (ಜಮ್ಮು ಮತ್ತು ಕಾಶ್ಮೀರ ಹಾಗೂ ಲದಾಖ್) ವಿಂಗಡಿಸಿದ್ದರು.
ಇನ್ನು ಕೆಲ ದಿನಗಳ ಹಿಂದಷ್ಟೇ ಕಾಶ್ಮೀರ ವಿಚಾರವನ್ನು ಬಗೆಹರಿಸಿಕೊಳ್ಳಲು ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಇದಕ್ಕೆ ಭಾರತ ಸರಕಾರ ಇದು ಏಷ್ಯಾ ಭಾಗದ ಸಮಸ್ಯೆ ಆಗಿದ್ದು, ದ್ವಿಪಕ್ಷೀಯವಾಗಿಯೇ ಇದಕ್ಕೆ ಪರಿಹಾರ ಕಂಡುಕೊಳ್ಳುವುದಾಗಿ ಉತ್ತರಿಸಿತ್ತು.