ಕೊಹ್ಲಿ-ಆಂಡರ್ಸನ್ ಕದನ
ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ ಈ ಸರಣಿಯನ್ನು ವಿರಾಟ್ ಕೊಹ್ಲಿ ಮತ್ತು ಇಂಗ್ಲೆಂಡ್ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ನಡುವಣ ಕದನ ಎಂದೇ ಪರಿಗಣಿಸಲಾಗಿತ್ತು.
ಅಲ್ಲದೆ ಆಂಡರ್ಸನ್, ಕೊಹ್ಲಿಯನ್ನು ಕೆಣಕುವ ಮಾತುಗಳನ್ನಾಡಿದ್ದರು. ಇದಕ್ಕೆ ಕೊಹ್ಲಿ ಕೊನೆಗೂ ತಮ್ಮ ಬ್ಯಾಟ್ನಿಂದಲೇ ಉತ್ತರ ನೀಡಿದ್ದಾರೆ.
ಗುರುವಾರ ಭಾರತದ ಮೊದಲ ಇನ್ನಿಂಗ್ಸ್ನಲ್ಲಿ ಕೊಹ್ಲಿ, ಆಂಡರ್ಸನ್ ಮುಖಾಮುಖಿಯಾದ ಮೊದಲ ಎಸೆತವೇ ಈ ಕದನದ ತೀವ್ರತೆಗೆ ಸಾಕ್ಷಿ. ಆಗ ಇಡೀ ಪ್ರೇಕ್ಷಕ ಸಮೂಹ ಹೋ ಎಂಬ ಸದ್ದು ಮಾಡಿತ್ತು.
|
ಪರದಾಡಿದ್ದ ಕೊಹ್ಲಿ
2014ರಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ಕೊಹ್ಲಿ, ಇಂಗ್ಲೆಂಡ್ನ ಸ್ಟುವರ್ಟ್ ಬ್ರಾಡ್ ಮತ್ತು ಆಂಡರ್ಸನ್ ಬೌಲಿಂಗ್ ದಾಳಿಗೆ ಬೆದರಿದ್ದರು. ರನ್ ಗಳಿಸಲು ಪರದಾಡಿದ್ದರು.
ಆದರೆ, ಈ ಪ್ರವಾಸದಲ್ಲಿ ಕೊಹ್ಲಿ ಆಟ ಬೇರೆಯದೇ ಆಗಿತ್ತು. ಸ್ಟುವರ್ಟ್ ಬ್ರಾಡ್ ಬೌಲಿಂಗ್ ದಾಳಿಯನ್ನು ಕೊಹ್ಲಿ ಯಾವುದೇ ಅಂಜಿಕೆಯಿಲ್ಲದೆ ಎದುರಿಸಿದರೆ, ಆಂಡರ್ಸನ್ ಎಸೆತಗಳನ್ನು ಎಚ್ಚರಿಕೆಯಿಂದ ಆಡಿದರು.
2014ರ ಪ್ರವಾಸದ ವೇಳೆ 10 ಇನ್ನಿಂಗ್ಸ್ಗಳಲ್ಲಿ ಕೊಹ್ಲಿ ಗಳಿಸಿದ್ದು ಒಟ್ಟು 134 ರನ್ಗಳನ್ನು ಮಾತ್ರ. ಈಗ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿಯೇ 149 ರನ್ ಸಿಡಿಸಿ ಹಲವು ವರ್ಷಗಳ ಸೇಡನ್ನು ತೀರಿಸಿಕೊಂಡಿದ್ದಾರೆ.
