ನಾಲ್ವರು ವೇಗಿಗಳೊಂದಿಗೆ ಕಣಕ್ಕೆ
ಈ ಬಾರಿಯ ಇಂಗ್ಲೆಂಡ್ ಸರಣಿಯಲ್ಲಿ ಭಾರತ ನಾಲ್ಕು ವೇಗಿಗಳು ಹಾಗೂ ಓರ್ವ ಸ್ಪಿನ್ನರ್ ಕಣಕ್ಕಿಳಿಯುವ ನಿರ್ಧಾರವನ್ನು ಮಾಡಿದ್ದು. ಟೀಮ್ ಇಂಡಿಯಾದ ಈ ನಿರ್ಧಾರದಿಂದಾಗಿ ತಂಡ ಯಶಸ್ಸನ್ನು ಕೂಡ ಸಾಧಿಸಿದೆ. ಇಂಗ್ಲೆಂಡ್ನ ನೆಲದಲ್ಲಿ ಭಾರತೀಯ ವೇಗಿಗಳು ಉತ್ತಮ ಆಟವನ್ನು ಪ್ರದರ್ಶಿಸುವ ಮೂಲಕ ಹೆಚ್ಚುನ ಸಂದರ್ಭದಲ್ಲಿ ಮೇಲುಗೈ ಒದಗಿಸಿದ್ದಾರೆ. ಮೊದಲ ಪಂದ್ಯದಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದ ಶಾರ್ದೂಲ್ ಠಾಕೂರ್ ಎರಡನೇ ಪಂದ್ಯಕ್ಕೂ ಮುನ್ನ ಗಾಯಗೊಂಡ ಕಾರಣದಿಂದಾಗಿ ಇಶಾಂತ್ ಶರ್ಮಾ ಎರಡನೇ ಪಂದ್ಯದಲ್ಲಿ ಆಡುವ ಅವಕಾಶ ಪಡೆದರು. ಈ ಅವಕಾಶವನ್ನು ಬಳಸಿಕೊಂಡ ಶರ್ಮಾ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ಮಿಂಚಿದ್ದರು. ಲಾರ್ಡ್ಸ್ ಅಂಗಳದಲ್ಲಿ ಟೀಮ್ ಇಂಡಿಯಾ ಎರಡನೇ ಪಂದ್ಯವನ್ನು ಗೆದ್ದು ಬೀಗಿತ್ತು. ಹೀಗಾಗಿ ನಾಲ್ಕನೇ ಪಂದ್ಯದಲ್ಲಿ ಯಾವುದೇ ಬದಲಾವನೆ ಮಾಡದೆಯೇ ತಂಡವನ್ನು ಉಳಿಸಿಕೊಂಡಿದ್ದರು ನಾಯಕ ವಿರಾಟ್ ಕೊಹ್ಲಿ
ಬದಲಾವಣೆಯ ಸುಳಿವು ನೀಡಿದ ಕೊಹ್ಲಿ
ಇನ್ನು ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡ ಬಳಿಕ ನಾಯಕ ವಿರಾಟ್ ಕೊಹ್ಲಿ ಮಾಧ್ಯಮ ಸಂವಾದಲ್ಲಿ ಭಾಗಿಯಾಗಿ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಬದಲಾವನೆ ಮಾಡುವ ಸುಳಿವನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಆಟಗಾರರ ಮೇಲಿರುವ ವರ್ಕ್ಲೋಡ್ಅನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದಾಗಿ ತಿಳಿಸಿದ್ದರು. ವಿರಾಟ್ ಕೊಹ್ಲಿ ಆಡಿದ ಈ ಮಾತು ತಂಡದ ಅನುಭವಿ ಆಟಗಾರನಾಗಿರುವ ಇಶಾಂತ್ ಶರ್ಮಾಗೆ ವಿಶ್ರಾಂತಿ ನೀಡುವ ಸುಳಿವನ್ನು ನೀಡುತ್ತಿದೆ. ಈ ಮೂಲಕ ಓವಲ್ ಮೈದಾನದಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ನಲ್ಲಿ ಇಶಾಂತ್ ಶರ್ಮಾ ಆಡಲಿಳಿಯುವುದು ಅನುಮಾನವೆನಿಸಿದೆ.
ಇಶಾಂತ್ ಶರ್ಮಾ ಹೊರಗುಳಿಯುವುದು ನಿಶ್ಚಿತ!
