ಭಾರತ vs ಶ್ರೀಲಂಕಾ 1st ಟಿ20: ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯುವ ಸೂಚನೆ ನೀಡಿದ ಧವನ್

ಕೊಲಂಬೋ, ಜುಲೈ 25: ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಟಿ20 ಸರಣಿಯ ಮೊದಲ ಪಂದ್ಯ ಇಂದು ಕೊಲಂಬೋದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ತಂಡದ ಆಡುವ ಬಳಗ ಹೇಗಿರಲಿದೆ ಎಂಬುದು ಎಲ್ಲರ ಕುತೂಹಲವಾಗಿದೆ. ಈ ವಿಚಾರವಾಗಿ ಟೀಮ್ ಇಂಡಿಯಾ ನಾಯಕ ಶಿಖರ್ ಧವನ್ ಪ್ರತಿಕ್ರಿಯೆ ನೀಡಿದ್ದಾರೆ.
ಟಿ20 ಸರಣಿಯ ಪ್ರಥಮ ಪಂದ್ಯದಲ್ಲಿ ಭಾರತ ತನ್ನ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯಲಿದೆ ಎಂಬುದಾಗಿ ಶಿಖರ್ ಧವನ್ ಹೇಳಿದ್ದಾರೆ. ನಮ್ಮ ಮೊದಲ ಆದ್ಯತೆ ಸರಣಿಯನ್ನು ಜಯಿಸುವುದಾಗಿದೆ. ಹೀಗಾಗಿ ಬಲಿಷ್ಠ ಆಟಗಾರರ ತಂಡ ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿದೆ ಎಂದಿದ್ದಾರೆ. ಈ ಮೂಲಕ ಯುವ ಆಟಗಾರರಾದ ದೇವದತ್ ಪಡಿಕ್ಕಲ್, ಋತುರಾಜ್ ಗಾಯಕ್ವಾಡ್ ವರುಣ್ ಚಕ್ರವರ್ತಿ ಅವರನ್ನು ಮೊದಲ ಬಾರಿಗೆ ಕಣಕ್ಕಿಳಿಸುವ ಮೂಲಕ ಪ್ರಯೋಗಕ್ಕೆ ಮುಂದಾಗಲು ಆರಂಭದಲ್ಲಿಯೇ ಬಯಸುವುದಿಲ್ಲ ಎಂಬುದನ್ನು ಶಿಖರ್ ಧವನ್ ಪರೋಕ್ಷವಾಗಿ ಹೇಳಿದ್ದಾರೆ.

ಏಕದಿನ ಸರಣಿಯಲ್ಲಿ ಅವಕಾಶ
"ಹೊಸ ಆಟಗಾರರಿಗೆ ಖಂಡಿತವಾಗಿಯೂ ಆಡುವ ಅವಕಾಶಗಳು ದೊರೆಯಲಿದೆ. ಆದರೆ ನಾವು ಸರಣಿಯನ್ನು ಗೆಲ್ಲಲೇಬೇಕಿದೆ. ಅಂತಿಮ ಏಕದಿನ ಪಂದ್ಯದಲ್ಲಿ ನಮಗೆ ಕೆಲ ಹೊಸ ಆಟಗಾರರಿಗೆ ಅವಕಾಶ ನೀಡುವ ಸಂದರ್ಭ ದೊರೆತಿತ್ತು. ಈ ಮೂಲಕ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡುವ ಅನುಭವನ್ನು ಪಡೆದುಕೊಂಡರು, ಯಾಕೆಂದರೆ ನಾವು ಅದಾಗಲೇ ಸರಣಿಯನ್ನು ಗೆದ್ದಾಗಿತ್ತು" ಎಂದು ಶಿಖರ್ ಧವನ್ ಹೇಳಿದ್ದಾರೆ.

ಆರಂಭದ ಎರಡು ಪಂದ್ಯಗಳಲ್ಲ ಗೆಲ್ಲಬೇಕಿದೆ
"ಈಗ ಇದು ಮತ್ತೊಂದು ಹೊಸ ಸರಣಿಯಾಗಿದೆ. ಹೀಗಾಗಿ ನಾವು ಆರಂಭದಲ್ಲಿ ನಮ್ಮ ಅತ್ಯುತ್ತಮ ಆಡುವ ಬಳಗದ ಮೂಲಕ ಕಣಕ್ಕಿಳಿಯಲಿದ್ದೇವೆ. ಆರಂಭಿಕ ಎರಡು ಪಂದ್ಯಗಳನ್ನು ಗೆಲ್ಲಲು ನಾವು ಪ್ರಯತ್ನಿಸುತ್ತೇವೆ. ಬಳಿಕ ಪರಿಸ್ಥಿತಿಯನ್ನು ನೋಡಿಕೊಂಡು ಅಂತಿಮ ಪಂದ್ಯದಲ್ಲಿ ಹೊಸ ಆಟಗಾರರಿಗೆ ಅವಕಾಶವನ್ನು ನೀಡುತ್ತೇವೆ" ಎಂದಿದ್ದಾರೆ ಶಿಖರ್ ಧವನ್.

ಯುವ ಆಟಗಾರರು ಕಣಕ್ಕಿಳಿಯಲು ಸಜ್ಜು
"ಯುವ ಆಟಗಾರರು ಪಂದ್ಯವನ್ನಾಡಲು ಖಂಡಿತಾ ಸಜ್ಜಾಗಿದ್ದಾರೆ. ಅದೇ ಕಾರಣಕ್ಕಾಗಿ ಅವರು ಈ ಪ್ರವಾಸಕ್ಕೆ ಆಗಮಿಸಿದ್ದಾರೆ. ನೀವು ನೋಡಿದಂತೆಯೇ ಯುವ ಆಟಗಾರರು ಏಕದಿನ ಸರಣಿಯಲ್ಲಿ ಅದ್ಭುತವಾದ ಪ್ರದರ್ಶನ ನೀಡಿದ್ದಾರೆ. ಆ ಆತ್ಮವಿಶ್ವಾಸವನ್ನು ನಾವು ಟಿ20 ಸರಣಿಯಲ್ಲಿಯೂ ಮುಂದುವರಿಸುತ್ತೇವೆ" ಎಂದಿದ್ದಾರೆ ಶಿಖರ್ ಧವನ್.

ಭಾರತದ ಸಂಭಾವ್ಯ ತಂಡ
ಪೃಥ್ವಿ ಶಾ, ಶಿಖರ್ ಧವನ್(ನಾಯಕ), ಇಶಾನ್ ಕಿಶನ್/ಸಂಜು ಸ್ಯಾಮ್ಸನ್( ವಿಕೆಟ್ ಕೀಪರ್), ಸೂರ್ಯ ಕುಮಾರ್ ಯಾದವ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ದೀಪಕ್ ಚಹರ್, ಯುಜುವೇಂದ್ರ ಚಾಹಲ್, ಚೇತನ್ ಸಕರಿಯಾ, ಭುವನೇಶ್ವರ್ ಕುಮಾರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications