ಮೊಹಮ್ಮದ್ ಶಮಿಗೆ ಉನಾದ್ಕಟ್ ಬದಲಿ ಆಟಗಾರ
ಗಾಯದಿಂದಾಗಿ ಬಾಂಗ್ಲಾದೇಶ ಪ್ರವಾಸದಿಂದ ಹೊರಗುಳಿದಿರುವ ಮೊಹಮ್ಮದ್ ಶಮಿ ಬದಲಿಗೆ ಟೆಸ್ಟ್ ಸರಣಿಯಲ್ಲಿ ಅನುಭವಿ ವೇಗಿ ಜಯ್ದೇವ್ ಉನಾದ್ಕಟ್ ಸ್ಥಾನವನ್ನು ಪಡೆದುಕೊಳ್ಳಲಿದ್ದಾರೆ. ಈಗಾಗಲೇ ಭಾರತ ತಂಡದ ಕರೆ ಸ್ವೀಕರಿಸಿರುವ ಉನಾದ್ಕಟ್ ಶೀಘ್ರದಲ್ಲಿಯೇ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಬಿಸಿಸಿಐ ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಮಾಡಬೇಕಿದ್ದು ಬಿಸಿಸಿಐ ಮೂಲಗಳು ಈ ಬಗ್ಗೆ ಪಿಟಿಐಗೆ ಮಾಹಿತಿ ನೀಡಿದೆ.
ದೇಶೀಯ ಕ್ರಿಕೆಟ್ನಲ್ಲಿ ಮಿಂಚುತ್ತಿರುವ ಉನಾದ್ಕಟ್
ಜಯ್ದೇವ್ ಉನಾದ್ಕಟ್ ಐಪಿಎಲ್ ಹಾಗೂ ದೇಶೀಯ ಕ್ರಿಕೆಟ್ನಲ್ಲಿ ಸಕ್ರಿಯವಾಗಿದ್ದು ಸತತವಾಗಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ಸೌರಾಷ್ಟ್ರ ತಂಡದ ನಾಯಕನಾಗಿ ಮುನ್ನಡೆಸುತ್ತಿದ್ದು ವಿಜಯ್ ಹಜಾರೆ ಟೂರ್ನಿಯಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಈ ಆವೃತ್ತಿಯ ಟೂರ್ನಿಯಲ್ಲಿ 10 ಪಂದ್ಯಗಳಲ್ಲಿ 19 ವಿಕೆಟ್ ಪಡೆದು ಮಿಂಚಿದ್ದಾರೆ. ಸದ್ಯ ರಾಜ್ಕೋಟ್ನಲ್ಲಿದ್ದು ವಿಸಾ ಪ್ರಕ್ರಿಯೆ ಮುಗಿದ ಬಳಿಕ ಬಾಂಗ್ಲಾದೇಶಕ್ಕೆ ಪ್ರಯಾಣಿಸಿ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಮೊಹಮ್ಮದ್ ಶಮಿ ಭುಜದ ನೋವಿಗೆ ತುತ್ತಾದ ಕಾರಣ ಈ ಸರಣಿಯಿಂದ ಹೊರಗುಳಿದಿದ್ದು ಉನಾದ್ಕಟ್ಗೆ ಇದು ಸುದೀರ್ಘ ಕಾಲದ ಬಳಿಕ ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ಅವಕಾಶ ದೊರೆಯಲು ಕಾರಣವಾಗಿದೆ.
BAN vs IND 2022: 3ನೇ ಏಕದಿನ ಪಂದ್ಯದಲ್ಲಿ ಬ್ರೇಕ್ ಆಗಬಹುದಾದ 3 ದಾಖಲೆಗಳು
2010ರಲ್ಲಿ ಏಕೈಕ ಟೆಸ್ಟ್ ಪಂದ್ಯ ಆಡಿದ್ದ ಉನಾದ್ಕಟ್
ಜಯ್ದೇವ್ ಉನಾದ್ಕಟ್ ತಮ್ಮ ಏಕೈಕ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವನ್ನು 2010ರಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸೆಂಚೂರಿಯನ್ನಲ್ಲಿ ಆಡಿದ್ದರು. ಅದಾದ ಬಳಿಕ 7 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಅವಕಾಶ ಪಡೆದುಕೊಂಡ ಇವರು 10 ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿಯೂ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆದುಕೊಂಡಿದ್ದರು. ಆದರೆ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಭದ್ರಪಡಿಸಲು ಸಾಧ್ಯವಾಗಿರಲಿಲ್ಲ.
ಭಾರತಕ್ಕೆ ಕಾಡುತ್ತಿದೆ ಗಾಯದ ಸಮಸ್ಯೆ
ಇನ್ನು ಬಾಂಗ್ಲಾದೇಶ ಪ್ರವಾಸ ಕೈಗೊಂಡಿರುವ ಭಾರತ ತಂಡಕ್ಕೆ ಗಾಯದ ಸಮಸ್ಯೆ ಕಾಡುತ್ತಿದೆ. ಈಗಾಗಲೇ ಗಾಯದ ಕಾರಣದಿಮದಾಗಿ ಜಸ್ಪ್ರೀತ್ ಬೂಮ್ರಾ, ರವೀಂದ್ರ ಜಡೇಜಾ ಅವರಂತಾ ಪ್ರಮುಖ ಆಟಗಾರರಿಲ್ಲದೆ ಬಾಂಗ್ಲಾದೇಶಕ್ಕೆ ಭಾರತ ಪ್ರವಾಸ ಕೈಗೊಂಡಿತ್ತು. ಬಳಿಕ ಮೊಹಮ್ಮದ್ ಶಮಿ, ನಾಯಕ ರೋಹಿತ್ ಶರ್ಮಾ, ದೀಪಕ್ ಚಹರ್ ಹಾಗೂ ಕುಲ್ದೀಪ್ ಸೇನ್ ಗಾಯಗೊಂಡಿದ್ದಾರೆ. ಟೆಸ್ಟ್ ತಂಡದಲ್ಲಿ ರೋಹಿತ್ ಶರ್ಮಾ ಕಣಕ್ಕಿಳಿಯುವ ಬಗ್ಗೆ ಇನ್ನೂ ಸ್ಪಷ್ಟತೆಗಳು ದೊರೆತಿಲ್ಲ.