ಯಾರೂ ಗೆಲ್ಲಲಿಲ್ಲ, ಸೋಲಲಿಲ್ಲ
ಈ ಕದನದಲ್ಲಿ ಕೊಹ್ಲಿ ಮತ್ತು ಆಂಡರ್ಸನ್ ಇಬ್ಬರೂ ಗೆಲ್ಲಲಿಲ್ಲ, ಹಾಗೆಯೇ ಇಬ್ಬರೂ ಸೋಲಲಿಲ್ಲ ಕೂಡ. ಆಂಡರ್ಸನ್ ಎಸೆತಗಳಲ್ಲಿ ಕೆಲವೊಂದು ಬ್ಯಾಟ್ನ ಅಂಚಿಗೆ ಸವರಿಗೆ ಸ್ಲಿಪ್ನತ್ತ ಚಿಮ್ಮಿದರೂ, ಅವು ಕ್ಯಾಚ್ ಆಗಿ ಪರಿಣಮಿಸಿರಲಿಲ್ಲ. ಹಾಗೆಯೇ ಕೆಲವೊಂದು ಎಲ್ಬಿಡಬ್ಲ್ಯೂ ಸಾಧ್ಯತೆಗಳಿಂದಲೂ ಕೊಹ್ಲಿ ಬಚಾವಾಗಿದ್ದರು.
ಶತಕದ ಬಳಿಕ ಬೇರೆ ಬೌಲರ್ಗಳ ಮೇಲೆ ಆಕ್ರಮಣಕಾರಿ ಆಟ ಪ್ರದರ್ಶಿಸಿದರೂ, ಆಂಡರ್ಸನ್ ಎಸೆತಗಳನ್ನು ಕೊಹ್ಲಿ ಎಚ್ಚರಿಕೆಯಿಂದ ಆಡಿದರು. ಹೀಗಾಗಿ ಆಂಡರ್ಸನ್ ಬೌಲಿಂಗ್ನಲ್ಲಿ ಅವರಿಗೆ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಆಂಡರ್ಸನ್ ಕೂಡ ಕರಾರುವಕ್ಕಾದ ದಾಳಿ ನಡೆಸಿದರು. ಎಷ್ಟೇ ಪ್ರಯತ್ನ ಹಾಕಿದರೂ ಅವರಿಗೆ ಕೊಹ್ಲಿ ವಿಕೆಟ್ ತೆಗೆಯಲು ಸಾಧ್ಯವಾಗಲಿಲ್ಲ.
|
ಪ್ರೇಕ್ಷಕರಿಗೆ ಸಿಕ್ಕ ಅಪ್ಪಟ ಕ್ರಿಕೆಟ್
ಕ್ರಿಕೆಟ್ ಅಭಿಮಾನಿಗಳಿಗೆ ಮಾತ್ರ ಅಪ್ಪಟ ಮನರಂಜನೆಯ ರಸಾಸ್ವಾದ ಸಿಕ್ಕಿತು. ಆಂಡರ್ಸನ್ ಮತ್ತು ಇತರೆ ವೇಗದ ಬೌಲರ್ಗಳ ಸ್ವಿಂಗ್, ಯಾರ್ಕರ್ಗಳು, ಕೊಹ್ಲಿಯ ತಾಳ್ಮೆಯ ಡಿಫೆನ್ಸ್ಗಳ ನಡುವೆ ಆಗಾಗ ಚೆಂಡನ್ನು ಬೌಂಡರಿ ಗೆರೆ ದಾಟಿಸುತ್ತಿದ್ದ ಹೊಡೆತಗಳು ಪ್ರೇಕ್ಷಕರಿಗೆ ಖುಷಿ ನೀಡಿದವು.
