IND Vs NZ: ಮಿಚೆಲ್ ಸ್ಯಾಂಟ್ನರ್ ಮಾಡಿದ ಆ ಒಂದು ತಪ್ಪಿನಿಂದ ಸರಣಿ ಗೆದ್ದ ಭಾರತ

ಕ್ರಿಕೆಟ್ನಲ್ಲಿ ಗಳಿಸುವ ಪ್ರತಿಯೊಂದು ರನ್ ಕೂಡ ಅಂತಿಮ ಹಂತದಲ್ಲಿ ಪಂದ್ಯದ ಫಲಿತಾಂಶವನ್ನೇ ಬದಲಾಯಿಸಿಬಿಡುತ್ತದೆ. ಈ ರೀತಿ ಒಂದು ರನ್ ಅಂತರದಲ್ಲಿ ರೋಚಕ ಸೋಲು-ಗೆಲುವು ಕಂಡ ಹಲವು ಪಂದ್ಯಗಳನ್ನು ನಾವು ನೋಡಿದ್ದೇವೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎಷ್ಟು ಮುಖ್ಯವೋ ಅತ್ಯುತ್ತಮ ಫೀಲ್ಡಿಂಗ್ ಕೂಡ ಅಷ್ಟೇ ಮುಖ್ಯವಾಗುತ್ತದೆ.
ಪ್ರತಿಯೊಂದು ರನ್ ತಡೆದರು ಅದು ತಂಡಕ್ಕೆ ಒಂದು ರನ್ ಗಳಿಸಿದಂತೆ ಎನ್ನುವ ಮಾತಿದೆ. ಫೀಲ್ಡಿಂಗ್ನಲ್ಲಿ ಮಾಡುವ ಒಂದು ಸಣ್ಣ ತಪ್ಪು ಕೂಡ ಎಷ್ಟು ದುಬಾರಿಯಾಗುತ್ತದೆ ಎನ್ನುವುದಕ್ಕೆ ಭಾರತ ನ್ಯೂಜಿಲೆಂಡ್ ನಡುವಿನ ಸರಣಿಯ 3ನೇ ಟಿ20 ಪಂದ್ಯ ಸಾಕ್ಷಿಯಾಗಿದೆ.
ಭಾರತ-ನ್ಯೂಜಿಲೆಂಡ್ ನಡುವಿ ಟಿ20 ಸರಣಿಯ 3ನೇ ಪಂದ್ಯ ಟೈನಲ್ಲಿ ಅಂತ್ಯವಾಗುವ ಮೂಲಕ ಭಾರತ ಸರಣಿಯನ್ನು 1-0 ಅಂತರದಲ್ಲಿ ಗೆದ್ದು ಸಂಭ್ರಮಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 19.4 ಓವರ್ ಗಳಲ್ಲಿ 160 ಗಳಿಗೆ ಆಲೌಟ್ ಆಯಿತು.
ಈ ಮೊತ್ತವನ್ನು ಬೆನ್ನತ್ತಿದ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿತು. ರಿಷಬ್ ಪಂತ್, ಇಶಾನ್ ಕಿಶಾನ್ ಮತ್ತೆ ವೈಫಲ್ಯ ಅನುಭವಿಸಿದರು. ಸೂರ್ಯಕುಮಾರ್ ಯಾದವ್ ಕೂಡ 13 ರನ್ ಗಳಿಸಿ ಔಟಾದರು.

ಬಿರುಸಿನ ಆಟವಾಡಿದ ಹಾರ್ದಿಕ್ ಪಾಂಡ್ಯ
ಆರಂಭಿಕರು ವಿಫಲರಾದ ನಂತರ, ಸೂರ್ಯಕುಮಾರ್ ಯಾದವ್ ಕೂಡ ಕಡಿಮೆ ಮೊತ್ತಕ್ಕೆ ನಿರ್ಗಮಿಸಿದರು. ಶ್ರೇಯಸ್ ಅಯ್ಯರ್ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ನಾಯಕ ಹಾರ್ದಿಕ್ ಪಾಂಡ್ಯ ಮಾತ್ರ ಬಿರುಸಿನ ರನ್ ಗಳಿಸಿದರು. 18 ಎಸೆತಗಳಲ್ಲಿ 3 ಬೌಂಡರಿ 1 ಸಿಕ್ಸರ್ ಸಹಿತ ಅಜೇಯ 30 ರನ್ ಗಳಿಸಿದರು. ದೀಪಕ್ ಹೂಡಾ 9 ಎಸೆತಗಳಲ್ಲಿ 9 ರನ್ ಗಳಿಸಿದರು. ಭಾರತ 9 ಓವರ್ ಗಳಲ್ಲಿ ವಿಕೆಟ್ ಕಳೆದುಕೊಂಡು 75 ರನ್ ಗಳಿಸಿದ್ದಾಗ ಮಳೆ ಬಂದ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.
ಮಳೆ ಹೆಚ್ಚಾದ ಕಾರಣ ಡಿಎಲ್ಎಸ್ ನಿಯಮದಂತೆ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಾಯಿತು. ನಿಯಮದಂತೆ ಭಾರತ ಗೆಲುವಿಗಾಗಿ 76 ರನ್ ಗಳಿಸಿರಬೇಕಿತ್ತು, ಆದರೆ ಭಾರತ 75 ರನ್ ಗಳಿಸಿದ್ದರಿಂದ ಪಂದ್ಯದ ಫಲಿತಾಂಶ ಟೈ ಆಯಿತು.

