ಭಾರತ vs ಇಂಗ್ಲೆಂಡ್: ಯಾರು ಏನೇ ಅಂದರೂ ಇಂಗ್ಲೆಂಡ್ ಗೆಲ್ಲಲಿದೆ ಎಂದ ಭಾರತದ ಮಾಜಿ ಕ್ರಿಕೆಟಿಗ!

ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಕೊನೆಯ ದಿನಕ್ಕೆ ಟೀಮ್ ಇಂಡಿಯಾ ರಿಷಭ್ ಪಂತ್ ಮತ್ತು ಇಶಾಂತ್ ಶರ್ಮಾ ಜೊತೆ ಪ್ರವೇಶ ಮಾಡಿದ್ದು ನಾಲ್ಕನೆ ದಿನದಾಟದಂತ್ಯಕ್ಕೆ ಭಾರತ 6 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿದೆ. ಟೀಮ್ ಇಂಡಿಯಾದ ಪರ ಸದ್ಯ ರಿಷಬ್ ಪಂತ್ 14 ಮತ್ತು ಇಶಾಂತ್ ಶರ್ಮಾ 4 ರನ್ ಗಳಿಸಿದ್ದು ಕೊನೆಯ ದಿನದಾಟವನ್ನು ಆರಂಭಿಸಲಿದ್ದಾರೆ. ಕೊನೆಯ ದಿನದಾಟ ಆರಂಭವಾಗುವ ಮುನ್ನವೇ ಭಾರತದ ಮಾಜಿ ಕ್ರಿಕೆಟಿಗರೊಬ್ಬರು ಇಂಗ್ಲೆಂಡ್ ತಂಡ ಖಡಾಖಂಡಿತವಾಗಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದ ಟೀಮ್ ಇಂಡಿಯಾ ಮೊದಲನೇ ಇನ್ನಿಂಗ್ಸ್ನಲ್ಲಿ 364 ರನ್ ಕಲೆಹಾಕಿತು. ಅತ್ತ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡ 391 ರನ್ ಗಳಿಸಿ 27 ರನ್ಗಳ ಅಲ್ಪ ಮೊತ್ತದ ಮುನ್ನಡೆಯನ್ನು ಕಾಯ್ದುಕೊಂಡಿತು. ಹೀಗೆ ಮೊದಲನೇ ಇನ್ನಿಂಗ್ಸ್ನಲ್ಲಿ ಪೈಪೋಟಿಯ ಹಣಾಹಣಿಯನ್ನು ನಡೆಸಿದ ಭಾರತ ಮತ್ತು ಇಂಗ್ಲೆಂಡ್ ಎರಡೂ ತಂಡಗಳು ಸಮಬಲ ಸಾಧಿಸಿದವು.
ಮೊದಲ ಇನ್ನಿಂಗ್ಸ್ನಲ್ಲಿ ಮಿಂಚಿದ್ದ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು ಎರಡನೇ ಇನ್ನಿಂಗ್ಸ್ನಲ್ಲಿ ಕಳಪೆ ಪ್ರದರ್ಶನ ನೀಡುವುದರ ಮೂಲಕ ದೊಡ್ಡ ಮೊತ್ತ ಕಲೆಹಾಕಲಾಗದೇ ಪೆವಿಲಿಯನ್ ಸೇರಿಕೊಂಡರು. ಎರಡನೇ ಇನ್ನಿಂಗ್ಸ್ನಲ್ಲಿ ರೋಹಿತ್ ಶರ್ಮ 21 ಮತ್ತು ಕೆಎಲ್ ರಾಹುಲ್ 5 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು, ಇನ್ನು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ 20 ರನ್ ಕಲೆಹಾಕಿ ತಂಡದ ಕಳಪೆ ಪ್ರದರ್ಶನವನ್ನು ಈ ಪಂದ್ಯದಲ್ಲಿಯೂ ಸಹ ಮುಂದುವರಿಸಿದ್ದಾರೆ. ಭಾರತದ ಪರ ಉಪನಾಯಕ ಅಜಿಂಕ್ಯ ರಹಾನೆ 61 ರನ್ ಕಲೆ ಹಾಕುವುದರ ಮೂಲಕ ಜವಾಬ್ದಾರಿಯುತ ಆಟವಾಡಿದರು. ಈಗಾಗಲೇ 6 ವಿಕೆಟ್ ಕಳೆದುಕೊಂಡು ಸಮಸ್ಯೆಯ ಸುಳಿಯಲ್ಲಿರುವ ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್ನಲ್ಲಿ ಎಷ್ಟು ರನ್ ಗಳಿಸಲಿದೆ ಮತ್ತು ಇಂಗ್ಲೆಂಡ್ ತಂಡಕ್ಕೆ ಎಷ್ಟು ರನ್ ಟಾರ್ಗೆಟ್ ನೀಡಲಿದೆ ಎಂಬುದನ್ನು ಕಾದು ನೋಡಬೇಕು.
ಈಗಾಗಲೇ ಈ ಕುರಿತು ಸಾಕಷ್ಟು ಕ್ರೀಡಾಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರು ಮಾತನಾಡಿದ್ದು ಯಾವ ತಂಡ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಕೂಡ ಈ ಪಂದ್ಯದ ಕುರಿತು ಮಾತನಾಡಿದ್ದು ಇಂಗ್ಲೆಂಡ್ ತಂಡ ಈ ಪಂದ್ಯವನ್ನು ಗೆಲ್ಲಲಿದೆ ಎಂದು ಹೇಳಿದ್ದಾರೆ.