ವಿರಾಟ್ ಕೊಹ್ಲಿ ಶತಕವನ್ನು ಟೆಸ್ಟ್ ಕ್ರಿಕೆಟ್ನ ಅತ್ಯುತ್ತಮ ಶತಕಗಳಲ್ಲಿ ಒಂದು ಎಂದು ಕ್ರಿಕೆಟ್ ಪ್ರೇಮಿಗಳು ಕೊಂಡಾಡಿದ್ದಾರೆ. ಒತ್ತಡದ ಸಂದರ್ಭದಲ್ಲಿ ಕೊನೆಯ ಎರಡು ವಿಕೆಟ್ಗಳು ಮಾತ್ರ ಇರುವಾಗ ಕೊಹ್ಲಿ ಆಡಿದ ಪರಿಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.
|
ಎರಡು ಜೀವದಾನದ ಕೊಡುಗೆ
ಆದರೆ, ಈ ಶತಕಕ್ಕೆ ಎರಡು ಜೀವದಾನಗಳ ವರವೂ ಸಿಕ್ಕಿತು ಎನ್ನುವುದನ್ನು ಮರೆಯುವಂತಿಲ್ಲ. 21 ಮತ್ತು 51 ರನ್ ಗಳಿಸಿದ್ದಾಗ ಕೊಹ್ಲಿ ಸ್ಲಿಪ್ಗೆ ನೀಡಿದ್ದ ಎರಡು ಸುಲಭದ ಕ್ಯಾಚ್ಗಳನ್ನು ಡವಿಡ್ ಮಲನ್ ಕೈ ಚೆಲ್ಲಿದರು. ಈ ಕ್ಯಾಚ್ಗಳನ್ನು ಹಿಡಿದಿದ್ದರೆ ಭಾರತ ಇನ್ನೂರರ ಗಡಿಯನ್ನೂ ಮುಟ್ಟುವುದು ಕಷ್ಟವಾಗುತ್ತಿತ್ತು. ಕೊಹ್ಲಿ ಶತಕದ ಕನಸು ಮತ್ತೆ ಕಮರುತ್ತಿತ್ತು.
ಕೈಚೆಲ್ಲಿದ ಕ್ಯಾಚ್ಗಳು ಇಂಗ್ಲೆಂಡ್ಗೆ ದುಬಾರಿಯಾದವು. ಭಾರಿ ಅಂತರದ ಇನ್ನಿಂಗ್ಸ್ ಮುನ್ನಡೆ ನಿರೀಕ್ಷಿಸಿದ್ದ ಇಂಗ್ಲೆಂಡ್ಗೆ ಹಿನ್ನಡೆಯುಂಟಾಯಿತು. ಮಿಗಿಲಾಗಿ ಅದರ ನೆಲದಲ್ಲಿ ಕೊಹ್ಲಿಯ ಪರದಾಟ ಅಂತ್ಯಗೊಂಡಂತಾಯಿತು.
|
ಮುಂದಿದೆ ಸವಾಲು
ಇದು ಅಂತ್ಯವಲ್ಲ. ಕೊಹ್ಲಿಗೆ ನಿಜವಾದ ಅಗ್ನಿಪರೀಕ್ಷೆ ಈಗ ಆರಂಭವಾಗಿದೆ. ನಾಯಕತ್ವದ ಹೊಣೆಯ ಜತೆಗೆ ಬ್ಯಾಟಿಂಗ್ಗೆ ಆಧಾರವಾಗಿ ನಿಲ್ಲಲು ಅವರ ಮುಂದೆ ದೊಡ್ಡ ಸವಾಲಿದೆ. ಮುಖ್ಯವಾಗಿ ಎರಡನೆಯ ಇನ್ನಿಂಗ್ಸ್ನಲ್ಲಿ ಅವರ ಮೇಲಿನ ಹೊಣೆಗಾರಿಕೆ ದುಪ್ಪಟ್ಟಾಗಿದೆ.