ಸ್ಯಾಂಟ್ನರ್ ಮಿಸ್ಫೀಲ್ಡ್ನಿಂದ ಸರಣಿ ಸೋಲು
ಮಳೆಯಿಂದಾಗಿ ಪಂದ್ಯ ನಿಂತಾಗ ದೀಪಕ್ ಹೂಡಾ ಮತ್ತು ಪಾಂಡ್ಯ ಬ್ಯಾಟಿಂಗ್ ಮಾಡುತ್ತಿದ್ದರು. ಲೆಗ್ ಸ್ಪಿನ್ನರ್ ಇಶ್ ಸೋಧಿ ಮಾಡಿದ 9ನೇ ಓವರ್ ನ ಕೊನೆಯ ಎಸೆತದಲ್ಲಿ ದೀಪಕ್ ಹೂಡಾ ಬ್ಯಾಕ್ವರ್ಡ್ ಕಡೆ ಬಾಲ್ ಹೊಡೆದರು, ಬ್ಯಾಕ್ವರ್ಡ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಮಿಚೆಲ್ ಸ್ಯಾಂಟ್ನರ್ ಮಿಸ್ ಫೀಲ್ಡ್ ಮಾಡಿದರು. ಇದರ ಲಾಭ ಪಡೆದ ದೀಪಕ್ ಹೂಡಾ ಮತ್ತು ಪಾಂಡ್ಯ ಒಂದು ರನ್ ಗಳಿಸಿದರು.
ಒಂದು ವೇಳೆ ಸ್ಯಾಂಟ್ನರ್ ಸರಿಯಾಗಿ ಫೀಲ್ಡಿಂಗ್ ಮಾಡಿದ್ದರೆ ದೀಪಕ್ ಹೂಡಾ ಮತ್ತು ಪಾಂಡ್ಯ ರನ್ ಗಳಿಸುವ ಪ್ರಯತ್ನ ಮಾಡುತ್ತಿರಲಿಲ್ಲ. ತಂಡದ ಮೊತ್ತ 74 ಆಗಿದ್ದರೂ ನ್ಯೂಜಿಲೆಂಡ್ ಜಯ ಸಾಧಿಸುತ್ತಿತ್ತು. ಆದರೆ ಆ ಒಂದು ರನ್ ಪಂದ್ಯದ ಫಲಿತಾಂಶವನ್ನು ಬದಲಾಯಿಸಿತು. ಭಾರತ ಸೋತಿದ್ದರೆ ಸರಣಿ 1-1ರಲ್ಲಿ ಸಮಬಲ ಸಾಧಿಸಿದಂತಾಗುತ್ತಿತ್ತು, ಆದರೆ ಪಂದ್ಯ ಟೈ ಆಗಿದ್ದರಿಂದ ಭಾರತ ಸರಣಿ ಗೆಲ್ಲಲು ಸಾಧ್ಯವಾಯಿತು.

ಮಿಚೆಲ್ ಸ್ಯಾಂಟ್ನರ್ ಪ್ರತಿಕ್ರಿಯೆ
ಪಂದ್ಯ ಮುಗಿದ ಬಳಿಕ ತಮ್ಮ ಮಿಸ್ಫೀಲ್ಡ್ ಬಗ್ಗೆ ಮಿಚೆಲ್ ಸ್ಯಾಂಟ್ನರ್ ಪ್ರತಿಕ್ರಿಯೆ ನೀಡಿದರು. "ಆ ಒಂದು ರನ್ ನಮಗೆ ಸಾಕಷ್ಟು ದುಬಾರಿಯಾಯಿತು. ಆದರೆ, ನಮಗೆ ಡಿಎಲ್ಎಸ್ ನಿಯಮದಂತೆ ಯಾವ ಸ್ಕೋರ್ ಎನ್ನುವ ಮಾಹಿತಿ ಇರಲಿಲ್ಲ. ನಮಗೆ ಆ ಬಗ್ಗೆ ಸ್ಪಷ್ಟತೆ ಇದ್ದರೆ ಇನ್ನೂ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದೆವು" ಎಂದು ಹೇಳಿದ್ದಾರೆ.
ನ್ಯೂಜಿಲೆಂಡ್ 16ನೇ ಓವರ್ನಲ್ಲಿ 2 ವಿಕೆಟ್ ಕಳೆದುಕೊಂಡು 130 ರನ್ ಗಳಿಸಿತ್ತು, ಆದರೆ ನಂತರ 3.4 ಓವರ್ ಗಳಲ್ಲಿ 30 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ನಾವು ಆ ಹಂತದಲ್ಲಿ 180 ರನ್ ಗಳಿಸಬೇಕಿತ್ತು ಎಂದು ಸ್ಯಾಂಟ್ನರ್ ಅಭಿಪ್ರಾಯಪಟ್ಟಿದ್ದಾರೆ.
ಟಿ20 ಸರಣಿಯನ್ನು 1-0 ಅಂತರದಲ್ಲಿ ವಶ ಪಡಿಸಿಕೊಂಡ ನಂತರ ಭಾರತ ಏಕದಿನ ಸರಣಿಗಾಗಿ ಸಜ್ಜಾಗುತ್ತಿದೆ. ನವೆಂಬರ್ 25ರಂದು ಸರಣಿಯ ಮೊದಲನೇ ಪಂದ್ಯ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications