
ಸತತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ ಸಾಕಷ್ಟು ಟೀಕೆಗೆ ಒಳಗಾಗಿರುವ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ ಪೂಜಾರನನ್ನ ತಂಡದಿಂದ ಕೈ ಬಿಡಲಾಗುವುದು ಎಂದು ಲಿಟ್ಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಅಂದಾಜಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಸಿಕ್ಕ ಅವಕಾಶವನ್ನೆಲ್ಲಾ ಮಣ್ಣು ಪಾಲು ಮಾಡಿದ ಪೂಜಾರ-ರಹಾನೆ ಇಡೀ ಸರಣಿಯಲ್ಲಿ ತಲಾ ಒಂದು ಅರ್ಧಶತಕ ದಾಖಲಿಸಿದ್ದಾರೆ. ಬೆಂಚ್ನಲ್ಲಿ ಯುವ ಆಟಗಾರರಾದ ಶ್ರೇಯಸ್ ಅಯ್ಯರ್ ಮತ್ತು ಹನುಮ ವಿಹಾರಿರಂತಹ ಆಟಗಾರರು ಕಾದಿರುವಾಗ ಮುಂಬರುವ ಶ್ರೀಲಂಕಾ ವಿರುದ್ಧದ ಸರಣಿಗೆ ಪೂಜಾರ ಮತ್ತು ರಹಾನೆಯನ್ನ ತಂಡದಿಂದ ಹೊರಹಾಕಲಾಗುವುದು ಎನ್ನಲಾಗಿದೆ.
ಅಜಿಂಕ್ಯ ಕಳೆದ ವರ್ಷದ ಹಿಂದೆ ಮೆಲ್ಬರ್ನ್ನಲ್ಲಿ ಶತಕ ಸಿಡಿಸಿದ ಬಳಿಕ ರನ್ ಬರ ಎದುರಿಸುತ್ತಿದ್ದಾರೆ. ಜೋಹಾನ್ಸ್ಬರ್ಗ್ ಟೆಸ್ಟ್ನಲ್ಲಿ ಏಕೈಕ ಅರ್ಧಶತಕ ಅವರನ್ನ ಮೂರನೇ ಟೆಸ್ಟ್ ಪಂದ್ಯದವರೆಗೂ ತಂದು ನಿಲ್ಲಿಸಿತು. ಇನ್ನು ಪೂಜಾರ ಕಳೆದ ಮೂರು ವರ್ಷಗಳಿಂದ ಶತಕ ಗಳಿಸಿಲ್ಲ. ಅವರು ಕಠಿಣ ಪರಿಸ್ಥಿತಿಯಲ್ಲಿ ಅರ್ಧಶತಕಗಳನ್ನು ಗಳಿಸಿದ್ದಾರೆ ಅದು ತಂಡದಲ್ಲಿ ಅವರ ಸ್ಥಾನ ಉಳಿಸಿದೆ. ಆದಾಗ್ಯೂ, ಮುಂಬರುವ ಶ್ರೀಲಂಕಾ ಸರಣಿಯಲ್ಲಿ ಅವರ ಸ್ಥಾನವನ್ನು ಪಡೆದುಕೊಳ್ಳಬಹುದು ಎಂದು ಗವಾಸ್ಕರ್ ಹೇಳಿದ್ದಾರೆ.
ಬೆಂಚ್ನಲ್ಲಿ ಕಾಯುತ್ತಿರುವ ಹನುಮ ವಿಹಾರಿ
ಜೋಹಾನ್ಸ್ ಬರ್ಗ್ ಟೆಸ್ಟ್ನಲ್ಲಿ ಕೊನೆಯವರೆಗೂ ತಾಳ್ಮೆಯ ಆಟವಾಡಿದ ಹನುಮ ವಿಹಾರಿ ಅಜೇಯ 40 ರನ್ ಕಲೆಹಾಕುವ ಮೂಲಕ ಅಮೂಲ್ಯ ಕೊಡುಗೆ ನೀಡಿದ್ರು. ಭಾರತ ಎ ತಂಡದ ಪ್ರವಾಸಕ್ಕಾಗಿ ದಕ್ಷಿಣ ಆಫ್ರಿಕಾಗೆ ಬಂದಿದ್ದ ವಿಹಾರಿ ಎರಡನೇ ಟೆಸ್ಟ್ನಲ್ಲಿ ಸಿಕ್ಕ ಅವಕಾಶದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ರು. ದುರದೃಷ್ಟವಶಾತ್, ದ್ರಾವಿಡ್ ಸುಳಿವು ನೀಡಿದಂತೆ, ಹಿರಿಯ ಆಟಗಾರರಿಗೆ ಆದ್ಯತೆ ನೀಡಲಾಯಿತು ಮತ್ತು ಟೆಸ್ಟ್ನಲ್ಲಿ ವಿಹಾರಿ ಬದಲು ರಹಾನೆ ಅವರನ್ನು ಸೇರಿಸಲಾಯಿತು.
