
ನವದೆಹಲಿ, ಜನವರಿ 11: ಟಿವಿ ಟಾಕ್ ಶೋನಲ್ಲಿನ ವಿವಾದಾತ್ಮಕ ಹೇಳಿಕೆಗೆ ಟೀಮ್ ಇಂಡಿಯಾ ಆಟಗಾರರಾದ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯಗೆ ಶಾಸ್ತಿಯಾಗಿದೆ. ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಪಾಂಡ್ಯ, ರಾಹುಲ್ ಇಬ್ಬರಿಗೂ ಆಡಲು ಬಿಸಿಸಿಐ ಅವಕಾಶ ನೀಡಿಲ್ಲ. ಏಕದಿನ ಸರಣಿಯಿಂದಲೇ ಇಬ್ಬರೂ ಹೊರಗುಳಿಯುವ ಸಾಧ್ಯತೆಯೂ ಇದೆ.
ಬಾಲಿವುಡ್ ನಟ, ನಿರ್ದೇಶಕ, ನಿರ್ಮಾಪಕ ಕರಣ್ ಜೊಹರ್ ಸ್ಟಾರ್ ಚಾನೆಲ್ನಲ್ಲಿ ನಡೆಸಿಕೊಡುವ ಕಾಫೀ ವಿತ್ ಕರಣ್ ಟಾಕ್ ಶೋನಲ್ಲಿ ಪಾಲ್ಗೊಂಡಿದ್ದಾಗ ಹಾರ್ದಿಕ್ ಪಾಂಡ್ಯ ಮತ್ತು ಕನ್ನಡಿಗ ಲೋಕೇಶ್ ರಾಹುಲ್ ಎಲ್ಲೆ ಮೀರಿ ಮಾತಾಡಿದ್ದರು. ಇದು ಕ್ರಿಕೆಟ್ ಅಭಿಮಾನಿಗಳು ಮತ್ತು ಬಿಸಿಸಿಐ ಸಿಟ್ಟಿಗೆ ಕಾರಣವಾಗಿತ್ತು.
ಶೋ ವೇಳೆ ಹಾರ್ದಿಕ್ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಕ್ರಿಕೆಟ್ ಆಟಗಾರ ಮನೋಭಾವನೆಯನ್ನು ಬದಿಗಿಟ್ಟು ಶೋನಲ್ಲಿ ಹೇಗೆಂದರೆ ಹೇಗೋ ಮಾತನಾಡಿದ್ದರು. ಇದೇ ವೇಳೆ ಸಚಿನ್ ಮತ್ತು ಕೊಹ್ಲಿ ಇವರಲ್ಲಿ ಯಾರು ಶ್ರೇಷ್ಠ ಎಂಬ ಪ್ರಶ್ನೆಗೆ ಇಬ್ಬರೂ ಕೊಹ್ಲಿ ಎಂದು ಉತ್ತರಿಸಿದ್ದರು. ಇಬ್ಬರ ಉತ್ತರ ಕೊಹ್ಲಿಯನ್ನೇ ಮುಜುಗರಕ್ಕೀಡು ಮಾಡುವಂತಿತ್ತು.
ವಿವಾದ ಜೋರಾದಾಗ ಕೊಹ್ಲಿಯೇ ಈ ಬಗ್ಗೆ ಪ್ರತಿಕ್ರಿಯಿಸಿದ್ದರು. ನಾನು ಯಾರಿಂದಾಗಿ ಆಟ ಕಲಿತೆನೊ ಅವರಿಗೆ (ಸಚಿನ್) ಹೋಲಿಸಿದ್ದು ಸರಿಯಲ್ಲ. ಇಬ್ಬರ ಹುಚ್ಚಾಟಿಕೆಗೆ ತಂಡ ಜವಾಬ್ದಾರಿಯಲ್ಲ ಎಂದಿದ್ದರು. ಅಂತೂ ಹುಡುಕಾಟಕ್ಕಿಳಿದ ಹುಡುಗರಿಬ್ಬರು ಪಂದ್ಯವನ್ನೇ ಕಳೆದುಕೊಳ್ಳಬೇಕಾಗಿದೆ. ಜನವರಿ 12ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಪಾಂಡ್ಯ, ರಾಹುಲ್ ಆಡುತ್ತಿಲ್ಲ.