ಇನ್ನು ಟೀಮ್ ಇಂಡಿಯಾದ ಅನುಭವಿ ವೇಗಿಯಾಗಿರುವ ಇಶಾಂತ್ ಶರ್ಮಾ ಹೆಡಿಂಗ್ಲೆಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಹೊಸ ಚೆಂಡಿನೊಂದಿಗೆ ಕಣಕ್ಕಿಳಿದಿದ್ದರು. ಆದರೆ ಇಶಾಂತ್ ಶರ್ಮಾ ಹೆಡಿಂಗ್ಲೆ ಅಂಗಳದಲ್ಲಿ ಪರಿಣಾಮಕಾರಿಯಾಗಿರಲಿಲ್ಲ. ಒಂದೇ ಒಂದು ವಿಕೆಟ್ ಪಡೆಯಲು ಕೂಡ ಇಶಾಂತ್ ಶರ್ಮಾಗೆ ಸಾಧ್ಯವಾಗಿರಲಿಲ್ಲ. ಅಲ್ಲದೆ 4.20 ಎಕಾನಮಿಯಲ್ಲಿ ಶರ್ಮಾ ರನ್ ಬಿಟ್ಟುಕೊಟ್ಟಿದ್ದರು. ಹೀಗಾಗಿ ಸರಣಿ ನಿರರ್ಣಾಯಕ ಘಟ್ಟಕ್ಕೆ ಬಂದಿರುವ ಈ ಸಂದರ್ಭದಲ್ಲಿ ಇಶಾಂತ್ ಶರ್ಮಾಗೆ ವಿಶ್ರಾಂತಿ ನೀಡುವ ಸಾಧ್ಯತೆ ಹೆಚ್ಚಿದೆ.
ಆರ್ ಅಶ್ವಿನ್ಗೆ ಅವಕಾಶ ದೊರೆಯುವ ಸಾಧ್ಯತೆ
ಇನ್ನು ಭಾರತದ ಅನುಭವಿ ಸ್ಪಿನ್ನರ್ ಆಗಿರುವ ಆರ್ ಅಶ್ವಿನ್ ಅಚ್ಚರಿಯೆಂಬಂತೆ ಈ ಬಾರಿಯ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆರಂಭಿಕ ಮೂರು ಪಂದ್ಯಗಳಲ್ಲಿಯೂ ಆರ್ ಅಶ್ವಿನ್ ಆಡುವ ಅವಕಾಶವನ್ನು ಪಡೆಯುವಲ್ಲಿ ವಿಫಲವಾಗಿದ್ದಾರೆ. ಆರ್ ಅಶ್ವಿನ್ಗೆ ಅವಕಾಶ ನೀಡಬೇಕೆಂದಯ ಟೀಮ್ ಇಂಡಿಯಾ ಅಭಿಮಾನಿಗಳು ಹಾಗೂ ಅನೇಕ ವಿಶ್ಲೇಷಕರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆದರೆ ಟೀಮ್ ಮ್ಯಾನೇಜ್ಮೆಂಟ್ ಈ ಬಗ್ಗೆ ಒಲವು ವ್ಯಕ್ತಪಡಿಸಿರಲಿಲ್ಲ. ಆದರೆ ಅಂತಿಮ ಎರಡು ಪಂದ್ಯಗಳಿರುವವಾಗ ಆರ್ ಅಶ್ವಿನ್ಗೆ ಆಡುವ ಅವಕಾಶ ದೊರೆಯುವ ಸಾಧ್ಯತೆ ಹೆಚ್ಚಿದೆ. ಬೌಲಿಂಗ್ನಲ್ಲಿ ಹಾಗೂ ಬ್ಯಾಟಿಂಗ್ ಎರಡಲ್ಲಿಯೂ ಕೊಡುಗೆ ನೀಡುವ ಸಾಮರ್ಥ್ಯವನ್ನು ಹೊಂದಿರುವ ಅಶ್ವಿನ್ ತಂಡಕ್ಕೆ ಹೆಚ್ಚಿನ ಬಲ ನೀಡುವುದರಲ್ಲಿ ಅನುಮಾನವಿಲ್ಲ.
