
ನವದೆಹಲಿ, ನವೆಂಬರ್ 05: ದೆಹಲಿ ರಣಜಿ ತಂಡದ ನಾಯಕತ್ವವನ್ನು ತೊರೆಯುತ್ತಿರುವುದಾಗಿ ಡೆಲ್ಲಿ ಅಂಡ್ ಡಿಸ್ಟ್ರಿಕ್ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ)ಗೆ ಗೌತಮ್ ಗಂಭೀರ್ ತಿಳಿಸಿದ್ದಾರೆ. ಯುವ ಆಟಗಾರರಿಗೆ ಅವಕಾಶ ನೀಡುವ ಸಲುವಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ.
37 ವರ್ಷ ವಯಸ್ಸಿನ ಗಂಭೀರ್ ಅವರು ಹೊಸ ನಾಯಕನಿಗೆ ತಮ್ಮ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ನಿತಿನ್ ರಾಣಾ ಅವರನ್ನು ಹೊಸ ನಾಯಕರನ್ನಾಗಿ ಆಯ್ಕೆ ಮಾಡಲಾಗಿದ್ದು, ಧ್ರುವ್ ಶೋರೆ ಉಪನಾಯಕರಾಗಿದ್ದಾರೆ ಎಂದು ಡಿಡಿಸಿಎ ಪ್ರಕಟಿಸಿದೆ.
ದೆಹಲಿ ತನ್ನ ರಣಜಿ ಅಭಿಯಾನವನ್ನು ನವೆಂಬರ್ 12ರಿಂದ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಆರಂಭಿಸಲಿದ್ದು, ಮೊದಲ ಪಂದ್ಯವನ್ನು ಹಿಮಾಚಲ ಪ್ರದೇಶದ ವಿರುದ್ಧ ಆಡಲಿದೆ.
24 ವರ್ಷ ವಯಸ್ಸಿನ ರಾಣಾ ಅವರು ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಆಗಿದ್ದು, 24 ಪ್ರಥಮ ದರ್ಜೆ ಪಂದ್ಯಗಳಿಂದ 46.29ರನ್ ಸರಾಸರಿಯಂತೆ ಸ್ಕೋರ್ ಮಾಡಿದ್ದಾರೆ. 26 ವರ್ಷ ವಯಸ್ಸಿನ ಶೋರೆ ಅವರು 21 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ.
ಗೌತಮ್ ಅವರು ಐಪಿಎಲ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಮರಳಿದರೂ ಉತ್ತಮ ಪ್ರದರ್ಶನ ನೀಡಿರಲಿಲ್ಲ. ವಿಜಯ್ ಹಜಾರೆ ಟ್ರೋಫಿ ಟೂರ್ನಮೆಂಟ್ ನಲ್ಲಿ 500 ರನ್ ಗಳಿಸಿದರು. ಈ ಬಾರಿದೆಹಲಿ ರಣಜಿ ತಂಡಕ್ಕೆ ಶಿಖರ್ ಧವನ್, ವಿರಾಟ್ ಕೊಹ್ಲಿ, ರಿಷಬ್ ಪಂತ್ ಲಭ್ಯರಿಲ್ಲ ಹೀಗಾಗಿ, ಗಂಭೀರ್ ಅವರು ಆಡುವುದು ಮುಖ್ಯವಾಗಿದೆ.