1. ಮನೀಶ್ ಪಾಂಡೆ (ಬ್ಯಾಟ್ಸ್ಮನ್)
ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರೊಟ್ಟಿಗೆ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಆಡಿ ಪ್ರಶಸ್ತಿ ಗೆದ್ದ ಆಟಗಾರ ಕರ್ನಾಟಕದ ಸ್ಟೈಲಿಷ್ ಬ್ಯಾಟ್ಸ್ಮನ್ ಮನೀಶ್ ಪಾಂಡೆ. ಪ್ರತಿಭೆಗೆ ಏನೂ ಕೊರತೆ ಇರದಿದ್ದರೂ, ಅವಕಾಶಗಳ ಕೊರತೆ ಹಾಗೂ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವ ಒತ್ತಡದಲ್ಲಿ ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನ ಗಟ್ಟಿ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅಂದಹಾಗೆ ತಮ್ಮ ನೈಜ ಸಾಮರ್ಥ್ಯವನ್ನು ಹೊರಹಾಕಲು ಪಾಂಡೆ ಅವರಿಗೆ ಸರಿಯಾಗಿ ಅವಕಾಶಗಳು ಲಭ್ಯವಾಗಿಲ್ಲ ಎಂಬುದು ಕೂಡ ಅಷ್ಟೇ ಸತ್ಯ. ಇನ್ನು ಇತ್ತೀಚೆಗಷ್ಟೇ ಅಂತ್ಯಗೊಂಡ ವೆಸ್ಟ್ ಇಂಡೀಸ್ 'ಎ' ವಿರುದ್ಧದ ಸರಣಿಯಲ್ಲೂ ಪಾಂಡೆ ಶತಕ ಬಾರಿಸಿ ಮಿಂಚಿದ್ದಾರೆ. ಈ ಮೂಲಕ ವಿಂಡೀಸ್ ಪ್ರವಾಸಕ್ಕೆ ಪ್ರಕಟಿಸಲಾದ ಟಿ20 ಮತ್ತು ಏಕದಿನದ ತಂಡದಲ್ಲಿ ಪಾಂಡೆಗೆ ಮರಳಿ ಸ್ಥಾನ ಸಿಕ್ಕಿದೆ. 'ಎ' ತಂಡದ ಪರ ರನ್ ಹೊಳೆಯನ್ನೇ ಹರಿಸಿರು ಭರ್ಜರಿ ಫಾರ್ಮ್ನಲ್ಲಿರುವ 29 ವರ್ಷದ ಪಾಂಡೆ ಕೆರಿಬಿಯನ್ ಪ್ರವಾಸದಲ್ಲಿ ಆಯ್ಕೆದಾರರ ಎದುರು ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಸಜ್ಜಾಗಿದ್ದಾರೆ. ಮನೀಶ್ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಗೊಂದಲಕ್ಕೆ ಪರಿಹಾರವಾಗಬಲ್ಲರು ಎಂದೇ ನಿರೀಕ್ಷಿಸಲಾಗಿದೆ.
2. ಶ್ರೇಯಸ್ ಅಯ್ಯರ್ (ಬ್ಯಾಟ್ಸ್ಮನ್)
ಮುಂಬೈನ ಸ್ಟೈಲಿಷ್ ಬ್ಯಾಟ್ಸ್ಮನ್ 24 ವರ್ಷದ ಶ್ರೇಯಸ್ ಅಯ್ಯರ್, ಭಾರತ ತಂಡದ ನಾಲ್ಕನೇ ಕ್ರಮಾಂಕದ ಸ್ಥಿರ ಬ್ಯಾಟ್ಸ್ಮನ್ ಸಮಸ್ಯೆಗೆ ಪರಿಹಾರವಾಗಬಲ್ಲರು ಎಂಬುದು ಟೀಮ್ ಇಂಡಿಯಾದ ಆಯ್ಕೆ ಸಮಿತಿಯ ನಂಬಿಕೆಯಾಗಿದೆ. ಈ ಹಿಂದೆಯೂ ತಮಗೆ ಸಿಕ್ಕಿದ ಅವಕಾಶಗಳಲ್ಲಿ ಹಮನಾರ್ಹ ಪ್ರದರ್ಶನ ನೀಡಿರುವ ಶ್ರೇಯಸ್, ತಂಡದ ಆಡುವ 11ರಲ್ಲಿ ಸ್ಥಾನ ಪಡೆಯಲು ಇರುವ ಪೈಪೋಟಿಯಲ್ಲಿ ಹಿಂದೆ ಉಳಿಯುವಂತಾಗಿತ್ತು. ಆದರೆ, ಇದೀಗ ಅವಕಾಶ ತಾನೇ ಹುಡುಕಿಕೊಂಡು ಬಂದಿರುವಾಗ ನಾಲ್ಕನೇ ಕ್ರಮಾಂಕವನ್ನು ಖಾಯಂ ಆಗಿ ತಮ್ಮದಾಗಿಸಿಕೊಳ್ಳುವ ಕಡೆಗೆ ಶ್ರೇಯಸ್ ಪ್ರಯತ್ನ ನಡೆಸಲಿದ್ದಾರೆ.
