
ಕೇಪ್ ಟೌನ್, ಜನವರಿ 08: ದಕ್ಷಿಣ ಆಫ್ರಿಕಾ-ಭಾರತ ನಡುವೆ ಕೇಪ್ಟೌನ್ನಲ್ಲಿ ನಡೆಯುತ್ತಿರುವ ನೆಲ್ಸನ್ ಮಂಡೇಲಾ-ಮಹಾತ್ಮಾ ಗಾಂಧಿ ಕ್ರಿಕೆಟ್ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಭಾರತ ಗೆಲ್ಲಲು 208 ರನ್ಗಳ ಗುರಿ ಬೆನ್ನಟ್ಟಿದೆ.
ಟೆಸ್ಟ್ನ ನಾಲ್ಕನೇ ದಿನ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸಿದ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಕೇವಲ 140 ರನ್ಗಳಿಗೆ ಆಲ್ಔಟ್ ಮಾಡಿದೆ. ಮೊದಲ ಇನ್ನಿಂಗ್ಸ್ನಲ್ಲಿ 77 ರನ್ಗಳ ಹಿನ್ನಡೆ ಅನುಭವಿಸಿದ್ದ ಭಾರತ ತಂಡ ಈಗ ಗೆಲ್ಲಲು 208 ರನ್ ಗಳಿಸಬೇಕಿದೆ. ಪಂದ್ಯದ ಇನ್ನೂ ಒಂದು ದಿನದ ಆಟ ಬಾಕಿ ಇದ್ದು ಟೆಸ್ಟ್ ಡ್ರಾ ಆಗದೆ ಖಚಿತವಾಗಿ ಫಲಿತಾಂಶ ಹೊರಹೊಮ್ಮುವ ಸಾಧ್ಯತೆ ಅತಿ ಹೆಚ್ಚಿದೆ.
ವೇಗದ ಬೌಲರ್ಗಳಿಗೆ ನೆರವು ನೀಡುವ ಪಿಚ್ನಲ್ಲಿ ಕರಾರುವಕ್ಕಾಗಿ ಬೌಲಿಂಗ್ ದಾಳಿ ನಡೆಸಿದ ಭಾರತದ ಬೌಲರ್ಗಳು ದಕ್ಷಿಣ ಆಫ್ರಿಕಾ ದಾಂಡಿಗರನ್ನು ಕಾಡಿದರು. ವೇಗಿಗಳಾದ ಬುಮ್ರಾ, ಮೊಹಮ್ಮದ್ ಶಮಿ ತಲಾ 3 ವಿಕೆಟ್ ಪಡೆದರೆ, ಭುವನೇಶ್ವರ್ ಮತ್ತು ಹಾರ್ದಿಕ್ ಪಾಂಡ್ಯಾ ತಲಾ 2 ವಿಕೆಟ್ ಪಡೆದು ಗಮನ ಸೆಳೆದರು. ಒಂದೇ ಓವರ್ ಬೌಲಿಂಗ್ ಮಾಡಿದ ಸ್ಪಿನ್ನರ್ ಅಶ್ವಿನ್ಗೆ ಯಾವುದೇ ವಿಕೆಟ್ ದೊರಕಿಲ್ಲ.
ದಕ್ಷಿಣ ಆಫ್ರಿಕಾ ಪರ ಓಪನರ್ಗಳಾದ ಮಾರ್ಕಮ್ (35) ಮತ್ತು ಎಲ್ಗರ್ (25) ಉತ್ತಮ ಆರಂಭ ಒದಗಿಸುವ ಮುನ್ಸೂಚನೆ ನೀಡಿದರಾದರೂ ಸ್ಕ್ರೀಸ್ಗೆ ಅಂಟಿಕೊಳ್ಳಲು ವಿಫಲರಾದರು. ಅವರ ನಂತರ ಬಂದ ಎಲ್ಲಾ ಬ್ಯಾಟ್ಸ್ಮನ್ಗಳು ಕನಿಷ್ಠ ಎರಡಂಕೆಯನ್ನೂ ದಾಟಲಿಲ್ಲ. ಭಾರತೀಯ ಬೌಲರ್ಗಳಿಗೆ ಅಲ್ಪ ಪ್ರತಿರೋಧ ತೋರಿದ ಎಬಿ ಡಿವಿಲಿಯರ್ಸ್ (35) ಉತ್ತಮ ಜೊತೆಗಾರರು ಸಿಗದೇ ಕೊನೆಯವರಾಗಿ ಔಟಾಗಿ ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ಗೆ ಇತಿಶ್ರೀ ಹಾಡಿದರು.
ಬ್ಯಾಟಿಂಗ್ ಪ್ರಾರಂಭ ಮಾಡಿರುವ ಭಾರತೀಯ ತಂಡ 30 ರನ್ ಆಗುವಷ್ಟರಲ್ಲಿ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಅವರ ವಿಕೆಟ್ ಕಳೆದುಕೊಂಡಿದೆ. ಮೊದಲ ಇನ್ನಿಂಗ್ಸ್ನಲ್ಲಿ ಹಾರ್ದಿಕ್ ಪಾಂಡ್ಯಾ ಹೊರತು ಪಡಿಸಿ ಮತ್ತೆಲ್ಲಾ ಬ್ಯಾಟ್ಸ್ಮನ್ಗಳು ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದು, ಎರಡನೇ ಇನ್ನಿಂಗ್ಸ್ನಲ್ಲಿಯಾದರೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಗೆಲುವು ಸಾಧಿಸಿ ಮೂರು ಪಂದ್ಯದ ಟೆಸ್ಟ್ ಸರಣಿಯನ್ನು ಶುಭಾರಂಬ ಮಾಡಲೆಂಬುದು ಕ್ರಿಕೆಟ್ ಪ್ರೇಮಿಗಳ ಹಾರೈಕೆ.