'ನೀವು ನನ್ನ ಕೊಂದರೂ ಸರಿ, ಇಂಗ್ಲೆಂಡ್ ಗೆಲ್ಲಲಿದೆ'
ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಗೆಲ್ಲಲಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ. 'ನೀವು ನನ್ನನ್ನು ಕೊಂದರೂ ಸರಿ, ಇಂಗ್ಲೆಂಡ್ ತಂಡ ಈ ಪಂದ್ಯದಲ್ಲಿ ಜಯ ಸಾಧಿಸಲಿದೆ ಎಂದು ಹೇಳಲು ಇಚ್ಛಿಸುತ್ತೇನೆ. ಈಗಾಗಲೇ ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಮೇಲುಗೈ ಸಾಧಿಸಿದ್ದು ಕೊನೆಯ ದಿನವಾದ ಕಾರಣ ಪಿಚ್ ಹೇಳಿಕೊಳ್ಳುವಷ್ಟು ಗುಣಮಟ್ಟದ್ದಾಗಿರುವುದಿಲ್ಲ ಹಾಗೂ ಚೆಂಡು ಹೆಚ್ಚಾಗಿ ಬೌನ್ಸ್ ಆಗದೆ ಇರುವ ಸಾಧ್ಯತೆ ಹೆಚ್ಚಿದ್ದು ಇಂಗ್ಲೆಂಡ್ ತಂಡ ಭಾರತ ತಂಡ ನೀಡುವ ಗುರಿಯನ್ನು ಸುಲಭವಾಗಿ ತಲುಪಲಿದೆ' ಎಂದು ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ.
ಭಾರತ ಸುಮಾರು 190 ಲೀಡ್ ಕಲೆಹಾಕಬಹುದು
ಸದ್ಯ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡುತ್ತಿರುವ ಟೀಮ್ ಇಂಡಿಯಾ ಪರ ರಿಷಭ್ ಪಂತ್ ಮತ್ತು ಇಶಾಂತ್ ಶರ್ಮಾ ಕೊನೆಯ ದಿನದಾಟವನ್ನು ಆರಂಭಿಸಲಿದ್ದಾರೆ. ಈ ಕುರಿತು ಭವಿಷ್ಯ ನುಡಿದಿರುವ ಆಕಾಶ್ ಚೋಪ್ರಾ ನಾಲ್ಕನೆ ದಿನದಾಟದಂತ್ಯಕ್ಕೆ ಟೀಮ್ ಇಂಡಿಯಾ 154 ರನ್ಗಳ ಮುನ್ನಡೆಯನ್ನು ಕಾಯ್ದುಕೊಂಡಿದೆ, ಐದನೇ ದಿನ ಬ್ಯಾಟಿಂಗ್ ಆರಂಭಿಸಿದ ನಂತರ ಟೀಮ್ ಇಂಡಿಯಾ ಸುಮಾರು 190 ರನ್ಗಳ ಲೀಡ್ ಸಾಧಿಸಿದ ನಂತರ ಆಲ್ ಔಟ್ ಆಗಲಿದೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ಕೊನೆಯ ದಿನ ಬುಮ್ರಾ ಭಾರತಕ್ಕೆ ಆಸರೆಯಾಗಬಹುದು
ಇನ್ನೂ ಮುಂದುವರೆದು ಮಾತನಾಡಿರುವ ಆಕಾಶ್ ಚೋಪ್ರಾ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಕೊನೆಯ ದಿನದಂದು ಭಾರತ ತಂಡದ ಪರ ಜಸ್ ಪ್ರೀತ್ ಬೂಮ್ರಾ ಉತ್ತಮ ಪ್ರದರ್ಶನ ನೀಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೇವಲ ಜಸ್ ಪ್ರೀತ್ ಬುಮ್ರಾ ಮಾತ್ರ ಐದನೇ ದಿನದಂದು ಟೀಮ್ ಇಂಡಿಯಾದ ರಕ್ಷಕನಾಗಿ ಆಟವನ್ನಾಡಬಲ್ಲರು. ಹೀಗಾಗಿ ಕೊನೆಯ ದಿನದಂದು ಜಸ್ ಪ್ರೀತ್ ಬುಮ್ರಾಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕೆಂದು ಆಕಾಶ್ ಚೋಪ್ರಾ ಹೇಳಿದ್ದಾರೆ.