3. ಖಲೀಲ್ ಅಹ್ಮದ್ (ಬೌಲರ್)
ಟೀಮ್ ಇಂಡಿಯಾದಲ್ಲಿ ಜಹೀರ್ ಖಾನ್, ಆಶಿಶ್ ನೆಹ್ರಾ ಹಾಗೂ ಇಫ್ರಾನ್ ಪಠಾಣ್ ಅವರ ಬಳಿಕ ಅಷ್ಟು ಪರಿಣಾಮಕಾರಿ ಎಡಗೈ ವೇಗದ ಬೌಲರ್ಗಳು ಬಂದಿಲ್ಲ. ಈ ನಿಟ್ಟಿನಲ್ಲಿ ರಾಜಸ್ಥಾನ ಮೂಲದ ಯುವ ವೇಗಿ ಖಲೀಲ್ ಅಹ್ಮದ್ ಉತ್ತಮ ಆಯ್ಕೆಯಾಗಿದ್ದು, ಭಾರತ ತಂಡದಲ್ಲಿ ಅಗತ್ಯವಿರುವ ಎಡಗೈ ವೇಗದ ಬೌಲರ್ನ ಸ್ಥಾನ ತುಂಬುವ ಸಾಮರ್ಥ್ಯ ಹೊಂದಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ ಒಟಿಐ ಮತ್ತು ಟಿ20 ತಂಡಗಳಲ್ಲಿ ಸ್ಥಾನ ಪಡೆದಿರುವ ಖಲೀಲ್, ವಿಕೆಟ್ ಪಡೆದು ಆಯ್ಕೆದಾರರ ಗಮನ ಸದಾ ತಮ್ಮತ್ತ ಇರುವಂತೆ ಮಾಡುವುದನ್ನು ಎದುರು ನೋಡುತ್ತಿದ್ದಾರೆ. ಉತ್ತಮ ವೇಗದೊಂದಿಗೆ ಚೆಂಡಿಗೆ ಸ್ವಿಂಗ್ ನೀಡಬಲ್ಲ ಸಾಮರ್ಥ್ಯ ಹೊಂದಿರುವ ಖಲೀಲ್ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಭರ್ಜರಿ ಬೌಲಿಂಗ್ ಸಂಘಟಿಸಿದ್ದರು.
4. ನವದೀಪ್ ಸೈನಿ (ಬೌಲರ್)
2013ರ ವರೆಗೆ ಲೆದರ್ಬಾಲ್ ಕ್ರಿಕೆಟ್ನ ಗಂಧ ಗಾಳಿ ಕೂಡ ತಿಳಿಯದ ಹರಿಯಾಣದ ಕರ್ನಾಲ್ ಮೂಲದ ವೇಗದ ಬೌಲರ್ ಇಂದು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಪ್ರಕಟಿಸಲಾದ ಭಾರತದ ಸೀಮಿತ ಓವರ್ಗಳ ಕ್ರಿಕೆಟ್ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ. ಟೆನಿ ಬಾಲ್ ಕ್ರಿಕೆಟ್ ಆಡುತ್ತಾ ದಿನಕ್ಕೆ 200 ರೂ. ಸಂಭಾವನೆ ಪಡೆಯುತ್ತಿದ್ದ ಸ್ಥಳೀಯ ಪ್ರತಿಭೆಯಲ್ಲಿನ ಅದ್ಭುತ ವೇಗವನ್ನು ಗುರುತಿಸಿದ್ದ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಗೌತಮ್ ಗಂಭೀರ್, ನವದೀಪ್ ಸೈನಿಗೆ ದಿಲ್ಲಿ ರಣಜಿ ಕ್ರಿಕೆಟ್ ತಂಡದಲ್ಲಿ ಸ್ಥಾನ ಕೊಡಿಸಿದ್ದರು. 2013-14ರ ಸಾಲಿನಲ್ಲಿ ದಿಲ್ಲಿ ರಣಜಿ ತಂಡದ ಪರ ಆಡಿದ ಸೈನಿ ಬಳಿಕ ತಿರುಗಿ ನೋಡಲಿಲ್ಲ. ಹಂಡೆಗೆ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಸನಿ ಅವರದ್ದು. ಇತ್ತೀಚೆಗೆ ವಿಂಡೀಸ್ 'ಎ' ತಂಡದ ವಿರುದ್ಧದ ಅನಧಿಕೃತ ಏಕದಿನ ಕ್ರಿಕೆಟ್ ಸರಣಿಯ 2ನೇ ಪಂದ್ಯದಲ್ಲಿ 5 ವಿಕೆಟ್ ಕೆಡವಿ ಮಿಂಚಿದ್ದರು. ಅಂತೆಯೇ ಅಧಿಕೃತ ಸರಣಿಯಲ್ಲೂ ಗರ್ಜಿಸಲು ಎದುರು ನೋಡುತ್ತಿದ್ದಾರೆ.