ಆದ್ರೀಗ ರಹಾನೆ ಸಿಕ್ಕ ಅವಕಾಶವನ್ನೆಲ್ಲಾ ಕೈ ಚೆಲ್ಲಿದ್ದು, ಟೀಂ ಇಂಡಿಯಾದಲ್ಲಿ ಇನ್ನೂ ಉಳಿದುಕೊಳ್ಳುವ ಯಾವುದೇ ಅರ್ಹತೆ ಹೊಂದಿಲ್ಲ ಎಂಬುದು ಕ್ರಿಕೆಟ್ ಪಂಡಿತರ ಮಾತಾಗಿದೆ. ಜೊತೆಗೆ ಸುನಿಲ್ ಗವಾಸ್ಕರ್ ಕೂಡ ಮುಂದಿನ ಟೆಸ್ಟ್ ಸರಣಿಗೆ ರಹಾನೆ ಅಷ್ಟೇ ಅಲ್ಲದೆ ಪೂಜಾರಗೂ ಸ್ಥಾನ ಸಿಗದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
"ಅಜಿಂಕ್ಯ ರಹಾನೆ ಮಾತ್ರವಲ್ಲ (ತಂಡದಿಂದ ಹೊರಗುಳಿಯುತ್ತಾರೆ) ಎಂದು ನಾನು ಭಾವಿಸುತ್ತೇನೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಅವರಿಗೆ ಅವಕಾಶ ಸಿಕ್ಕಿತು ಮತ್ತು ಅವರು ಉತ್ತಮವಾಗಿ ಶತಕ ದಾಖಲಿಸಿದರು. ಅವರು ಸರಣಿಯುದ್ದಕ್ಕೂ ಯೋಗ್ಯವಾದ ರನ್ ಗಳಿಸಿದರು, ಆದ್ದರಿಂದ ಪ್ಲೇಯಿಂಗ್ 111 ನಲ್ಲಿ ಎರಡು ಖಾಲಿ ಸ್ಥಾನಗಳು ಇರುತ್ತವೆ'' ಎಂದು ನಾನು ನಂಬುತ್ತೇನೆ ಎಂದು ಸುನಿಲ್ ಗವಾಸ್ಕರ್ ಹೇಳಿದರು.
ಮಾತು ಮುಂದುವರಿಸಿದ ಸುನಿಲ್ ಗವಾಸ್ಕರ್ "ಶ್ರೀಲಂಕಾ ಸರಣಿಗಾಗಿ ಪೂಜಾರ ಮತ್ತು ರಹಾನೆ ಇಬ್ಬರನ್ನೂ ತಂಡದಿಂದ ಕೈಬಿಡಲಾಗುವುದು ಎಂದು ನಾನು ಭಾವಿಸುತ್ತೇನೆ. ಅಯ್ಯರ್ ಮತ್ತು ವಿಹಾರಿ ಇಬ್ಬರೂ ಆಡಲಿದ್ದಾರೆ. ನಂ.3ರಲ್ಲಿ ಯಾರು ಆಡುತ್ತಾರೆ ಎಂಬುದನ್ನು ನೋಡಬೇಕು. ಪೂಜಾರ ಸ್ಥಾನವನ್ನು ಹನುಮ ವಿಹಾರಿ ಪಡೆದುಕೊಳ್ಳಬಹುದು ಮತ್ತು ರಹಾನೆ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ನಂ.5 ಆಗಬಹುದು, ಆದರೆ ನಾವು ನೋಡಬೇಕಾಗಿದೆ. ಅದೇನೇ ಇದ್ದರೂ, ಶ್ರೀಲಂಕಾ ವಿರುದ್ಧ ಖಂಡಿತವಾಗಿಯೂ ಎರಡು ಸ್ಥಾನಗಳು ಖಾಲಿ ಇರುತ್ತವೆ ಎಂದು ನಾನು ಭಾವಿಸುತ್ತೇನೆ'' ಎಂದು ಗವಾಸ್ಕರ್ ಹೇಳಿದರು.
ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಟೆಸ್ಟ್ ಎರಡನೇ ಇನ್ನಿಂಗ್ಸ್ನಲ್ಲಿ ಮೂರನೇ ದಿನದಾಟದ ಆರಂಭದಲ್ಲೇ ಚೇತೇಶ್ವರ್ ಪೂಜಾರ ಔಟಾದ ನಂತರದ ಓವರ್ನಲ್ಲೇ ಅಜಿಂಕ್ಯ ರಹಾನೆ ಕಗಿಸೊ ರಬಾಡಗೆ ವಿಕೆಟ್ ಒಪ್ಪಿಸಿದ್ರು. ಪೂಜಾರ 9 ರನ್ಗೆ ಮಾರ್ಕೊ ಯಾನ್ಸನ್ಗೆ ವಿಕೆಟ್ ಒಪ್ಪಿಸಿದ್ರೆ, ರಹಾನೆ ಕಗಿಸೊ ರಬಾಡ ಬೌಲಿಂಗ್ನಲ್ಲಿ ಬೌನ್ಸ್ ಪರಿ ಅರಿಯದೆ ಕೇವಲ 1ರನ್ಗೆ ವಿಕೆಟ್ ಕೀಪರ್ ಕ್ಯಾಚಿತ್ತರು.