'ನೀವು ನನ್ನ ಕೊಂದರೂ ಸರಿ, ಇಂಗ್ಲೆಂಡ್ ಗೆಲ್ಲಲಿದೆ'
ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಗೆಲ್ಲಲಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ. 'ನೀವು ನನ್ನನ್ನು ಕೊಂದರೂ ಸರಿ, ಇಂಗ್ಲೆಂಡ್ ತಂಡ ಈ ಪಂದ್ಯದಲ್ಲಿ ಜಯ ಸಾಧಿಸಲಿದೆ ಎಂದು ಹೇಳಲು ಇಚ್ಛಿಸುತ್ತೇನೆ. ಈಗಾಗಲೇ ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಮೇಲುಗೈ ಸಾಧಿಸಿದ್ದು ಕೊನೆಯ ದಿನವಾದ ಕಾರಣ ಪಿಚ್ ಹೇಳಿಕೊಳ್ಳುವಷ್ಟು ಗುಣಮಟ್ಟದ್ದಾಗಿರುವುದಿಲ್ಲ ಹಾಗೂ ಚೆಂಡು ಹೆಚ್ಚಾಗಿ ಬೌನ್ಸ್ ಆಗದೆ ಇರುವ ಸಾಧ್ಯತೆ ಹೆಚ್ಚಿದ್ದು ಇಂಗ್ಲೆಂಡ್ ತಂಡ ಭಾರತ ತಂಡ ನೀಡುವ ಗುರಿಯನ್ನು ಸುಲಭವಾಗಿ ತಲುಪಲಿದೆ' ಎಂದು ಆಕಾಶ್ ಚೋಪ್ರಾ ಭವಿಷ್ಯ ನುಡಿದಿದ್ದಾರೆ.

ಭಾರತ ಸುಮಾರು 190 ಲೀಡ್ ಕಲೆಹಾಕಬಹುದು
ಸದ್ಯ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡುತ್ತಿರುವ ಟೀಮ್ ಇಂಡಿಯಾ ಪರ ರಿಷಭ್ ಪಂತ್ ಮತ್ತು ಇಶಾಂತ್ ಶರ್ಮಾ ಕೊನೆಯ ದಿನದಾಟವನ್ನು ಆರಂಭಿಸಲಿದ್ದಾರೆ. ಈ ಕುರಿತು ಭವಿಷ್ಯ ನುಡಿದಿರುವ ಆಕಾಶ್ ಚೋಪ್ರಾ ನಾಲ್ಕನೆ ದಿನದಾಟದಂತ್ಯಕ್ಕೆ ಟೀಮ್ ಇಂಡಿಯಾ 154 ರನ್ಗಳ ಮುನ್ನಡೆಯನ್ನು ಕಾಯ್ದುಕೊಂಡಿದೆ, ಐದನೇ ದಿನ ಬ್ಯಾಟಿಂಗ್ ಆರಂಭಿಸಿದ ನಂತರ ಟೀಮ್ ಇಂಡಿಯಾ ಸುಮಾರು 190 ರನ್ಗಳ ಲೀಡ್ ಸಾಧಿಸಿದ ನಂತರ ಆಲ್ ಔಟ್ ಆಗಲಿದೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಕೊನೆಯ ದಿನ ಬುಮ್ರಾ ಭಾರತಕ್ಕೆ ಆಸರೆಯಾಗಬಹುದು
ಇನ್ನೂ ಮುಂದುವರೆದು ಮಾತನಾಡಿರುವ ಆಕಾಶ್ ಚೋಪ್ರಾ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಕೊನೆಯ ದಿನದಂದು ಭಾರತ ತಂಡದ ಪರ ಜಸ್ ಪ್ರೀತ್ ಬೂಮ್ರಾ ಉತ್ತಮ ಪ್ರದರ್ಶನ ನೀಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೇವಲ ಜಸ್ ಪ್ರೀತ್ ಬುಮ್ರಾ ಮಾತ್ರ ಐದನೇ ದಿನದಂದು ಟೀಮ್ ಇಂಡಿಯಾದ ರಕ್ಷಕನಾಗಿ ಆಟವನ್ನಾಡಬಲ್ಲರು. ಹೀಗಾಗಿ ಕೊನೆಯ ದಿನದಂದು ಜಸ್ ಪ್ರೀತ್ ಬುಮ್ರಾಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕೆಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications