
ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಸಂಸದ ಗೌತಮ್ ಗಂಭೀರ್ಗೆ ಉಗ್ರ ಸಂಘಟನೆಯಿಂದ ಜೀವಬೆದರಿಕೆ ಒಡ್ಡಲಾಗಿದೆ ಎಂದು ವರದಿಯಾಗಿದೆ. 'ಐಎಸ್ಐಎಸ್ ಕಾಶ್ಮೀರ್' ಈ ಜೀವ ಬೆದರಿಕೆಯೊಡ್ಡಿದೆ ಎನ್ನಲಾಗಿದ್ದು ದೆಹಲಿ ಪೊಲೀಸರಗೆ ಈ ಬಗ್ಗೆ ಗಂಭೀರ್ ಮಾಹಿತಿಯನ್ನು ನೀಡಿದ್ದು ಪ್ರಕರಣ ದಾಖಲಿಸಿದ್ದಾರೆ. ಗೌತಮ್ ಗಂಭೀರ್ ಅವರ ಅಧಿಕೃತ ಈಮೇಲ್ ಐಡಿಗೆ ಈ ಜೀವ ಬೆದರಿಕೆ ಸಂದೇಶವನ್ನು ಕಳುಹಿಸಲಾಗಿದೆ.
ಗೌತಮ್ ಗಂಭೀರ್ ಅವರ ಕಾರ್ಯದರ್ಶಿ ಗೌರವ್ ಅರೋರಾ ಈ ಬಗ್ಗೆ ಡೆಲ್ಲಿ ಸೆಂಟ್ರಲ್ ಡಿಸ್ಟ್ರಿಕ್ಟ್ನ ಡಿಸಿಪಿಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ. "ಮಂಗಳವಾರ ಸಂಜೆ ಗೌತಮ್ ಗಂಭೀರ್ ಅವರ ಅಧಿಕೃತ ಈಮೇಲ್ ಐಡಿಗೆ ಐಸಿಸ್ ಕಾಶ್ಮೀರ್ನಿಂದ ಮೇಲ್ ಬಂದಿದೆ. ಈ ಈ ಮೇಲೆ ಸಂದೇಶದಲ್ಲಿ ಸಂಸದರು ಹಾಗೂ ಅವರ ಕುಟುಂಬಕ್ಕೆ ಜೀವ ಬೆದರಿಕೆಯನ್ನು ಒಡ್ಡಲಾಗಿದೆ. ಹೀಗಾಗಿ ಈ ಬಗ್ಗೆ ಗಮನಹರಿಸಿ ಇದಕ್ಕೆ ಪೂರಕವಾದ ಭದ್ರತೆಯನ್ನು ನೀಡಬೇಕಾಗಿ ಮನವಿ ಮಾಡಿಕೊಳ್ಳುತ್ತಿದ್ದೇವೆ" ಎಂದು ಈ ಪತ್ರದಲ್ಲಿ ಮನವಿ ಮಾಡಲಾಗಿದೆ.
ಇನ್ನು ಈ ಬೆದರಿಕೆ ಒಡ್ಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಡೆಲ್ಲಿ ಸೆಂಟ್ರಲ್ ಡಿಸಿಪಿ ಶ್ವೇತಾ ಚೌಹಾಣ್ ಪ್ರತಿಕ್ರಿಯೆ ನೀಡಿದ್ದಾರೆ. "ಗೌತಮ್ ಗಂಭೀರ್ ಡೆಲ್ಲಿ ಪೊಲೀಸರನ್ನು ಸಂಪರ್ಕಿಸಿದ್ದು ತಮಗೆ ಬಂದಿರುವ ಬೆದರಿಕೆ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ. ಗೌತಮ್ ಗಂಭೀರ್ ಅವರ ನಿವಾಸಕ್ಕೆ ಈಗ ಭದ್ರತೆಯನ್ನು ನೀಡಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.
ಕ್ರಿಕೆಟ್ನಲ್ಲಿ ಸು,ಮಾರು ಒಂದೂವರೆ ವರ್ಷಗಳ ಕಾಲ ಸಕ್ರಿಯವಾಗಿದ್ದ ಗೌತಮ್ ಗಂಭೀರ್ ನಂತರ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷದಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಗಂಭೀರ್ ಸದ್ಯ ಪೂರ್ವ ದೆಹಲಿಯ ಸಂಸದನಾಗಿ ಪೂರ್ಣ ಪ್ರಮಾಣದ ರಾಜಕಾರಣಯಾಗಿ ಸಕ್ರಿಯವಾಗಿದ್ದಾರೆ. ಇಂತಾ ಸಂದರ್ಭದಲ್ಲಿ ಗೌತನ್ ಗಂಭೀರ್ಗೆ ಈ ಬೆದರಿಕೆಯೊಡ್ಡಿರುವ ಘಟನೆ ನಡೆದಿದೆ. ಈ ಘಟನೆಯ ಬಗ್ಗೆ ಗೌತಮ್ ಗಂಭೀರ್ ಮಾಧ್ಯಮಗಳ ಮುಂದೆ ಅಥವಾ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಮಾಹಿತಿಗಳನ್ನು ಕೂಡ ಹಂಚಿಕೊಂಡಿಲ್ಲ.
ಗಂಭೀರ್ ರಾಜಕಾರಣದಲ್ಲಿ ಸಕ್ರಿಯವಾದ ಬಳಿಕವೂ ಕ್ರಿಕೆಟ್ ಜೊತೆಗಿನ ನಂಟನ್ನು ಮುಂದಿವರಿಸಿದ್ದಾರೆ. ಆಗಾಗ ಕ್ರೀಡಾ ಚಾನೆಲ್ಗಳಲ್ಲಿ ಕ್ರಿಕೆಟ್ ಸಂಬಂಧಿಸಿದ ಸಂವಾದಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ಪ್ರಸಕ್ತ ಕ್ರಿಕೆಟ್ ಸರಣಿಗಳ ಬಗ್ಗೆ ತಮ್ಮ ವಿಶ್ಲೇಷಣೆಗಳನ್ನು ಕೂಡ ಮಾಡುತ್ತಿರುತ್ತಾರೆ.
ಗಂಭೀರ್ ಕ್ರಿಕೆಟಿಗನಾಗಿ ಟೀಮ್ ಇಂಡಿಯಾ ಪರವಾಗಿ ಸಾಕಷ್ಟು ಅದ್ಭುತ ಇನ್ನಿಂಗ್ಸ್ಗಳನ್ನು ನೀಡಿರುವ ಆಟಗಾರ. ಅದರಲ್ಲೂ 2007ರಲ್ಲಿ ಟೀಮ್ ಇಂಡಿಯಾ ಚಿಚ್ಚಲ ಟಿ20 ವುಶ್ವಕಪ್ ಮುಡಿಗೇರಿಸಿಕೊಂಡಾಗ ಹಾಗೂ 2011ರಲ್ಲಿ ಏಕದಿನ ವಿಶ್ವಕಪ್ನ ಫೈನಲ್ ಪಂದ್ಯವನ್ನು ಗೆದ್ದು ಚಾಂಪಿಯನ್ ಪಟ್ಟಕ್ಕೇರಿದ್ದಾಗ ಗೌತಮ್ ಗಂಭೀರ್ ನೀಡಿದ ಅದ್ಭುತ ಪ್ರದರ್ಶನ ಭಾರತ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಮಹತ್ವದ ಪಾತ್ರವಹಿಸಿತ್ತು.