ಒಂದು ಹಂತದಲ್ಲಿ ಬಾಂಗ್ಲಾದೇಶ 69 ರನ್ಗಳಿಗೆ 6 ವಿಕೆಟ್
ಬಾಂಗ್ಲಾದೇಶ ತಂಡದ ಬ್ಯಾಟಿಂಗ್ ವೇಳೆ ಒಂದು ಹಂತದಲ್ಲಿ 69 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡವನ್ನು ಮೆಹಿದಿ ಹಸನ್ ಮಿರಾಜ್ ಅಜೇಯ 100 ರನ್ ಬಾರಿಸಿ ತಂಡದ ಮೊತ್ತವನ್ನು 270ರ ಗಡಿ ದಾಟಿಸಿದರು.
ಈ ವೇಳೆ ಭಾರತದ ಬೌಲಿಂಗ್ ವಿಧಾನವನ್ನು ಟೀಕಿಸಿದ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ, ಭಾರತದ ಯಾವುದೇ ಬೌಲರ್ಗಳು ಬಾಂಗ್ಲಾದೇಶದ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕಲು ಪ್ರಯತ್ನಿಸಲಿಲ್ಲ ಮತ್ತು ಭಾರತದ ಬೌಲಿಂಗ್ ಪ್ರದರ್ಶನವನ್ನು 'ಥರ್ಡ್ ಕ್ಲಾಸ್' ಎಂದು ಜರಿದರು.
ಭಾರತೀಯ ಕ್ರಿಕೆಟ್ ಮುಂದೆ ಎಲ್ಲಿಗೆ ತಲುಪುತ್ತಿದೆ
"ಭಾರತದ ಬೌಲಿಂಗ್ ಮೂರನೇ ದರ್ಜೆಯದ್ದಾಗಿ ಕಂಡುಬಂತು ಮತ್ತು ಬಾಂಗ್ಲಾದೇಶದ ಬೌಲರ್ಗಳು ಅಸಾಧಾರಣ ಬೌಲಿಂಗ್ ಮಾಡಿದರು. ಭಾರತೀಯ ಕ್ರಿಕೆಟ್ ಮುಂದೆ ಎಲ್ಲಿಗೆ ತಲುಪುತ್ತದೆ ಎಂಬುದನ್ನು ಕಾದು ನೋಡಬೇಕು. ಇದೇ ಪರಿಸ್ಥಿತಿ ತವರಿನಲ್ಲಿ ನಡೆಯುವ ವಿಶ್ವಕಪ್ನಲ್ಲಿ ಮುಂದುವರೆದರೆ, ಭಾರತೀಯ ಕ್ರಿಕೆಟ್ಗೆ ದೊಡ್ಡ ನಷ್ಟ," ಎಂದು ಡ್ಯಾನಿಶ್ ಕನೇರಿಯಾ ಆಕ್ರೋಶಗೊಂಡರು.
"ಭಾರತದ ಬೌಲಿಂಗ್ ಪಡೆ ಶಾರ್ಟ್-ಪಿಚ್ ಬೌಲಿಂಗ್ ಮಾಡುತ್ತಿತ್ತು. ಯಾರೂ ಬ್ಯಾಟರ್ ದೇಹ ಅಥವಾ ಯಾರ್ಕರ್ ಅನ್ನು ಪ್ರಯೋಗಿಸಲಿಲ್ಲ. ಮೊಹಮ್ಮದ್ ಸಿರಾಜ್ ಹೆಚ್ಚು ರನ್ ಬಿಟ್ಟುಕೊಟ್ಟರು. ಅವರು ಆಕ್ರಮಣಶೀಲ ಬೌಲಿಂಗ್ ವಿಧಾನ ಹೊಂದಿದ್ದಾರೆ, ಆದರೆ ಅವರ ಬೌಲಿಂಗ್ ಸ್ವಲ್ಪ ದಾರಿತಪ್ಪಿತ್ತು," ಎಂದು ಡ್ಯಾನಿಶ್ ಕನೇರಿಯಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.
ಮತ್ತೆ ಗೆಲುವಿನ ಹಳಿಗೆ ತಂದಿದ್ದ ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್
ಬಾಂಗ್ಲಾದೇಶ ನೀಡಿದ 272 ರನ್ಗಳ ಚೇಸಿಂಗ್ನಲ್ಲಿ ಆರಂಭಿಕ ವಿಕೆಟ್ಗಳನ್ನು ಬೇಗನೆ ಕಳೆದುಕೊಂಡ ನಂತರ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿತು. ನಂತರ ಶ್ರೇಯಸ್ ಅಯ್ಯರ್ (82 ರನ್) ಮತ್ತು ಅಕ್ಷರ್ ಪಟೇಲ್ (56 ರನ್) ಅದ್ಭುತ ಅರ್ಧಶತಕಗಳನ್ನು ಬಾರಿಸುವ ಮೂಲಕ ಭಾರತ ತಂಡವನ್ನು ಮತ್ತೆ ಗೆಲುವಿನ ಹಳಿಗೆ ತಂದರು.
ಆದರೆ ಈ ಇಬ್ಬರು ಬ್ಯಾಟ್ಸ್ಮನ್ಗಳು ಔಟಾದ ನಂತರ, ಭಾರತ ತಂಡವು ಬಾಂಗ್ಲಾದೇಶದಲ್ಲಿ ಸತತ ಎರಡನೇ ಏಕದಿನ ಸರಣಿಯ ಸೋಲಿನ ಸುಳಿಗೆ ಸಿಲುಕಿತು.
ಕೈಬೆರಳಿಗೆ ಗಾಯವಾಗಿದ್ದರೂ 51 ರನ್ ಗಳಿಸಿದ ರೋಹಿತ್ ಶರ್ಮಾ
ಈ ವೇಳೆ ಕೈಬೆರಳಿಗೆ ಗಾಯವಾಗಿದ್ದರೂ ಬ್ಯಾಟ್ ಹಿಡಿದು ಕ್ರೀಸ್ಗೆ ಬಂದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೊನೆಯಲ್ಲಿ ವೀರೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿ ಅಜೇಯ 51 ರನ್ ಗಳಿಸಿದರು. ಅದರೆ ಪಂದ್ಯವನ್ನು ಗೆಲುವಿನ ಗಡಿ ಮುಟ್ಟಿಸಲು ವಿಫಲರಾದರು.
ಬಾಂಗ್ಲಾದೇಶ ಅದ್ಭುತ ಗೆಲುವು ಸಾಧಿಸುವುದರೊಂದಿಗೆ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಏಕದಿನ ಸರಣಿ ವಶಪಡಿಸಿಕೊಂಡಿತು. ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಡಿಸೆಂಬರ್ 10ರಂದು ಚಟ್ಟೋಗ್ರಾಮ್ನಲ್ಲಿ ನಡೆಯಲಿದೆ.