ಕೌಂಟಿಯಲ್ಲಿ ಆಡಿ ಸಿದ್ಧತೆ ನಡೆಸಿದ್ದ ಆರ್ ಅಶ್ವಿನ್
ಇನ್ನು ಟೀಮ್ ಇಂಡಿಯಾದ ಈ ಅನುಭವಿ ಆಟಗಾರ ಈ ಸರಣಿಯ ಆರಂಭಕ್ಕೂ ಮುನ್ನ ಸುದೀರ್ಘ ವಿಶ್ರಾಂತಿಯ ಅವಧಿಯನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ. ಇಂಗ್ಲೆಂಡ್ನಲ್ಲಿ ಕೌಂಟಿ ಕ್ರಿಕೆಟ್ನಲ್ಲಿ ಆಡುವ ಮೂಲಕ ಆರ್ ಅಶ್ವಿನ್ ಸರಣಿಗೆ ಸಿದ್ಧತೆನ್ನು ನಡೆಸಿದ್ದರು. ಸಸ್ಸೆಕ್ಸ್ ತಂಡದ ಪರವಾಗಿ ಆರ್ ಅಶ್ವಿನ್ ಆಡಿ ಉತ್ತಮ ತಯಾರಿಯನ್ನು ನಡೆಸಿದ್ದಾರೆ. ಇನ್ನು ಇಂಗ್ಲೆಂಡ್ ತಂಡದ ವಿರುದ್ಧ ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ನಡೆದಿದ್ದ ಸರಣಿಯಲ್ಲಿಯೂ ಆರ್ ಅಶ್ವಿನ್ ಅದ್ಭುತವಾದ ಪ್ರದರ್ಶನ ನೀಡಿ ಮಿಂಚಿದ್ದರು. ಸರಣಿಯಲ್ಲಿ ಒಟ್ಟು 32 ವಿಕೆಟ್ ಪಡೆಯುವ ಮೂಲಕ ಆರ್ ಅಶ್ವಿನ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ತನ್ನ ಎಸೆತದಲ್ಲಿರುವ ಹೆಚ್ಚಿನ ವೇಗ ಹಾಗೂ ಸ್ಪಿನ್ ಮೂಲಕ ಎದುರಾಳಿ ಪಾಲಿಗೆ ಅಪಾಕಾರಿಯಾಗಬಲ್ಲ ಸಾಮರ್ಥ್ಯವನ್ನು ಅಶ್ವಿನ್ ಹೊಂದಿದ್ದಾರೆ. ಇದರ ಜೊತೆಗೆ ಬ್ಯಾಟಿಂಗ್ನಲ್ಲಿಯೂ ಅನಿವಾರ್ಯ ಸಂದರ್ಭಗಳಲ್ಲಿ ಕೆಚ್ಚೆದೆಯ ಪ್ರದರ್ಶನ ನೀಡುವ ಮೂಲಕ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ನಲ್ಲಿಯೂ ತಂಡಕ್ಕೆ ನೆರವಾಗಬಲ್ಲರು.
ತಂಡದ ಸಂಯೋಜನೆಯ ಸವಾಲು
ಟೀಮ್ ಇಂಡಿಯಾದಲ್ಲಿ ನಾಲ್ಕನೇ ಟೆಸ್ಟ್ನಲ್ಲಿ ತಂಡದಲ್ಲಿ ಯಾವ ರೀತಿಯ ಸಂಯೋಜನೆಯೊಂದಿಗೆ ಕಣಕ್ಕಿಳಿಯಬೇಕು ಎಂಬುದು ದೊಡ್ಡ ಸವಾಲಾಗಿದೆ. ಪ್ರಮುಖವಾಗಿ ನಾಲ್ವರು ವೇಗಿಗಳು ಹಾಗೂ ಓರ್ವ ಸ್ಪಿನ್ನರ್ ಜೊತೆಗೆ ಕಣಕ್ಕಿಳಿಯಬೇಕಾ ಅಥವಾ ಇಬ್ಬರು ಸ್ಪಿನ್ನರ್ ಹಾಗೂ ಮೂವರು ವೇಗಿಗಳೊಂದಿಗೆ ಕಣಕ್ಕಿಳಿಬೇಕಾ ಎಂಬುದು ತಂಡದ ಮುಂದಿರುವ ದೊಡ್ಡ ಸವಾಲು. ಇನ್ನು ಭಾರತದ ಬ್ಯಾಟಿಂಗ್ನಲ್ಲಿ ವೈಫಲ್ಯ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಐವರು ಬೌಲರ್ಗಳ ಬದಲಿಗೆ ಹೆಚ್ಚುವರಿ ಬ್ಯಾಟ್ಸ್ಮನ್ನನ್ನು ಆಡುವ ಬಳಗಕ್ಕೆ ಸೇರಿಸಿಕೊಳ್ಳಬೇಕು ಎಂಬ ಅಭಿಪ್ರಾಯಗಳು ಕೂಡ ಜೋರಾಗಿ ವ್ಯಕ್ತವಾಗುತ್ತಿದೆ. ಹೀಗಾಗಿ ತಂಡದ ಆಯ್ಕೆಯ ಬಗ್ಗಡ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಮೂಡಿಸಿದೆ.