ಭಾರತದಲ್ಲಿ ಕ್ರಿಕೆಟ್ ಎಂದರೆ ಒಂದು ಧರ್ಮ ಎನ್ನುವಂತೆ ನೋಡಲಾಗುತ್ತದೆ. ಎಲ್ಲಾ ಕ್ರೀಡೆಗಳಿಗಿಂತ ಕ್ರಿಕೆಟ್ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದೆ. ನೆಚ್ಚಿನ ಕ್ರಿಕೆಟ್ ಆಟಗಾರರನ್ನು ನೋಡಲು ಕ್ರೀಡಾಭಿಮಾನಿಗಳು ಕಾಯುತ್ತಿರುತ್ತಾರೆ. ಇನ್ನು ಭಾರತ-ಆಸ್ಟ್ರೇಲಿಯಾದಂತ ತಂಡಗಳ ನಡುವಿನ ಪಂದ್ಯ ನಡೆಯುತ್ತದೆ ಎಂದು ಕೇಳಬೇಕೆ, ಟಿಕೆಟ್ಗಾಗಿ ಭಾರಿ ಪೈಪೋಟಿ ಶುರುವಾಗುತ್ತದೆ.
ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಟಿ20 ಪಂದ್ಯ ಸೆಪ್ಟೆಂಬರ್ 25ರಂದು ಹೈದರಾಬಾದ್ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೂರು ವರ್ಷಗಳ ಬಳಿಕ ಹೈದರಾಬಾದ್ನಲ್ಲಿ ಮೊದಲನೇ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವೊಂದು ನಡೆಯುತ್ತಿದೆ. ಸಹಜವಾಗಿಯೇ ಕ್ರಿಕೆಟ್ ನೋಡಲು ಅಪಾರ ಅಭಿಮಾನಿಗಳು ಸೇರುತ್ತಾರೆ. ಆದರೆ, ಟಿಕೆಟ್ ಪಡೆಯಲು ಹೋದ ಅಭಿಮಾನಿಗಳಿಗೆ ಪೊಲೀಸರು ಲಾಠಿ ಏಟಿನ ರುಚಿ ತೋರಿಸಿದ್ದಾರೆ.
ಗುರುವಾರ, ಟಿಕೆಟ್ಗಳನ್ನು ಮಾರಾಟ ಮಾಡುವ ಜಿಮ್ಖಾನಾ ಮೈದಾನದ ಹೊರಗೆ ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್ ಮಾಡುವುದರೊಂದಿಗೆ ಗೊಂದಲ ಉಂಟಾಯಿತು. ಪೊಲೀಸರು ಲಾಠಿ ಪ್ರಹಾರ ಮಾಡಿದ್ದರಿಂದ ಕೆಲವು ಅಭಿಮಾನಿಗಳು ನೆಲಕ್ಕೆ ಬಿದ್ದರು. 20ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ
ಟಿಕೆಟ್ ಪಡೆಯಲು ಬಂದ ಸಾವಿರಾರು ಅಭಿಮಾನಿಗಳು
ಸಾಮಾಜಿಕ ಮಾಧ್ಯಮದಲ್ಲಿ ಟೆಕೆಟ್ ಪಡೆಯಲು ಸಾಲಿನಲ್ಲಿ ನಿಂತಿದ್ದ ಅಭಿಮಾನಿಗಳ ಮೇಲೆ ಲಾಠಿ ಪ್ರಹಾರ ಮಾಡಿರುವ ವಿಡಿಯೋಗಳು ವೈರಲ್ ಆಗಿವೆ. ಪೊಲೀಸರ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಭಾರತ vs ಆಸ್ಟ್ರೇಲಿಯಾ ಮೂರನೇ ಟಿ20 ಪಂದ್ಯದ ಟಿಕೆಟ್ಗಾಗಿ ಬೆಳಗಿನ ಜಾವ 4-6 ಗಂಟೆಯಿಂದಲೇ ಅಭಿಮಾನಿಗಳು ಸರತಿ ಸಾಲಿನಲ್ಲಿ ನಿಂತಿದ್ದರು. ಸಮಯ ಕಳೆದಂತೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು, ಪೊಲೀಸರಿಗೆ ಜನರನ್ನು ನಿಯಂತ್ರಿಸುವುದು ಕಷ್ಟವಾಯಿತು.

ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಬಗ್ಗೆ ಆಕ್ರೋಶ
ಟಿಕೆಟ್ಗಾಗಿ ಭಾರಿ ಬೇಡಿಕೆ ಬಂದಿರುವುದು ಅಚ್ಚರಿಯೇನಲ್ಲ, ಎರಡು ಬಲಿಷ್ಠ ತಂಡಗಳ ನಡುವೆ, ಹೈ ವೋಲ್ಟೇಜ್ ಪಂದ್ಯ ಮೂರು ವರ್ಷಗಳ ನಂತರ ಹೈದರಾಬಾದ್ನಲ್ಲಿ ಆಯೋಜನೆಯಾಗಿರುವಾಗ ಅಭಿಮಾನಿಗಳು ನೋಡಲು ಕಾತರಿಸುವುದು ಸಹಜ. ಆದರೆ, ಇಂತಹ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಲಾಗದ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ನ ಹೊಣೆ ಹೊರಬೇಕು. ರಾಜ್ಯ ಮಂಡಳಿಯು ಪರಿಸ್ಥಿತಿಯನ್ನು ಅರಿತುಕೊಳ್ಳಬೇಕು ಮತ್ತು ಟಿಕೆಟ್ ಪ್ರಕ್ರಿಯೆಯನ್ನು ಸುಗಮಗೊಳಿಸಲು ಯೋಜನೆಗಳನ್ನು ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಗುರುವಾರ ಬೆಳಗ್ಗೆಯಿಂದ ಹೈದರಾಬಾದ್ನ ಜಿಮ್ಖಾನಾ ಮೈದಾನದಲ್ಲಿ ಮೂರನೇ ಪಂದ್ಯದ ಟಿಕೆಟ್ ಮಾರಾಟ ಆರಂಭವಾಗಲಿದೆ ಎಂದು ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಪ್ರಕಟಿಸಿದೆ. ಹೀಗಾಗಿ ನಗರದ ವಿವಿಧೆಡೆಯಿಂದ ಕ್ರೀಡಾಂಗಣಕ್ಕೆ ಜನಸಾಗರವೇ ಹರಿದು ಬಂದಿತ್ತು. ಟಿಕೆಟ್ ಖರೀದಿಸಲು ಅಭಿಮಾನಿಗಳು ಬುಧವಾರವೇ ಮೈದಾನಕ್ಕೆ ಬಂದಿದ್ದರಿಂದ ಎಚ್ಸಿಎ ಗುರುವಾರದಿಂದ ಟಿಕೆಟ್ ಮಾರಾಟ ಮಾಡುವುದಾಗಿ ಹೇಳಿತು. ಬುಧವಾರ ಟಿಕೆಟ್ ಪಡೆಯಲು ಬಂದವರು ಟಿಕೆಟ್ ಸಿಗದೆ ಮನೆಗೆ ಮರಳಬೇಕಾಯಿತು.
ಹೈದರಾಬಾದ್ನಿಂದ ಮಾತ್ರವಲ್ಲ, ರಾಜ್ಯದ ಹಲವು ಭಾಗಗಳಿಂದ ನೆಚ್ಚಿನ ಆಟಗಾರರನ್ನು ಮೈದಾನದಲ್ಲಿ ಕಣ್ತುಂಬಿಕೊಳ್ಳಲು ಟಿಕೆಟ್ಗಾಗಿ ಮುಗಿಬಿದ್ದರು.