5. ದೀಪಕ್ ಚಹರ್ (ಬೌಲರ್)
ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಮಿಂಚಿನ ಬೌಲಿಂಗ್ ದಾಳಿ ಸಂಘಟಿಸಿ ವಿಕೆಟ್ಗಳನ್ನು ಉರುಳಿಸುತ್ತಿದ್ದ ರಾಜಸ್ಥಾನ ಮೂಲದ ಯುವ ವೇಗಿ ದೀಪಕ್ ಚಹರ್ ಎಲ್ಲರ ಹುಬ್ಬೇರುವಂತೆ ಮಾಡುತ್ತಿದ್ದರು. ವಿಕೆಟ್ ತೆಗೆಯುವ ಸಾಮರ್ಥ್ಯ ಹೊಂದಿರುವ ಪ್ರತಿಭಾನ್ವಿತ ಬೌಲರ್ಗೆ ಭಾರತ ತಂಡದಲ್ಲಿ ಅವಕಾಶ ನೀಡುತ್ತಿಲ್ಲವೇಕೆ ಎಂಬುದು ಹಲವರ ಪ್ರಶ್ನೆಯಾಗಿತ್ತು. ಇದೀಗ ಕೆರಿಬಿಯನ್ ಪ್ರವಾಸಕ್ಕೆ ದೀಪಕ್ ಚಹರ್ ಅವರನ್ನು ಆಯ್ಕೆ ಸಮಿತಿ ಕರೆತಂದಿದೆ. 26 ವರ್ಷದ ವೇಗಿ ಈ ಅವಕಾಶ ಬಳಿಸಿಕೊಂಡು ಮುಂದಿನ ಸರಣಿಗಳಿಗೆ ಆಯ್ಕೆಯಾಗುವ ಲೆಕ್ಕಾಚಾರ ಹೊಂದಿದ್ದಾರೆ. ಉತ್ತಮ ವೇಗ ಮತ್ತು ನೇರ-ನಿಖರತೆಯೊಂದಿಗೆ ಬೌಲಿಂಗ್ ಮಾಡುವುದು ದೀಪಕ್ ಅವರ ವಿಶೇಷತೆ.
6. ರಾಹುಲ್ ಚಹರ್ (ಸ್ಪಿನ್ನರ್)
ಇತ್ತೀಚೆಗೆ ಹಾರ್ದಿಕ್ ಪಾಂಡ್ಯ ಮತ್ತು ಕೃಣಾಲ್ ಪಾಂಡ್ಯ ಸಹೋದರರು ಟೀಮ್ ಇಂಡಿಯಾ ಪರ ಆಡಿದ ಇತ್ತೀಚಿನ ಅಣ್ತಮ್ಮಾಸ್ ಎನಿಸಿಕೊಂಡಿದ್ದರು. ಇದೀಗ ಈ ಪಟ್ಟಿಗೆ ಮತ್ತೊಂದು ಸೋದರರ ಹೆಸರು ಸೇರ್ಪಡೆಯಾಗುವ ಕಾಲ ಹತ್ತಿರವಾಗಿದೆ. ವೇಗದ ಬೌಲರ್ ದೀಪಕ್ ಚಹರ್ ಅವರ ಕಿರಿಯ ಸಹೋದರ ಲೆಗ್ ಸ್ಪಿನ್ನರ್ ರಾಹುಲ್ ಚಹರ್ ವಿಂಡೀಸ್ ಪ್ರವಾಸದಲ್ಲಿನ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದೇ ವರ್ಷ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಪರ ರಾಹುಲ್ ಚಹರ್ ತಮ್ಮ ಗೂಗ್ಲಿ ಮ್ಯಾಜಿಕ್ ಪ್ರದರ್ಶಿಸಿ ಎಲ್ಲರ ಗಮನ ಸೆಳೆದಿದ್ದರು. ಇನ್ನು ಅವರನ್ನು ಹತ್ತಿರದಿಂದ ಬಲ್ಲವರ ಪ್ರಕಾರ ದೀಪಕ್ ಗಿಂತಲೂ ರಾಹುಲ್ ಪರಿಣಾಮಕಾರಿ ಬೌಲರ್ ಎಂದೇ ಹೇಳುತ್ತಾರೆ. ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದರೆ ತಮ್ಮದೇ ಛಾಪನ್ನು ಮೂಡಿಸುವ ತುಡಿತ 19 ವರ್ಷದ ಯುವ ಸ್ಪಿನ್ ಬೌಲರ್ನದ್ದು.