ಭಾರತದ ವಿರುದ್ಧದ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ಶ್ರೀಲಂಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದೆ.
ಈ ಪಂದ್ಯದ ಮೂಲಕ 2023ರ ಏಕದಿನ ವಿಶ್ವಕಪ್ಗೆ ಭಾರತ ತಂಡದ ಅಧಿಕೃತ ತಯಾರಿ ಆರಂಭವಾಗಲಿದೆ. ಅನುಭವಿಗಳು ಮತ್ತು ಕಿರಿಯ ಆಟಗಾರರನ್ನು ಒಳಗೊಂಡಿರುವ ಭಾರತ ಸಮತೋಲಿತ ತಂಡದಂತೆ ಕಾಣುತ್ತಿದೆ.
ಬರ್ಸಾಪುರ ಕ್ರೀಡಾಂಗಣ ಬ್ಯಾಟರ್ ಗಳಿಗೆ ಹೆಚ್ಚಿನ ನೆರವು ನೀಡುತ್ತದೆ. ಚೆಂಡು ಸುಲಭವಾಗಿ ಬ್ಯಾಟಿಗೆ ಬರುವ ಕಾರಣ ಸುಲಭವಾಗಿ ರನ್ ಗಳಿಸಬಹುದಾಗಿದೆ. ಸಂಜೆಯಾದ ನಂತರ ಇಬ್ಬನಿ ಬೀಳುವುದರಿಂದ ಬೌಲಿಂಗ್ ಮಾಡುವ ತಂಡಕ್ಕೆ ಕಷ್ಟವಾಗಲಿದ್ದು, ಮೊದಲು ಬ್ಯಾಟ್ ಮಾಡುವ ತಂಡಕ್ಕಿಂತ ಚೇಸಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಲಾಭವಾಗಲಿದೆ.
ಟಾಸ್ ಗೆದ್ದ ಬಳಿಕ ಮಾತನಾಡಿದ ಶ್ರೀಲಂಕಾ ತಂಡದ ನಾಯಕ ದಸುನ್ ಶನಕ, ಸಂಜೆ ವೇಳೆಗೆ ಇಬ್ಬನಿ ಬೀಳುವ ಕಾರಣದಿಂದ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾಗಿ ತಿಳಿಸಿದ್ದರು.
SA T20: ದಕ್ಷಿಣ ಆಫ್ರಿಕಾ ಮಿನಿ ಐಪಿಎಲ್ ಅದ್ಧೂರಿ ಆರಂಭಕ್ಕೆ ಕ್ಷಣಗಣನೆ, ತಂಡಗಳು, ಪಂದ್ಯದ ಸಮಯ, ನೇರಪ್ರಸಾರ ವಿವರ
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಾತನಾಡಿ, "ಏಕದಿನ ವಿಶ್ವಕಪ್ಗಾಗಿ ಸಿದ್ಧತೆ ಆರಂಭವಾಗಿರುವುದರಿಂದ ಯಾವುದೇ ಪರಿಸ್ಥಿತಿಯಲ್ಲಿ ಬೌಲಿಂಗ್ ಮಾಡಲು ಸಿದ್ಧವಾಗಿರಬೇಕು, ಇಬ್ಬನಿ ಇದ್ದಾಗ ಬೌಲಿಂಗ್ ಮಾಡುವುದು ಸವಾಲಿನ ಕೆಲಸ, ನಾವು ಅದಕ್ಕಾಗಿ ತಯಾರಾಗಬೇಕು. ಇದು ನಮಗೆ ಉತ್ತಮ ಅವಕಾಶ" ಎಂದು ಹೇಳಿದರು.
ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಹೊರಕ್ಕೆ
ಭಾರತ ತಂಡದ ಆಡುವ ಬಳಗದಲ್ಲಿ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ಗೆ ಅವಕಾಶ ನೀಡಿಲ್ಲ. ಟಿ20 ಸರಣಿಯಲ್ಲಿ ಶತಕ ಬಾರಿಸಿರುವ ಸೂರ್ಯಕುಮಾರ್ ಯಾದವ್ರನ್ನು ಬಿಟ್ಟು ಶ್ರೇಯಸ್ ಅಯ್ಯರ್ ಗೆ ಆಡುವ ಬಳಗದಲ್ಲಿ ಸ್ಥಾನ ನೀಡಲಾಗಿದೆ.
ವೇಗಿ ಉಮ್ರಾನ್ ಮಲಿಕ್ ಆಡುವ ಬಳಗದಲ್ಲಿ ಅವಕಾಶ ಪಡೆಯುವಲ್ಲಿ ಸಫಲರಾಗಿದ್ದಾರೆ. ಉಮ್ರಾನ್ ಮಲಿಕ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಮತ್ತು ಹಾರ್ದಿಕ್ ಪಾಂಡ್ಯ ವೇಗಿಗಳಾಗಿದ್ದರೆ, ಚಹಾಲ್ ಮತ್ತು ಅಕ್ಷರ್ ಪಟೇಲ್ ಸ್ಪಿನ್ ವಿಭಾಗದಲ್ಲಿ ಆಡಲಿದ್ದಾರೆ.
ಉಭಯ ತಂಡಗಳ ಆಡುವ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಉಮ್ರಾನ್ ಮಲಿಕ್, ಯುಜುವೇಂದ್ರ ಚಹಾಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ಶ್ರೀಲಂಕಾ: ಪಾತುಮ್ ನಿಸಾಂಕ, ಕುಶಾಲ್ ಮೆಂಡಿಸ್, ಆವಿಷ್ಕಾ ಫರ್ನಾಂಡೊ, ಧನಂಜಯ ಡಿಸಿಲ್ವ, ಚರಿತ್ ಅಸಲಂಕಾ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಮಿಕಾ ಕರುಣರತ್ನೆ, ದುನಿತ್ ವೆಲ್ಲಾಲಗೆ, ಕಸುನ್ ರಜಿತ, ದಿಲ್ಷಾನ್ ಮಧುಶಂಕ.