ಐದು ಟೆಸ್ಟ್ಗಳ ಸರಣಿ ಇದಾಗಿದ್ದು, ಕೊಹ್ಲಿ ಇವುಗಳಲ್ಲಿಯೂ ಉತ್ತಮ ಆಟ ಪ್ರದರ್ಶಿಸಿದರೆ ಮಾತ್ರ ಜಗತ್ತಿನ ಶ್ರೇಷ್ಠ ಬ್ಯಾಟ್ಸ್ಮನ್ ಎಂಬ ಗೌರವವನ್ನು ಉಳಿಸಿಕೊಳ್ಳಲು ಸಾಧ್ಯ. ಈ ಸರಣಿಯನ್ನು ಆಶಸ್ ಸರಣಿಯಷ್ಟೇ ಗಂಭೀರ ಕದನ ಎಂದು ಉಳಿದ ದೇಶಗಳು ಸಹ ಕುತೂಹಲದಿಂದ ನೋಡುತ್ತಿವೆ. ಈ ಕುತೂಹಲ ಹೆಚ್ಚಾಗಲು ಕಾರಣ ಕೊಹ್ಲಿ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.
|
ಕೊಹ್ಲಿ ಹೇಳಿದ್ದು ಸುಳ್ಳು!
ಇದರ ನಡುವೆಯೇ ಆಂಡರ್ಸನ್ ಹೇಳಿದ ಒಂದು ಮಾತು ಕೂಡ ಸತ್ಯವಾಗಿದೆ. 'ನಾನು ಹೇಗೆ ಆಡುತ್ತೇನೆ ಎನ್ನುವುದು ತಂಡಕ್ಕೆ ಮುಖ್ಯವಾಗುವುದಿಲ್ಲ. ತಂಡದ ಗೆಲುವಷ್ಟೇ ಮುಖ್ಯ' ಎಂಬ ಕೊಹ್ಲಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಆಂಡರ್ಸನ್, 'ಕೊಹ್ಲಿ ಸುಳ್ಳು ಹೇಳುತ್ತಿದ್ದಾರೆ' ಎಂದು ಹೇಳಿದ್ದರು. ಕೊಹ್ಲಿ ಆಟವೂ ಭಾರತ ತಂಡಕ್ಕೆ ಬಹುಮುಖ್ಯವಾಗಲಿದೆ ಎನ್ನುವುದು ಆಂಡರ್ಸನ್ ಅಭಿಪ್ರಾಯವಾಗಿತ್ತು.
ಗುರುವಾರದ ಆಟದಲ್ಲಿ ಭಾರತದ ಇತರೆ ಬ್ಯಾಟ್ಸ್ಮನ್ಗಳು ಆಡಿದ ಪರಿ ನೋಡಿದಾಗ ಆಂಡರ್ಸನ್ ಹೇಳಿದ್ದು ನಿಜವೆನಿಸಿದೆ.
ಇಲ್ಲಿ ಟೆಸ್ಟ್ ಕ್ರಿಕೆಟ್ನ ನಿಜವಾದ ಬ್ಯಾಟ್ಸ್ಮನ್ಗಳಂತೆ ತಾಳ್ಮೆ, ರಕ್ಷಣಾತ್ಮಕ ಆಟವನ್ನು ಪ್ರಬುದ್ಧವಾಗಿ ನಿಭಾಯಿಸಿದ್ದು ತಂಡದ ಕೊನೆಯ ಇಬ್ಬರು ಬ್ಯಾಟ್ಸ್ಮನ್ಗಳಾದ ಇಶಾಂತ್ ಶರ್ಮಾ ಮತ್ತು ಉಮೇಶ್ ಯಾದವ್ ಅವರೇ ಹೊರತು, ಟಾಪ್ ಆರ್ಡರ್ನ ತಾರಾ ಬ್ಯಾಟ್ಸ್ಮನ್ಗಳಲ್ಲ. ಕೊಹ್ಲಿ ಮೇಲೆ ಭಾರತ ತಂಡ ಹೆಚ್ಚು ಅವಲಂಬಿತವಾಗಿದೆ ಎನ್ನುವುದನ್ನು ಮೊದಲ ಇನ್ನಿಂಗ್ಸ್ ಮತ್ತೊಮ್ಮೆ ಸಾಬೀತುಪಡಿಸಿದೆ.